ವಾರಣಾಸಿ(ಉತ್ತರ ಪ್ರದೇಶ):ದೆಹಲಿಯಿಂದ ವಾರಣಾಸಿಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿವೋರ್ವ ತುರ್ತು ದ್ವಾರ ತೆಗೆಯಲು ಮುಂದಾಗಿ ಆತಂಕ ಸೃಷ್ಟಿಸಿದ್ದ ಘಟನೆ ನಡೆದಿದೆ. ಈ ವೇಳೆ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರು ಆತನನ್ನು ಬದಿಗೆಳೆದು ಸಂಭವಿಸಲಿದ್ದ ಬಹುದೊಡ್ಡ ದುರಂತವನ್ನು ತಪ್ಪಿಸಿದ್ದಾರೆ.
ಬಳಿಕ ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಆರಂಭಿಸಿದ್ದಾರೆ. ಈ ಸಂಪೂರ್ಣ ಘಟನೆಯನ್ನು ವಿಮಾನದಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ವೈರಲ್ ಆಗುತ್ತಿದೆ.
ಸ್ಪೈಸ್ಜೆಟ್ ಸಂಸ್ಥೆಯ ವಿಮಾನ ದೆಹಲಿಯ ವಿಮಾನ ನಿಲ್ದಾಣದಿಂದ ಶನಿವಾರ ಮಧ್ಯಾಹ್ನ 2:15ಕ್ಕೆ ಹೊರಟು ವಾರಣಾಸಿಗೆ ಆಗಮಿಸುತ್ತಿತ್ತು. ವಿಮಾನದಲ್ಲಿ ಒಟ್ಟು 89 ಪ್ರಯಾಣಿಕರಿದ್ದರು. ಸದ್ಯ ತುರ್ತು ದ್ವಾರ ತೆಗೆಯಲು ಯತ್ನಿಸಿದಾತನನ್ನು ಹರಿಯಾಣದ ಗುರಗಾಂವ್ ನಿವಾಸಿ ಗೌರವ್ ಖನ್ನಾ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.