ಕರ್ನಾಟಕ

karnataka

ಮಗಳ ಕಿಡ್ನಾಪ್​: ರೈಲಿಗೆ ತಲೆ ಕೊಟ್ಟ ತಂದೆ - ತಾಯಿ.. ಆರೋಪಿಯ ಮನೆ ಮುಂದೆ ಶವ ಸುಟ್ಟ ಸಂಬಂಧಿಕರು!

By

Published : May 30, 2023, 6:47 PM IST

ಪ್ರೇಮ ಪ್ರಕರಣದಲ್ಲಿ ಮಗಳು ಅಪಹರಣವಾದ ಒಂದು ಗಂಟೆಯೊಳಗೆ ಪೋಷಕರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

parents-suicide-after-kidnapping-daughter-in-maharastra
ಮಗಳ ಕಿಡ್ನಾಪ್​: ರೈಲಿಗೆ ತಲೆ ಕೊಟ್ಟ ತಂದೆ- ತಾಯಿ, ಆರೋಪಿಯ ಮನೆ ಮುಂದೆ ಶವ ಸುಟ್ಟ ಸಂಬಂಧಿಕರು!

ನಾಸಿಕ್(ಮಹಾರಾಷ್ಟ್ರ):ನೆರೆ ರಾಜ್ಯ ಮಹಾರಾಷ್ಟ್ರದ ನಾಸಿಕ್​ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ.ಪ್ರೇಮ ಪ್ರಕರಣದಲ್ಲಿ ಮಗಳು ಅಪಹರಣವಾದ ಒಂದು ಗಂಟೆಯೊಳಗೆ ಪೋಷಕರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉದ್ರಿಕ್ತಗೊಂಡ ಯುವತಿಯ ಸಂಬಂಧಿಕರು ಶಂಕಿತ ಆರೋಪಿಯ ಮನೆಯ ಮುಂದೆ ಶವಗಳನ್ನು ಸುಟ್ಟುಹಾಕಿದ್ದಾರೆ.

ಇಲ್ಲಿನ ಭರ್ವೀರ್ ಬುದ್ರುಕ್ ಗ್ರಾಮದಲ್ಲಿ ಭಾನುವಾರ ಈ ಭೀಕರ ಘಟನೆ ವರದಿಯಾಗಿದೆ. ಯುವತಿಯನ್ನು ಅಪಹರಿಸಿದ ಆರೋಪಿಯನ್ನು ಸಾಧನ್ ಝಂಕರ್ ಎಂದು ಗುರುತಿಸಲಾಗಿದೆ. ಕಿಸಾನ್ ಖತಲೆ (49) ಮತ್ತು ಮಂಜುಳಾ ಖತಲೆ (40) ಎಂಬುವವರೆ ಆತ್ಮಹತ್ಯೆ ಶರಣಾದವರು. ಆರೋಪಿಯು ಖತಲೆ ದಂಪತಿಯ 19 ವರ್ಷದ ಪುತ್ರಿಯನ್ನು ಪ್ರೀತಿಸುತ್ತಿದ್ದ, ಆದರೆ ಯುವತಿ ಈತನನ್ನು ಪ್ರೀತಿಸುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಸಹಚರರೊಂದಿಗೆ ಸೇರಿ ಯುವತಿಯನ್ನು ಅಪಹರಿಸಿದ್ದಾನೆ ಎಂದು ಹೇಳಲಾಗಿದೆ.

