ನವದೆಹಲಿ: ನವೆಂಬರ್ 9 ರಂದು ಹಿರಿಯ ನ್ಯಾಯಾಧೀಶ ಜಸ್ಟಿಸ್ ಡಿವೈ ಚಂದ್ರಚೂಡ್ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸದಂತೆ ತಡೆಯಬೇಕೆಂದು ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ. ಇಡೀ ಅರ್ಜಿಯು ತಪ್ಪು ಗ್ರಹಿಕೆಗಳಿಂದ ಕೂಡಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಕೀಲರ ವಾದ ಆಲಿಸಿದ ನಂತರ, ಇದರ ವಿಚಾರಣೆ ನಡೆಸಲು ಯಾವುದೇ ಕಾರಣವಿದ್ದಂತೆ ಕಾಣುತ್ತಿಲ್ಲ. ಇಡೀ ಅರ್ಜಿಯನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ಸುಪ್ರೀಂ ಕೋರ್ಟ್ನ ಪೀಠ ಹೇಳಿದೆ. ಗುರುವಾರದ ಬದಲಾಗಿ ಇಂದೇ ಅರ್ಜಿಯನ್ನು ಆಲಿಸಲು ಇದಕ್ಕೂ ಮುನ್ನ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನೇತೃತ್ವದ ಪೀಠವು ಒಪ್ಪಿಕೊಂಡಿತ್ತು.