ನಾಸಿಕ್(ಮಹಾರಾಷ್ಟ್ರ):ಈಗಾಗಲೇ ಸರ್ಕಾರ ವಾಹನಗಳ ಹಾರ್ನ್ಗೆ ಸಂಗೀತ ವಾದ್ಯಗಳ ಶಬ್ದವನ್ನು ಅಳವಡಿಸಲು ನಿರ್ಧಾರ ತೆಗೆದುಕೊಂಡಿದೆ. ಇದಕ್ಕಾಗಿ ಕೇವಲ ಭಾರತೀಯ ಸಂಗೀತ ವಾದ್ಯಗಳ ಶಬ್ದಗಳನ್ನು ಮಾತ್ರ ಅಳವಡಿಸಿಕೊಳ್ಳಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ನಾಸಿಕ್ನಲ್ಲಿ ನಡೆದ ಹೆದ್ದಾರಿ ಉದ್ಘಾಟನಾ ಸಮಾರಂಭವೊಂದರಲ್ಲಿ ಮಾತನಾಡಿದ ಗಡ್ಕರಿ, ಆ್ಯಂಬುಲೆನ್ಸ್ ಮತ್ತು ಪೊಲೀಸ್ ವಾಹನಗಳು ಬಳಸುವ ಸೈರನ್ಗಳ ಬಗ್ಗೆಯೂ ಅಧ್ಯಯನ ಮಾಡಲಾಗಿದೆ. ಈಗಿರುವ ಶಬ್ದಕ್ಕೆ ಬದಲಾಗಿ ಆಲ್ ಇಂಡಿಯಾ ರೇಡಿಯೋದಲ್ಲಿ ಬರುವ ಟ್ಯೂನ್ ಅನ್ನು ಬಳಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದರು.
ಪೊಲೀಸರು ಮತ್ತು ರಾಜಕೀಯ ವ್ಯಕ್ತಿಗಳು ಬಳಸುವ ಕಾರುಗಳ ಮೇಲೆ ಅಳವಡಿಸುವ ಕೆಂಪು ದೀಪವನ್ನು ಕೂಡಾ ತೆಗೆದುಹಾಕಲಾಗುತ್ತದೆ. ಇದರ ಜೊತೆಗೆ ಸೈರನ್ಗಳನ್ನು ತೆಗೆದುಹಾಕುವ ಬಗ್ಗೆಯೂ ಅಧ್ಯಯನ ಮಾಡಲಾಗುತ್ತಿದೆ.
ಬೆಳ್ಳಂಬೆಳಗ್ಗೆ ಆಕಾಶವಾಣಿಯಲ್ಲಿ ಬರುವ ಟ್ಯೂನ್ ಅನ್ನು ಸೈರನ್ಗೆ ಬಳಸಿಕೊಳ್ಳಲಾಗುತ್ತದೆ. ಈ ಟ್ಯೂನ್ ಜನರಿಗೆ ಕೇಳಲು ಹಿತಕರವಾಗಿರುತ್ತದೆ ಎಂದು ನನಗೆ ಅನ್ನಿಸುತ್ತಿದೆ. ಇದರಿಂದಾಗಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಬಳಸುವ ಕಿರಿಕಿರಿ ನೀಡುವ ಶಬ್ದದಿಂದ ಮುಕ್ತಿ ದೊರೆಯುತ್ತದೆ. ಇದರ ಜೊತೆಗೆ, ಹೆಚ್ಚು ಶಬ್ದ ಇರುವ ಕಾರಣದಿಂದ ಕಿವಿಗಳಿಗೂ ಅಪಾಯವಾಗುವುದರಿಂದ ಪಾರಾಗಬಹುದು ಎಂದು ಗಡ್ಕರಿ ಅಭಿಪ್ರಾಯಪಟ್ಟರು.