ಕರ್ನಾಟಕ

karnataka

ಸಂಸತ್​ ಭವನ ಉದ್ಘಾಟನೆ ಬಹಿಷ್ಕಾರ: ವಿಪಕ್ಷಗಳಿಗೆ ಪ್ರಧಾನಿ ಮೋದಿ ಪರೋಕ್ಷ ತರಾಟೆ

ಹೊಸ ಸಂಸತ್​ ಭವನ ಉದ್ಘಾಟನೆಗೆ ಬಹಿಷ್ಕಾರ ಹಾಕಿರುವ ಕಾಂಗ್ರೆಸ್​ ಸೇರಿದಂತೆ 21 ವಿಪಕ್ಷಗಳ ನಡೆಯನ್ನು ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಟೀಕಿಸಿದ್ದಾರೆ.

By

Published : May 25, 2023, 1:50 PM IST

Published : May 25, 2023, 1:50 PM IST

ವಿಪಕ್ಷಗಳಿಗೆ ಪ್ರಧಾನಿ ಮೋದಿ ಪರೋಕ್ಷ ತರಾಟೆ
ವಿಪಕ್ಷಗಳಿಗೆ ಪ್ರಧಾನಿ ಮೋದಿ ಪರೋಕ್ಷ ತರಾಟೆ

ನವದೆಹಲಿ:ಆಸ್ಟ್ರೇಲಿಯಾದಲ್ಲಿ ನಡೆಯುವ ಭಾರತೀಯ ಕಾರ್ಯಕ್ರಮದಲ್ಲಿ ಅಲ್ಲಿನ ಪ್ರಧಾನಿ ಆ್ಯಂಟೊನಿ ಅಲ್ಬನೀಸ್, ಮಾಜಿ ಪ್ರಧಾನಿ, ಆಡಳಿತ ಮತ್ತು ವಿಪಕ್ಷ ಸಂಸದರು ಭಾಗವಹಿಸಿದ್ದರು. ಇದು ಸಂತೋಷಕರ ಸಂಗತಿ ಎಂದು ಹೇಳುವ ಮೂಲಕ, ಮೇ 28 ರಂದು ನಡೆಯಲಿರುವ ಹೊಸ ಸಂಸತ್ ಭವನದ ಉದ್ಘಾಟನೆಗೆ ಬಹಿಷ್ಕಾರ ಹಾಕಿರುವ ವಿರೋಧ ಪಕ್ಷಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಜಪಾನ್​, ಪಪುವಾ ನ್ಯೂಗಿನಿ, ಆಸ್ಟ್ರೇಲಿಯಾ ದೇಶಗಳ ಪ್ರವಾಸ ಮುಗಿಸಿ ದೇಶಕ್ಕೆ ವಾಪಸಾಗಿರುವ ಪ್ರಧಾನಿ ಮೋದಿ ಗುರುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಆಸ್ಟ್ರೇಲಿಯಾದಲ್ಲಿ ಭಾರತೀಯ ಸಮುದಾಯದ ಕಾರ್ಯಕ್ರಮದಲ್ಲಿ ಅಲ್ಲಿನ ಪ್ರಧಾನಿ ಭಾಗಹಿಸಿದ್ದರು. ಇದು ನಮಗೆ ಹೆಮ್ಮೆಯ ಸಂಗತಿ. ಇದಷ್ಟೇ ಅಲ್ಲ, ಕಾರ್ಯಕ್ರಮದಲ್ಲಿ ದೇಶದ ಮಾಜಿ ಪ್ರಧಾನಿ, ವಿರೋಧ ಪಕ್ಷಗಳ ಸಂಸದರು ಮತ್ತು ಆಡಳಿತ ಪಕ್ಷಗಳ ಸಂಸದರೂ ಭಾಗವಹಿಸಿದ್ದರು. ಇದಾಗಿದ್ದು ಮೋದಿಯ ಖ್ಯಾತಿಯಿಂದಲ್ಲ, 140 ಕೋಟಿ ಭಾರತೀಯರ ಪ್ರಯತ್ನ ಮತ್ತು ಸ್ಪೂರ್ತಿ ಕಾರಣ ಎಂದು ಬಣ್ಣಿಸಿದರು.

ಇದು ನಿಜವಾದ ಪ್ರಜಾಪ್ರಭುತ್ವದ ಶಕ್ತಿ. ನಮ್ಮದಲ್ಲದ ಕಾರ್ಯಕ್ರಮಕ್ಕೆ ಗಣ್ಯರು ಬರುವುದು ಹೆಮ್ಮೆಯ ಸಂಗತಿ, ನಮ್ಮದೇ ಕಾರ್ಯಕ್ರಮವನ್ನು ಕೆಲವರು ಬಹಿಷ್ಕರಿಸುವುದು ತರವಲ್ಲ ಎಂದು ಹೇಳಿದರು. ಕಾಂಗ್ರೆಸ್ ಸೇರಿದಂತೆ 21 ವಿರೋಧ ಪಕ್ಷಗಳು ಹೊಸ ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸಲು ನಿರ್ಧರಿಸಿದ ಒಂದು ದಿನದ ನಂತರ ಪ್ರಧಾನಿಯವರು ಈ ಹೇಳಿಕೆ ನೀಡಿರುವುದು ಮಹತ್ವದ್ದಾಗಿದೆ.

