ನವದೆಹಲಿ: 3ನೇ ಬಾರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಅಧಿಕಾರಿ ಸ್ವೀಕರಿಸುತ್ತಿರುವ ಮಮತಾ ಬ್ಯಾನರ್ಜಿಗೆ ಪ್ರಧಾನಿ ನರೇಂದ್ರ ಮೋದಿ ಶುಭಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮೋದಿ ಪಶ್ಚಿಮ ಬಂಗಾಳದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಮಮತಾ ದೀದಿಗೆ ಅಭಿನಂದನೆಗಳು ಎಂದಿದ್ದಾರೆ. ಇದಕ್ಕೂ ಮೊದಲು ರಾಜ್ಯಪಾಲ ಜಗದೀಪ್ ಧನ್ಕರ್ ಮಮತಾ ಬ್ಯಾನರ್ಜಿಗೆ ಪ್ರಮಾಣ ವಚನ ಬೋಧಿಸಿದ್ದರು.
ಪ್ರಮಾಣ ವಚನ ಬೋಧಿಸಿದ ಬಳಿಕ ಮಾತನಾಡಿದ ರಾಜ್ಯಪಾಲ ಜಗದೀಪ್ ಧನ್ಕರ್, ಮಮತಾ ಜಿ ಅವರ 3ನೇ ಅವಧಿಯ ಆಡಳಿತಕ್ಕೆ ನಾನು ಅಭಿನಂದಿಸುತ್ತೇನೆ. ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿರುವ ಈ ಗಲಭೆಯನ್ನ ಕೊನೆಗೊಳಿಸುವುದು ನಮ್ಮ ಆದ್ಯತೆಯಾಗಿದೆ. ಕಾನೂನು ನಿಯಮಾವಳಿ ಪುನಃಸ್ಥಾಪಿಸುವಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಿದ್ದ ಬಿಜೆಪಿಯನ್ನು ಮಣಿಸಿ ಟಿಎಂಸಿ 213 ಸ್ಥಾನಗಳಲ್ಲಿ ಭರ್ಜರಿ ಜಯಭೇರಿ ಬಾರಿಸಿತ್ತು. ಈ ಮೂಲಕ ಟಿಎಂಸಿ ಮತ್ತೆ ಆಡಳಿತ ಚುಕ್ಕಾಣಿ ಹಿಡಿದಿದೆ. ಇದರ ಜೊತೆಗೆ ಮಮತಾ ಬ್ಯಾನರ್ಜಿ ಕೂಡ ಸತತ ಮೂರನೇ ಬಾರಿಗೆ ಸಿಎಂ ಗಾದಿಗೇರಿದ್ದಾರೆ.
ಇದನ್ನೂ ಓದಿ: 3ನೇ ಬಾರಿಗೆ ಸಿಎಂ ಆಗಿ ಮಮತಾ ಪ್ರಮಾಣ; ದೀದಿ ಈಗ ದೇಶದ ಏಕೈಕ ಮಹಿಳಾ ಸಿಎಂ