ಕರ್ನಾಟಕ

karnataka

ಬಿಎಸ್​ಎಫ್​ ಪೋಸ್ಟ್​ಗಳ ಮೇಲೆ ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ: ಯೋಧ ಸೇರಿ ಐವರಿಗೆ ಗಾಯ

By PTI

Published : Oct 27, 2023, 6:50 AM IST

Updated : Oct 27, 2023, 7:43 AM IST

ಜಮ್ಮುವಿನ ಬಿಎಸ್​ಎಫ್​ ಪೋಸ್ಟ್​ಗಳ ಮೇಲೆ ಪಾಕಿಸ್ತಾನದ ರೇಂಜರ್​ಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ.

Etv Bharatpakistan-started-unprovoked-firing-on-bsf-posts-in-jammu
ಬಿಎಸ್​ಎಫ್​ ಪೋಸ್ಟ್​ಗಳ ಮೇಲೆ ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ: ಯೋಧ ಸೇರಿ ಐವರಿಗೆ ಗಾಯ

ಬಿಎಸ್​ಎಫ್​ ಪೋಸ್ಟ್​ಗಳ ಮೇಲೆ ಪಾಕಿಸ್ತಾನದಿಂದ ಗುಂಡಿನ ದಾಳಿ

ಜಮ್ಮು ಮತ್ತು ಕಾಶ್ಮೀರ: ಜಮ್ಮುವಿನ ಅರ್ನಿಯಾ ಮತ್ತು ಆರ್​ಎಸ್ ಪುರ ಸೆಕ್ಟರ್​ಗಳ ಅಂತಾರಾಷ್ಟ್ರೀಯ ಗಡಿ (ಐಬಿ) ಯಲ್ಲಿರುವ ಐದು ಬಿಎಸ್​ಎಫ್​ ಪೋಸ್ಟ್​ಗಳ ಮೇಲೆ ಪಾಕಿಸ್ತಾನದ ರೇಂಜರ್​ಗಳು ಗುರುವಾರ ರಾತ್ರಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಓರ್ವ ಗಡಿ ಭದ್ರತಾ ಪಡೆಯ ಯೋಧ ಮತ್ತು ನಾಲ್ವರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಭದ್ರತಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅರ್ನಿಯಾ ಸೆಕ್ಟರ್​ನಲ್ಲಿ ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಪಾಕಿಸ್ತಾನ ರೇಂಜರ್​​​ಗಳಿಂದ ಗುಂಡಿನ ದಾಳಿ ಪ್ರಾರಂಭಿಸಿದ್ದರು, ಈ ಅಪ್ರಚೋದಿತ ಗುಂಡಿನ ದಾಳಿಗೆ ಬಿಎಸ್​ಎಫ್​ ಪಡೆ ಪ್ರತೀಕಾರ ತೀರಿಸಿಕೊಂಡಿದೆ. ಇನ್ನು ಗುಂಡಿನ ಚಕಮಕಿ ಮುಂದುವರಿದಿದೆ. ಗಾಯಗೊಂಡ ಯೋಧನನ್ನು ಚಿಕಿತ್ಸೆಗಾಗಿ ಜಮ್ಮುವಿನ ಜಿಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಬಿಎಸ್ಎಫ್​ ಪ್ರತಿ ದಾಳಿಯಿಂದ ಪಾಕಿಸ್ತಾನದ ಎಷ್ಟು ಪೋಸ್ಟ್​ಗಳಿಗೆ ಹಾನಿಯಾಗಿದೆ ಎಂಬ ವಿಚಾರ ಇಂದು ತಿಳಿಯುತ್ತದೆ ಎಂದು ಬಿಎಸ್​ಎಫ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನದ ರೇಂಜರ್‌ಗಳು ಜನವಸತಿ ಪ್ರದೇಶಗಳಲ್ಲಿ ಮಾರ್ಟರ್ ಶೆಲ್‌ಗಳನ್ನು ಹಾರಿಸಿದ್ದಾರೆ. ಇದರಿಂದ ಗಡಿ ಪ್ರದೇಶದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಅರ್ನಿಯಾ, ಸುಚ್ಟ್‌ಗಢ್, ಸಿಯಾ, ಜಬೋವಾಲ್ ಮತ್ತು ಟ್ರೆವಾ ಪೋಸ್ಟ್​ಗಳು ದಾಳಿಗೊಳಗಾಗಿವೆ ಎಂದು ಅವರು ತಿಳಿಸಿದ್ದಾರೆ.

ಪಾಕಿಸ್ತಾನದ ದಾಳಿಯಿಂದ ಅರ್ನಿಯಾ ಮತ್ತು ಜಬೋವಾಲ್‌ನಲ್ಲಿನ ಜನರು, ವಿಶೇಷವಾಗಿ ವಲಸೆ ಕಾರ್ಮಿಕರು ತಮ್ಮ ಮನೆಗಳನ್ನು ತೊರೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಗಡಿ ಭಾಗದ ವಿವಿಧ ಗ್ರಾಮಗಳಲ್ಲಿ ಹಲವಾರು ಕುಟುಂಬಗಳು ಬಂಕರ್‌ಗಳಲ್ಲಿ ಆಶ್ರಯ ಪಡೆದಿವೆ. ಭಾರತ ಮತ್ತು ಪಾಕಿಸ್ತಾನವು ಫೆಬ್ರವರಿ 25, 2021 ರಂದು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಇತರ ಪ್ರದೇಶಗಳ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಉದ್ದಕ್ಕೂ ಕದನ ವಿರಾಮದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಒಪ್ಪಂದಕ್ಕೆ ಸಹಿ ಹಾಕಿದ ನಂತರ 12ಕ್ಕಿಂತಲೂ ಹೆಚ್ಚು ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ನಡೆದಿವೆ.

ಉಗ್ರರ ಹತ್ಯೆ:ಮತ್ತೊಂದೆಡೆ, ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ನುಸುಳಿ ಬಂದ ಐವರು ಉಗ್ರರನ್ನು ಭಾರತೀಯ ಸೇನೆ ಗುರುವಾರ ಹೊಡೆದುರುಳಿಸಿತ್ತು. ಕುಪ್ವಾರ ಜಿಲ್ಲೆಯ ಮಚ್ಚಲ್​ ಸೆಕ್ಟರ್​ನಲ್ಲಿ ನಡೆದಿದ್ದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರು ಸೇನಾ ಗುಂಡಿಗೆ ಬಲಿಯಾಗಿದ್ದರು. ಬೆಳಗ್ಗೆ ಇಬ್ಬರನ್ನು ಹತ್ಯೆ ಮಾಡಿದ್ದ ಸೇನೆ ಬಳಿಕ ಕಾರ್ಯಾಚರಣೆ ಮುಂದುವರಿಸಿ ಮತ್ತೆ ಮೂವರನ್ನು ಬಲಿ ತೆಗೆದುಕೊಂಡಿತ್ತು. ಒಟ್ಟು ಐವರನ್ನು ಹತ್ಯೆ ಮಾಡಿರುವ ಭದ್ರತಾ ಪಡೆಗಳು ಆ ಭಾಗದಲ್ಲಿ ಕಾರ್ಯಾಚರಣೆ ಮುಂದುವರಿಸಿವೆ.

ಇದನ್ನೂ ಓದಿ:ಪಾಕಿಸ್ತಾನದಿಂದ ಭಾರತದೊಳಗೆ ನುಸುಳಲು ಯತ್ನಿಸಿದ ಐವರು ಉಗ್ರರ ಹತ್ಯೆ

Last Updated : Oct 27, 2023, 7:43 AM IST

ABOUT THE AUTHOR

...view details