ದೇವಾಲಯಗಳ ಮೇಲೆ ದಾಳಿ ಸಹಿಸಲ್ಲ:ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯ ಶ್ರೇಷ್ಠವಾಗಿದೆ. ಗುಲಾಮಗಿರಿಯ ಮನಸ್ಥಿತಿಯಲ್ಲಿ ಮುಳುಗಬೇಡಿ. ದೇಶ, ವಿದೇಶಗಳಲ್ಲಿ ನಮ್ಮ ಪೂಜಾ ಸ್ಥಳಗಳ ಮೇಲಿನ ದಾಳಿಗಳನ್ನು ಸಹಿಸಲಾಗದು. ಇದನ್ನು ನಾನು ಹೇಳಿದಾಗ ಜಗತ್ತೇ ಒಪ್ಪುತ್ತದೆ. ಇದಕ್ಕೆ ಬೆಂಬಲವೂ ಇದೆ ಎಂದು ಪ್ರಧಾನಿ ಹೇಳಿದರು.

ವಿಪಕ್ಷಗಳ ಬಗ್ಗೆ ಗೇಲಿ:ಕೋವಿಡ್​ ಸಾಂಕ್ರಾಮಿಕದ ವೇಳೆ ಲಸಿಕೆಗಳನ್ನು ವಿದೇಶಗಳಿಗೆ ರಫ್ತು ಮಾಡಿದ ನಿರ್ಧಾರವನ್ನು ವಿರೋಧಿಸಿದ್ದಕ್ಕಾಗಿ ವಿರೋಧ ಪಕ್ಷಗಳನ್ನು ಗೇಲಿ ಮಾಡಿದ ಪ್ರಧಾನಿ, "ಬಿಕ್ಕಟ್ಟಿನ ಸಮಯದಲ್ಲಿ ಮೋದಿ ಜಗತ್ತಿಗೆ ಏಕೆ ಲಸಿಕೆಗಳನ್ನು ನೀಡುತ್ತಿದ್ದಾರೆ ಎಂದು ಕೇಳಿದವರೇ, ನೆನಪಿಡಿ. ಇದು ಬುದ್ಧನ ನಾಡು, ಗಾಂಧಿಯ ನಾಡು. ನಾವು ನಮ್ಮ ಶತ್ರುಗಳ ಬಗ್ಗೆಯೂ ಮೃದುತ್ವ ವಹಿಸುತ್ತೇವೆ. ನಾವು ಸಹಾನುಭೂತಿ ಪ್ರೇರಿತ ಜನರು. ಇದೇ ನಮ್ಮನ್ನು ಮುಂದೆ ಸಾಗುವಂತೆ ಮಾಡುತ್ತದೆ ಎಂದು ಹೇಳಿದರು.

ಹೊಸ ಸಂಸತ್​ ಉದ್ಘಾಟನೆ ಬಹಿಷ್ಕಾರ:ಮೇ 28 ರಂದು ಪ್ರಧಾನಿ ಮೋದಿ ಅವರಿಂದ ಉದ್ಘಾಟನೆಯಾಗಲಿರುವ ಹೊಸ ಸಂಸತ್ ಭವನ ವಿಚಾರವಾಗಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಮತ್ತು ಬಿಜೆಪಿ ನಡುವೆ ಮಾತಿನ ಸಮರ ನಡೆದಿದೆ. 19 ಸಮಾನ ಮನಸ್ಕ ಪಕ್ಷಗಳು ಜಂಟಿಯಾಗಿ ಸಂಸತ್​ ಉದ್ಘಾಟನೆಯನ್ನು ಬಹಿಷ್ಕರಿಸಿವೆ. ಅಸಾದುದ್ದೀನ್​ ಓವೈಸಿಯ ಎಐಎಂಐಎಂ ಪಕ್ಷ ಮತ್ತು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್​ರಾವ್​ ಅವರ ಬಿಆರ್​ಎಸ್​ ಪಕ್ಷ ಮಾತ್ರ ಪ್ರತ್ಯೇಕವಾಗಿ ಪ್ರತಿಭಟನೆ ಸಲ್ಲಿಸಿವೆ.

ಸಂಸತ್​ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಬದಲಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಉದ್ಘಾಟನೆ ಮಾಡಿಸಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ. ಆದರೆ, ಕಾಂಗ್ರೆಸ್​ ಅಧಿಕಾರವಧಿಯಲ್ಲಿನ ಉದ್ಘಾಟನೆಗಳನ್ನು ಉದಾಹರಿಸಿ ಬಿಜೆಪಿ ಕಾಂಗ್ರೆಸ್​ ಸೇರಿದಂತೆ ವಿಪಕ್ಷಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದೆ.

ಇದನ್ನೂ ಓದಿ:ಹೊಸ ಸಂಸತ್​ ಭವನ ಉದ್ಘಾಟನೆಗೆ ಬಹಿಷ್ಕಾರ ವಿಚಾರ: ಇದು ಕಾಂಗ್ರೆಸ್ ಬೂಟಾಟಿಕೆ ಎಂದ ಬಿಜೆಪಿ

ABOUT THE AUTHOR

...view details