ಬೆಂಗಳೂರು:ಮಹಾರಾಷ್ಟ್ರದ ನಾಗ್ಪುರದಿಂದ ಬೆಂಗಳೂರಿಗೆ ಆಗಮಿಸಿದ ಇಂಡಿಗೋ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆಯಲು ಯತ್ನಿಸಿದ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಈ ಘಟನೆ ಸೆಪ್ಟೆಂಬರ್ 30ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಅಂದು ರಾತ್ರಿ 10 ಗಂಟೆಗೆ ಇಂಡಿಗೋ ಸಂಸ್ಥೆಯ 6E 6803 ವಿಮಾನ ಮಹಾರಾಷ್ಟ್ರದ ನಾಗ್ಪುರದಿಂದ ಬೆಂಗಳೂರಿಗೆ ಹೊರಟಿತ್ತು. ಇದೇ ವೇಳೆ ಸ್ವಪ್ನಿಲ್ ಹೋಲೆ ಎಂದು ಗುರುತಿಸಲಾದ ವ್ಯಕ್ತಿಯೊಬ್ಬ ವಿಮಾನ ಇನ್ನೇನು ಟೇಕ್ ಆಫ್ ಆಗಬೇಕು ಎನ್ನುವ ಹೊತ್ತಿಗೆ ಬಾಗಿಲು ತೆರೆಯಲು ಮುಂದಾಗಿದ್ದಾನೆ. ತಕ್ಷಣವೇ ಸಿಬ್ಬಂದಿ ಆತನನ್ನು ತಡೆದು ನಿಲ್ಲಿಸಿದ್ದಾರೆ. ಬಳಿಕ ವಿಮಾನ ಬೆಂಗಳೂರಿಗೆ ಪ್ರಯಾಣಿಸಿದೆ.
ಪೊಲೀಸರ ಪ್ರಕಾರ, ಪ್ರಯಾಣಿಕ ಸ್ವಪ್ನಿಲ್ ಹೋಲೆ ವಿಮಾನದ ತುರ್ತು ನಿರ್ಗಮನ ಬಾಗಿಲಿನ ಪಕ್ಕದಲ್ಲಿ ಕುಳಿತಿದ್ದ. ಟೇಕ್ಆಫ್ಗೆ ಮುನ್ನ ವಿಮಾನ ಸಿಬ್ಬಂದಿ ಪ್ರಯಾಣಿಕರಿಗೆ ಮಾಹಿತಿ ನೀಡುತ್ತಿದ್ದಾಗ, ಸ್ವಪ್ನಿಲ್ ಎಮರ್ಜೆನ್ಸಿ ಬಾಗಿಲು ತೆರೆಯಲು ಯತ್ನಿಸಿದ್ದಾನೆ. ಯಾಕಾಗಿ ಆತ ಹೀಗೆ ವರ್ತಿಸಿದ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಬೆಂಗಳೂರಿನಲ್ಲಿ ಬಂಧನ:ಪ್ರಯಾಣಿಕನ ಆಕ್ಷೇಪಾರ್ಹ ನಡೆಯ ನಡುವೆಯೂ ಇಂಡಿಗೋ ವಿಮಾನ ನಾಗ್ಪುರದಿಂದ ಬೆಂಗಳೂರಿಗೆ ಆಗಮಿಸಿದೆ. ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾತ್ರಿ 11.55ಕ್ಕೆ ವಿಮಾನ ಇಳಿದ ನಂತರ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಬಾಗಿಲು ತೆರೆಯಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.