ನವದೆಹಲಿ:ಆಸ್ಟ್ರೇಲಿಯಾದಲ್ಲಿ ನಡೆಯುವ ಭಾರತೀಯ ಕಾರ್ಯಕ್ರಮದಲ್ಲಿ ಅಲ್ಲಿನ ಪ್ರಧಾನಿ ಆ್ಯಂಟೊನಿ ಅಲ್ಬನೀಸ್, ಮಾಜಿ ಪ್ರಧಾನಿ, ಆಡಳಿತ ಮತ್ತು ವಿಪಕ್ಷ ಸಂಸದರು ಭಾಗವಹಿಸಿದ್ದರು. ಇದು ಸಂತೋಷಕರ ಸಂಗತಿ ಎಂದು ಹೇಳುವ ಮೂಲಕ, ಮೇ 28 ರಂದು ನಡೆಯಲಿರುವ ಹೊಸ ಸಂಸತ್ ಭವನದ ಉದ್ಘಾಟನೆಗೆ ಬಹಿಷ್ಕಾರ ಹಾಕಿರುವ ವಿರೋಧ ಪಕ್ಷಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಜಪಾನ್, ಪಪುವಾ ನ್ಯೂಗಿನಿ, ಆಸ್ಟ್ರೇಲಿಯಾ ದೇಶಗಳ ಪ್ರವಾಸ ಮುಗಿಸಿ ದೇಶಕ್ಕೆ ವಾಪಸಾಗಿರುವ ಪ್ರಧಾನಿ ಮೋದಿ ಗುರುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಆಸ್ಟ್ರೇಲಿಯಾದಲ್ಲಿ ಭಾರತೀಯ ಸಮುದಾಯದ ಕಾರ್ಯಕ್ರಮದಲ್ಲಿ ಅಲ್ಲಿನ ಪ್ರಧಾನಿ ಭಾಗಹಿಸಿದ್ದರು. ಇದು ನಮಗೆ ಹೆಮ್ಮೆಯ ಸಂಗತಿ. ಇದಷ್ಟೇ ಅಲ್ಲ, ಕಾರ್ಯಕ್ರಮದಲ್ಲಿ ದೇಶದ ಮಾಜಿ ಪ್ರಧಾನಿ, ವಿರೋಧ ಪಕ್ಷಗಳ ಸಂಸದರು ಮತ್ತು ಆಡಳಿತ ಪಕ್ಷಗಳ ಸಂಸದರೂ ಭಾಗವಹಿಸಿದ್ದರು. ಇದಾಗಿದ್ದು ಮೋದಿಯ ಖ್ಯಾತಿಯಿಂದಲ್ಲ, 140 ಕೋಟಿ ಭಾರತೀಯರ ಪ್ರಯತ್ನ ಮತ್ತು ಸ್ಪೂರ್ತಿ ಕಾರಣ ಎಂದು ಬಣ್ಣಿಸಿದರು.
ಇದು ನಿಜವಾದ ಪ್ರಜಾಪ್ರಭುತ್ವದ ಶಕ್ತಿ. ನಮ್ಮದಲ್ಲದ ಕಾರ್ಯಕ್ರಮಕ್ಕೆ ಗಣ್ಯರು ಬರುವುದು ಹೆಮ್ಮೆಯ ಸಂಗತಿ, ನಮ್ಮದೇ ಕಾರ್ಯಕ್ರಮವನ್ನು ಕೆಲವರು ಬಹಿಷ್ಕರಿಸುವುದು ತರವಲ್ಲ ಎಂದು ಹೇಳಿದರು. ಕಾಂಗ್ರೆಸ್ ಸೇರಿದಂತೆ 21 ವಿರೋಧ ಪಕ್ಷಗಳು ಹೊಸ ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸಲು ನಿರ್ಧರಿಸಿದ ಒಂದು ದಿನದ ನಂತರ ಪ್ರಧಾನಿಯವರು ಈ ಹೇಳಿಕೆ ನೀಡಿರುವುದು ಮಹತ್ವದ್ದಾಗಿದೆ.
ದೇವಾಲಯಗಳ ಮೇಲೆ ದಾಳಿ ಸಹಿಸಲ್ಲ:ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯ ಶ್ರೇಷ್ಠವಾಗಿದೆ. ಗುಲಾಮಗಿರಿಯ ಮನಸ್ಥಿತಿಯಲ್ಲಿ ಮುಳುಗಬೇಡಿ. ದೇಶ, ವಿದೇಶಗಳಲ್ಲಿ ನಮ್ಮ ಪೂಜಾ ಸ್ಥಳಗಳ ಮೇಲಿನ ದಾಳಿಗಳನ್ನು ಸಹಿಸಲಾಗದು. ಇದನ್ನು ನಾನು ಹೇಳಿದಾಗ ಜಗತ್ತೇ ಒಪ್ಪುತ್ತದೆ. ಇದಕ್ಕೆ ಬೆಂಬಲವೂ ಇದೆ ಎಂದು ಪ್ರಧಾನಿ ಹೇಳಿದರು.