ನಡೆದಿದ್ದೇನು?: ಖತಲೆ ದಂಪತಿಯ ಪುತ್ರಿಯನ್ನು ಪ್ರೀತಿಸುತ್ತಿದ್ದ ಆರೋಪಿ ಸಾಧನ್ ಝಂಕರ್ ತನ್ನನ್ನು ಮದುವೆಯಾಗುವಂತೆ ಆಕೆಯನ್ನು ಪೀಡಿಸುತ್ತಿದ್ದ. ಅಲ್ಲದೇ ಆಕೆಯ ಮೇಲೆ ಪದೆ ಪದೆ ಒತ್ತಡ ಹೇರುತ್ತಿದ್ದ. ಆದರೂ ಯುವತಿ ಸಮ್ಮತಿಸಿರಲಿಲ್ಲ ಎಂದು ತಿಳಿದು ಬಂದಿದೆ. ಇದರ ನಡುವೆ ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಯುವತಿ ತನ್ನ ಪೋಷಕರೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಳು. ಈ ಸಮಯ ಸಾಧಿಸಿದ ಆರೋಪಿ ಕಾರಿನಲ್ಲಿ ತನ್ನ ಸಹಚರರೊಂದಿಗೆ ಬಂದಿದ್ದಾನೆ. ಈ ವೇಳೆ, ನಾಸಿಕ್‌ನ ಘೋಟಿ - ಪಂಧುರ್ಲಿ ಹೆದ್ದಾರಿಯಲ್ಲಿ ಬೈಕ್​ ಅಡ್ಡಗಟ್ಟಿದ್ದಾನೆ. ಇದಲ್ಲದೆ ಆಕೆಯ ಪೋಷಕರಿಗೂ ಆರೋಪಿಗಳು ಥಳಿಸಿದ್ದಾರೆ. ನಂತರ ಯುವತಿಯನ್ನು ಅಲ್ಲಿಂದ ಅಪಹರಿಸಿದ್ದಾರೆ ಎಂದು ತಿಳಿದು ಬಂದಿದೆ.

ಮತ್ತೊಂದೆಡೆ ಮಗಳ ಅಪಹರಣದಿಂದ ನೊಂದ ಪೋಷಕರಾದ ಕಿಸಾನ್ ಖತಲೆ ಮತ್ತು ಮಂಜುಳಾ ಖತಲೆ ಈ ಘಟನೆ ನಡೆದ ಒಂದು ಗಂಟೆಯೊಳಗೆ ಭಾಗೂರ್ ನಾನೇಗಾಂವ್ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಿಂದ ಉದ್ರಿಕ್ತಗೊಂಡ ಯುವತಿಯ ಸಂಬಂಧಿಕರು ಆರೋಪಿ ಮನೆಯ ಮುಂದೆ ಶವಗಳನ್ನು ಸುಟ್ಟುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಭರ್ವೀರ್ ಬುದ್ರುಕ್ ಗ್ರಾಮದಲ್ಲಿ ಈಗ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ವಿಷಯ ತಿಳಿದ ನಾಸಿಕ್​ ರೈಲ್ವೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಯುವತಿಯ ಚಿಕ್ಕಪ್ಪ ನೀಡಿದ ದೂರಿನ ಮೇರೆಗೆ ಅಪಹರಣ ಆರೋಪಿ ಸಾಧನ್ ಜಾಂಕರ್ ಮತ್ತು ಆತನ ಸಹಚರರ ವಿರುದ್ಧ ಸಿನ್ನಾರ್ ಪೊಲೀಸ್ ಠಾಣೆಯಲ್ಲಿ ಭಾನುವಾರ ತಡರಾತ್ರಿ ಅಪಹರಣ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ. ಪೊಲೀಸ್ ಇನ್ಸ್​​ಪೆಕ್ಟರ್ ಮಹೇಶ ಕುಲಕರ್ಣಿ ನೇತೃತ್ವದಲ್ಲಿ ಸಬ್ ಇನ್ಸ್​​ಪೆಕ್ಟರ್ ಗಳಾದ ಪ್ರದೀಪ್ ಭಲೇರಾವ್ ಮತ್ತು ಶೈಲೇಶ್ ಪಾಟೀಲ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಸದ್ಯ ಪೊಲೀಸರು ಅಪಹರಣಕ್ಕೊಳಗಾದ ಯುವತಿ ಮತ್ತು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಇದನ್ನೂ ಓದಿ:'ಹತ್ಯೆ ಬಗ್ಗೆ ಪಶ್ಚಾತ್ತಾಪವಿಲ್ಲ': ಬಾಲಕಿ ಹಂತಕ ಸಾಹಿಲ್ ಖಾನ್​ ಹೇಳಿಕೆ, 2 ದಿನ ಪೊಲೀಸ್​ ಕಸ್ಟಡಿಗೆ

ABOUT THE AUTHOR

...view details