ಕರ್ನಾಟಕ

karnataka

By

Published : Dec 11, 2021, 3:48 PM IST

Updated : Dec 11, 2021, 4:03 PM IST

ETV Bharat / bharat

9,800 ಕೋಟಿ ರೂ. ವೆಚ್ಚ: ನಾಲ್ಕು ದಶಕದಿಂದ ಬಾಕಿ ಇದ್ದ 'ಸರಯೂ ನಹರ್​​ ರಾಷ್ಟ್ರೀಯ'ಯೋಜನೆ ಉದ್ಘಾಟಿಸಿದ ನಮೋ

ಸುಮಾರು 9,800 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸರಯೂ ನಹರ್ ರಾಷ್ಟ್ರೀಯ ಯೋಜನೆಯನ್ನ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ.

Modi inaugurates the Saryu Nahar National Project
Modi inaugurates the Saryu Nahar National Project

ಬಲರಾಂಪುರ(ಉತ್ತರ ಪ್ರದೇಶ): ಕಳೆದ ನಾಲ್ಕು ದಶಕಗಳಿಂದ ಬಾಕಿ ಉಳಿದಿದ್ದ ಸರಯೂ ನಹರ್​ ರಾಷ್ಟ್ರೀಯ ಯೋಜನೆ ಕೊನೆಗೂ ಲೋಕಾರ್ಪಣೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ ನಿರ್ಮಾಣಗೊಂಡಿರುವ ರಾಷ್ಟ್ರೀಯ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು.

ಸರಯೂ ನಹರ್​​ ರಾಷ್ಟ್ರೀಯ'ಯೋಜನೆ ಉದ್ಘಾಟಿಸಿದ ನಮೋ

ಸರಯೂ ನಹರ್ ರಾಷ್ಟ್ರೀಯ ಯೋಜನೆಗೆ ಒಟ್ಟು 9,800 ಕೋಟಿ ರೂ ವೆಚ್ಚ ಮಾಡಲಾಗಿದ್ದು, 9 ಜಿಲ್ಲೆಯ 14 ಲಕ್ಷ ಹೆಕ್ಟರ್ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುತ್ತದೆ. ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಹೀಗಾಗಿ ಮೇಲಿಂದ ಮೇಲೆ ಯೋಗಿ ನಾಡಿಗೆ ಪ್ರಯಾಣ ಬೆಳೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಕೂಡ ಅಲ್ಲಿಗೆ ತೆರಳಿ ಬೃಹತ್​ ಯೋಜನೆ ಲೋಕಾರ್ಪಣೆಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ನಮೋ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​​ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಉತ್ತರ ಪ್ರದೇಶದಲ್ಲಿ ಈ ಹಿಂದೆ ಆಡಳಿತ ನಡೆಸಿರುವ ಅನೇಕ ಪಕ್ಷಗಳು ತಮ್ಮ ಹಿತಾಸಕ್ತಿಗೆ ಕೆಲಸ ಮಾಡಿದ್ದು, ಇಂತಹ ಪ್ರಮುಖ ಯೋಜನೆ ಸ್ಥಗಿತಗೊಳಿಸಿದ್ದವು ಎಂದರು. ಉತ್ತರ ಪ್ರದೇಶದಲ್ಲಿ ಕೇವಲ ರಿಬ್ಬನ್​ ಕತ್ತರಿಸುವುದು, ನಂತರ ಯೋಜನೆ ಮರೆತು ಬಿಡುವುದು ಸಾಮಾನ್ಯವಾಗಿದೆ. ಇದೇ ಕಾರಣಕ್ಕಾಗಿ ಈ ಯೋಜನೆ ಬಾಕಿ ಉಳಿದಿತ್ತು.

ಆದರೆ, ಇದೀಗ ಯೋಗಿ ಸರ್ಕಾರ ಇಂತಹ ಮಹತ್ವದ ಯೋಜನೆಗೆ ಅಂತಿಮ ರೂಪ ನೀಡಿದ್ದು, ರೈತರಿಗೆ ಸಹಕಾರಿಯಾಗಲಿದೆ ಎಂದರು. ಸರ್ಕಾರದ ಹಣ ಮತ್ತು ಸಂಪನ್ಮೂಲ ದುರ್ಬಳಕೆ ಮಾಡಿಕೊಳ್ಳುವ ಮನಸ್ಥಿತಿ ಹೊಂದಿರುವ ರಾಜಕೀಯ ಪಕ್ಷಗಳಿಂದ ದೇಶದ ಪ್ರಗತಿಗೆ ದೊಡ್ಡ ಅಡ್ಡಿ ಎಂದು ಇದೇ ವೇಳೆ ಹೇಳಿದರು.

ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ರಾಜ್ಯಪಾಲರಾದ ಆನಂದಿಬೆನ್ ಪಟೇಲ್​, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಮತ್ತು ಉಪಮುಖ್ಯಮಂತ್ರಿ ಕೇಶವ್​​ ಪ್ರಸಾದ್ ಮೌರ್ಯ ಉಪಸ್ಥಿತರಿದ್ದರು.

ಏನಿದು ಸರಯೂ ನಹರ್ ರಾಷ್ಟ್ರೀಯ ಯೋಜನೆ?

ಉತ್ತರ ಪ್ರದೇಶದಲ್ಲೇ ನಿರ್ಮಾಣಗೊಂಡಿರುವ ಅತಿದೊಡ್ಡ ನಾಲಾ ಯೋಜನೆ ಇದಾಗಿದ್ದು, 9 ಜಿಲ್ಲೆಗಳಾದ ಬಹ್ರೈಚ್​, ಗೊಂಡಾ, ಶ್ರಾವಸ್ತಿ, ಬಲರಾಮ್​ಪುರ್​, ಬಸ್ತಿ, ಸಿದ್ದಾರ್ಥನಗರ, ಸಂತ ಕಬೀರ್ ನಗರ, ಗೋರಖ್​ಪುರ್​​ ಮತ್ತು ಮಹರಾಜ್​ಗಂಜ್​​ಗಳ ಜಿಲ್ಲೆಯ ರೈತರಿಗೆ ಇದರಿಂದ ಅನುಕೂಲವಾಗಲಿದ್ದು, ಸುಮಾರು 25 - 30 ಲಕ್ಷ ರೈತರಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ 6200 ಗ್ರಾಮಗಳ ರೈತರು ಈ ಯೋಜನೆ ಲಾಭ ಪಡೆದುಕೊಳ್ಳಲಿದ್ದಾರೆ.

ಸರಯೂ ನಹರ್ ರಾಷ್ಟ್ರೀಯ ಯೋಜನೆಗೆ ಸುಮಾರು 9,800 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದ್ದು, ಕಳೆದ ನಾಲ್ಕು ವರ್ಷಗಲ್ಲಿ 4,600 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಘಾಗ್ರಾ, ಸರಯೂ, ರಾಪ್ತಿ, ಬಂಗಂಗಾ, ರೋಹಿಣಿ ನದಿಗಳನ್ನು ಜೋಡಿಸುವ ಉದ್ದೇಶವನ್ನು ಈ ಯೋಜನೆ ಹೊಂದಲಾಗಿದೆ.

Last Updated : Dec 11, 2021, 4:03 PM IST

ABOUT THE AUTHOR

...view details