ನವದೆಹಲಿ : ಇಸ್ರೇಲ್ - ಗಾಜಾ ಯುದ್ಧದ ವೇಳೆ ಪ್ಯಾಲೆಸ್ತೀನ್ನ ಬೆಥ್ಲೆಹೆಮ್ನಲ್ಲಿ ಸಿಕ್ಕಿಬಿದ್ದಿದ್ದ 23 ಮೇಘಾಲಯದ ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ನೆರೆಯ ಈಜಿಪ್ಟ್ಗೆ ರವಾನಿಸಲಾಗಿದೆ. ವಿದೇಶಾಂಗ ಸಚಿವಾಲಯ ಮತ್ತು ಅಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಪ್ರಯತ್ನದಿಂದ ಎಲ್ಲ ಯಾತ್ರಿಕರು ಸುರಕ್ಷಿತವಾಗಿ ನೆರೆಯ ಈಜಿಪ್ಟ್ ತಲುಪಿದ್ದಾರೆ ಎಂದು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಆ್ಯಪ್ನಲ್ಲಿ ಮಾಹಿತಿ ನೀಡಿದ ಸಂಗ್ಮಾ, ಈಶಾನ್ಯ ರಾಜ್ಯದ 27 ಭಾರತೀಯ ಪ್ರವಾಸಿಗರು ಯುದ್ಧ ವಲಯದಲ್ಲಿ ಸಿಲುಕಿಕೊಂಡಿದ್ದರು. ಆದರೆ, ವಿದೇಶಾಂಗ ಸಚಿವಾಲಯ ಮತ್ತು ಭಾರತೀಯ ರಾಯಭಾರಿ ಕಚೇರಿಯ ನೆರವಿನಿಂದ ಅವರನ್ನು ಸುರಕ್ಷಿತವಾಗಿ ಈಜಿಪ್ಟ್ಗೆ ಕರೆದೊಯ್ಯಲಾಗಿದೆ ಎಂದಿದ್ದಾರೆ.
ಇದಕ್ಕೂ ಮುನ್ನ ಪ್ರತ್ಯೇಕ ಟ್ವೀಟ್ ಮಾಡಿದ್ದ ಮುಖ್ಯಮಂತ್ರಿಗಳು, "ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಉದ್ವಿಗ್ನತೆಯಿಂದಾಗಿ ಜೆರುಸಲೇಂಗೆ ಪವಿತ್ರ ತೀರ್ಥಯಾತ್ರೆಗೆ ಪ್ರಯಾಣಿಸಿದ ಮೇಘಾಲಯದ 27 ನಾಗರಿಕರು ಬೆಥ್ಲೆಹೆಮ್ನಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ, ಇಸ್ರೇಲ್ನ ಟೆಲ್ ಅವೀವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಇಸ್ರೇಲ್ ಮತ್ತು ಗಾಜಾ ಎರಡೂ ದೇಶಗಳಲ್ಲಿ ಭಾರತೀಯ ನಾಗರಿಕರು ಸಾವು - ನೋವುಗಳನ್ನು ಅನುಭವಿಸಿದ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಈ 27 ಮಂದಿ ಯಾತ್ರಿಕರು ಸುರಕ್ಷಿತ ನಿರ್ಗಮನಕ್ಕಾಗಿ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ" ಎಂದಿದ್ದರು.
ಇದನ್ನೂ ಓದಿ :ಇಸ್ರೇಲ್ ಮೇಲೆ ಪ್ಯಾಲೆಸ್ತೀನ್ ದಾಳಿಕೋರರಿಂದ ರಾಕೆಟ್ ದಾಳಿ : ನಾಲ್ಕು ಮಂದಿ ಸಾವು