ಕರ್ನಾಟಕ

karnataka

ETV Bharat / bharat

ಒಂದು ರಾಷ್ಟ್ರ, ಒಂದು ಚುನಾವಣೆ: ಸಮಿತಿ ರಚನೆಯ ಸಮಯ ಸಂಶಯಾಸ್ಪದ ಎಂದ ಕಾಂಗ್ರೆಸ್ - ಸಾರ್ವತ್ರಿಕ ಚುನಾವಣೆಗೆ ಕೆಲವೇ ತಿಂಗಳುಗಳು

ಒಂದು ರಾಷ್ಟ್ರ, ಒಂದು ಚುನಾವಣೆ ಸಾಧ್ಯತೆಯನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಿರುವ ಸಮಯ ಹಾಗೂ ಸಂದರ್ಭಗಳು ಸಂಶಯಾಸ್ಪದವಾಗಿವೆ ಎಂದು ಕಾಂಗ್ರೆಸ್​ ಆರೋಪಿಸಿದೆ.

Timing of one nation one election panel highly suspect
Timing of one nation one election panel highly suspect

By ETV Bharat Karnataka Team

Published : Sep 3, 2023, 2:12 PM IST

ನವದೆಹಲಿ: 'ಒಂದು ರಾಷ್ಟ್ರ, ಒಂದು ಚುನಾವಣೆ' ಕುರಿತ ಉನ್ನತ ಮಟ್ಟದ ಸಮಿತಿಯನ್ನು ರಚಿಸಿರುವ ಸಮಯವು ಅತ್ಯಂತ ಅನುಮಾನಾಸ್ಪದವಾಗಿದೆ ಮತ್ತು ಅದರ ಉಲ್ಲೇಖದ ನಿಯಮಗಳು ಅದು ಏನು ಶಿಫಾರಸು ಮಾಡಬೇಕೆಂಬುದನ್ನು ಈಗಾಗಲೇ ನಿರ್ಧರಿಸಿದಂತಿವೆ ಎಂದು ಕಾಂಗ್ರೆಸ್ ರವಿವಾರ ಹೇಳಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ಸಮಿತಿಯನ್ನು ಸಂಪೂರ್ಣ ಬೇಕಾಬಿಟ್ಟಿಯಾಗಿ ರಚಿಸಲಾಗಿದೆ ಮತ್ತು ಅದಕ್ಕಾಗಿಯೇ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಸಮಿತಿಯ ಭಾಗವಾಗಲು ನಿರಾಕರಿಸಿದ್ದಾರೆ ಎಂದು ಹೇಳಿದರು.

