ಕರ್ನಾಟಕ

karnataka

By

Published : Aug 9, 2021, 3:54 PM IST

ETV Bharat / bharat

ಅಡುಗೆ ಎಣ್ಣೆಯಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸುವ ಗುರಿಯಿದೆ: ಪಿಎಂ ಮೋದಿ

ತಾಳೆ ಎಣ್ಣೆ ಸೇರಿದಂತೆ ಇತರೆ ಖಾದ್ಯ ತೈಲ ಉತ್ಪಾದನೆಗಾಗಿ 11,000 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

PM Modi
ಪಿಎಂ ಮೋದಿ

ನವದೆಹಲಿ: 'ಆತ್ಮನಿರ್ಭರ ಭಾರತ ಅಭಿಯಾನ'ದಡಿ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿರುವ ಕೇಂದ್ರ ಸರ್ಕಾರ ಇದೀಗ ಅಡುಗೆ ಎಣ್ಣೆ ಅಥವಾ ಖಾದ್ಯ ತೈಲಗಳಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸುವ ಗುರಿಯನ್ನು ಹೊಂದಿದೆ.

ಅಡುಗೆ ಎಣ್ಣೆಯ ಬೆಲೆ ಗಗನಕ್ಕೇರಿರುವ ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಭರವಸೆ ಮಹತ್ತರ ಪಾತ್ರ ಪಡೆದುಕೊಂಡಿದೆ. ಇಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ರೈತರ ಬ್ಯಾಂಕ್ ಖಾತೆಗಳಿಗೆ 9ನೇ ಕಂತಿನ ಹಣವನ್ನು ವಿಡಿಯೋ ಕಾನ್ಫರೆನ್ಸ್ ಬಿಡುಗಡೆ ಮಾಡಿದ ಪಿಎಂ ಮೋದಿ, ಅಡುಗೆ ಎಣ್ಣೆಯಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸಲು 'ರಾಷ್ಟ್ರೀಯ ಖಾದ್ಯ ತೈಲ ಮಿಷನ್-ಆಯಿಲ್ ಪಾಮ್' (NMEO-OP) ಯೋಜನೆಯನ್ನು ಘೋಷಿಸಿದ್ದಾರೆ.

ಇದನ್ನೂ ಓದಿ:ಪಿಎಂ-ಕಿಸಾನ್ ಯೋಜನೆಯಡಿ ರೈತರ ಖಾತೆಗೆ ಬಂತು 9ನೇ ಕಂತಿನ ಹಣ

ತಾಳೆ ಎಣ್ಣೆ ಸೇರಿದಂತೆ ಇತರ ಖಾದ್ಯ ತೈಲ ಉತ್ಪಾದನೆಗಾಗಿ 11,000 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಲಾಗುವುದು. ತಾಳೆ ಎಣ್ಣೆ ಮತ್ತು ಇತರ ಎಣ್ಣೆ ಬೀಜಗಳನ್ನು ಉತ್ಪಾದಿಸಲು ಹಾಗೂ ಕೃಷಿಯನ್ನು ಉತ್ತೇಜಿಸಲು ಗುಣಮಟ್ಟದ ಬೀಜಗಳಿಂದ ಹಿಡಿದು ತಂತ್ರಜ್ಞಾನದವರೆಗೆ ರೈತರಿಗೆ ಎಲ್ಲಾ ಸೌಲಭ್ಯಗಳನ್ನು ಸಿಗುವಂತೆ ಸರ್ಕಾರ ಖಚಿತಪಡಿಸುತ್ತದೆ. ಒಟ್ಟು ಅಡುಗೆ ಎಣ್ಣೆಯ ಆಮದುಗಳಲ್ಲಿ ತಾಳೆ ಎಣ್ಣೆಯ ಆಮದು ಶೇಕಡಾ 55 ರಷ್ಟಿದೆ. ಖಾದ್ಯ ತೈಲ ಆಮದಿಗಾಗಿ ದೇಶವು ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಈ ಹಣವು ರೈತರಿಗೆ ಸಿಗಬೇಕು ಎಂದರು.

ತಾಳೆ ಕೃಷಿಗೆ ಈಶಾನ್ಯ ರಾಜ್ಯಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ನಾವು ಉತ್ತೇಜಿಸಬಹುದು. ಅಕ್ಕಿ, ಗೋಧಿ ಮತ್ತು ಸಕ್ಕರೆಯ ಉತ್ಪಾದನೆಯಲ್ಲಿ ಈಗಾಗಲೇ ಭಾರತವು ಸ್ವಾವಲಂಬಿಯಾಗಿದೆ. ಆದರೆ ದೇಶವು ಅಡುಗೆ ಎಣ್ಣೆಯ ಮೇಲೆ ಬಹಳ ಅವಲಂಬಿತವಾಗಿದೆ. ಹೀಗಾಗಿ ಭಾರತವು ಖಾದ್ಯ ತೈಲದಲ್ಲೂ ಸ್ವಾವಲಂಬಿಯಾಗಬೇಕು ಎಂದು ಪ್ರಧಾನಿ ಒತ್ತಿ ಹೇಳಿದ್ದಾರೆ.

ABOUT THE AUTHOR

...view details