"ಒಂದು ರಾಷ್ಟ್ರ ಒಂದು ಚುನಾವಣೆ" ಎಂದು ಕರೆಯಲ್ಪಡುವ ಉನ್ನತ ಮಟ್ಟದ ಸಮಿತಿಯ ರಚನೆಯು ಯಾವುದೋ ಸಾಂಪ್ರದಾಯಿಕ ಕೆಲಸದಂತಾಗಿದ್ದು, ಅದನ್ನು ರಚಿಸಿರುವ ಸಮಯ ಸಂಶಯಾಸ್ಪದವಾಗಿದೆ. ಅದರ ಉಲ್ಲೇಖದ ನಿಯಮಗಳು ಈಗಾಗಲೇ ಅದರ ಶಿಫಾರಸುಗಳನ್ನು ನಿರ್ಧರಿಸಿವೆ" ಎಂದು ಜೈರಾಮ್ ರಮೇಶ್​ ಎಕ್ಸ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ಸಾಧ್ಯತೆಯನ್ನು ಪರಿಶೀಲಿಸಲು ಕೇಂದ್ರವು ಘೋಷಿಸಿದ ಸಮಿತಿಯ ಭಾಗವಾಗಲು ಚೌಧರಿ ಶನಿವಾರ ನಿರಾಕರಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಚೌಧರಿ, ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಉನ್ನತ ಮಟ್ಟದ ಸಮಿತಿಯ ಸದಸ್ಯರಾಗಿ ತಮ್ಮನ್ನು ನೇಮಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಸಮಿತಿಯ ತೀರ್ಮಾನಗಳು ಹೀಗೆಯೇ ಬರಬೇಕು ಎಂಬ ರೀತಿಯಲ್ಲಿ ಅದರ ಉಲ್ಲೇಖದ ನಿಯಮಗಳನ್ನು ಸಿದ್ಧಪಡಿಸಲಾಗಿದೆ. ಇದೊಂದು ಕಣ್ಣೊರೆಸುವ ತಂತ್ರವಾಗಿದ್ದು, ಈ ಸಮಿತಿಯ ಭಾಗವಾಗಲು ನಿರಾಕರಿಸುತ್ತಿದ್ದೇನೆ ಎಂಬುದನ್ನು ತಿಳಿಸಲು ನನಗೆ ಯಾವ ಹಿಂಜರಿಕೆಯೂ ಇಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಇದಲ್ಲದೆ, ಸಾರ್ವತ್ರಿಕ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಸಾಂವಿಧಾನಿಕವಾಗಿ ಅನುಮಾನಾಸ್ಪದವಾದ, ಪ್ರಾಯೋಗಿಕವಾಗಿ ಕಾರ್ಯಸಾಧ್ಯವಲ್ಲದ ಮತ್ತು ವ್ಯವಸ್ಥಾಪನಾತ್ಮಕವಾಗಿ ಕಾರ್ಯಗತಗೊಳಿಸಲಾಗದ ಕಲ್ಪನೆಯನ್ನು ರಾಷ್ಟ್ರದ ಮೇಲೆ ಹೇರುವ ಹಠಾತ್ ಪ್ರಯತ್ನವು ಸರ್ಕಾರದ ದುರುದ್ದೇಶಗಳ ಬಗ್ಗೆ ಗಂಭೀರ ಕಳವಳ ಮೂಡಿಸುತ್ತಿದೆ ಎಂದು ಅವರು ಹೇಳಿದರು. ರಾಜ್ಯಸಭೆಯಲ್ಲಿ ಪ್ರಸ್ತುತ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಮಿತಿಯಿಂದ ಹೊರಗಿಟ್ಟಿರುವುದಕ್ಕೆ ಕೂಡ ಅಧೀರ್ ರಂಜನ್ ಚೌಧರಿ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಉದ್ದೇಶಪೂರ್ವಕವಾಗಿ ಮಾಡಲಾದ ಅವಮಾನ ಎಂದಿದ್ದಾರೆ.

ಲೋಕಸಭೆ, ರಾಜ್ಯ ವಿಧಾನಸಭೆಗಳು, ಪುರಸಭೆಗಳು ಮತ್ತು ಪಂಚಾಯತ್​ಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ವಿಷಯದ ಬಗ್ಗೆ ಪರಿಶೀಲಿಸಲು ಮತ್ತು ಶಿಫಾರಸುಗಳನ್ನು ಮಾಡಲು ಕೇಂದ್ರವು ಶನಿವಾರ ಎಂಟು ಸದಸ್ಯರ ಸಮಿತಿಯೊಂದನ್ನು ರಚಿಸಿದೆ. ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಸಮಿತಿಯಲ್ಲಿ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್​​ನ ನಾಯಕ ಅಧಿರ್ ರಂಜನ್ ಚೌಧರಿ, ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಮತ್ತು ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎನ್.ಕೆ.ಸಿಂಗ್ ಸದಸ್ಯರಾಗಿರುತ್ತಾರೆ ಎಂದು ಅಧಿಕೃತ ಅಧಿಸೂಚನೆ ತಿಳಿಸಿದೆ. ಆದರೆ, ನಂತರದ ಬೆಳವಣಿಗೆಯಲ್ಲಿ ಅಧಿರ್ ರಂಜನ್ ಚೌಧರಿ, ಈ ಸಮಿತಿಯಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ತೆಲಂಗಾಣ: 20 ವರ್ಷಗಳ ನಂತರ ಮತ್ತೆ ಕಾಂಗ್ರೆಸ್​ ಜತೆ ಮೈತ್ರಿಗೆ ಮುಂದಾದ ಎಡಪಕ್ಷಗಳು

For All Latest Updates

ABOUT THE AUTHOR

...view details