ಕರ್ನಾಟಕ

karnataka

ETV Bharat / bharat

ಆಂಬ್ಯುಲೆನ್ಸ್​ ಸಿಗದೇ ಕೈಗಾಡಿಯಲ್ಲೇ ಅನಾರೋಗ್ಯಪೀಡಿತ ಪತ್ನಿಯ ಆಸ್ಪತ್ರೆಗೆ ಕರೆದೊಯ್ದ ಪತಿ - woman went to hospital in pushcart

108 ಸಹಾಯವಾಣಿಗೆ ಕರೆ ಮಾಡಿದರೂ ಆಂಬ್ಯುಲೆನ್ಸ್​ ಸೇವೆ ನೀಡದ ಕಾರಣ ವ್ಯಕ್ತಿಯೊಬ್ಬ ತನ್ನ ಅನಾರೋಗ್ಯಪೀಡಿತ ಪತ್ನಿಯನ್ನು ಕೈಗಾಡಿಯಲ್ಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮಧ್ಯಪ್ರದೇಶದ ರೇವಾದಲ್ಲಿ ಘಟನೆ ನಡೆದಿದೆ.

sick-wife-to-hospital-on-pushcart
ಕೈಗಾಡಿಯಲ್ಲಿ ಅನಾರೋಗ್ಯ ಪತ್ನಿಯ ಆಸ್ಪತ್ರೆಗೆ

By

Published : Jan 12, 2023, 1:08 PM IST

ರೇವಾ (ಮಧ್ಯಪ್ರದೇಶ):108 ಸಮಸ್ಯೆಗಳು ತೀರುವ ಲಕ್ಷಣಗಳೇ ಕಾಣುತ್ತಿಲ್ಲ. ಏನಾದರೊಂದು ವಿವಾದಕ್ಕೆ ಆಂಬ್ಯುಲೆನ್ಸ್​ ಸೇವೆ ಸಿಲುಕುತ್ತಲೇ ಇರುತ್ತದೆ. ಮಧ್ಯಪ್ರದೇಶದ ರೇವಾದಲ್ಲಿ ಜೀವರಕ್ಷಕ ವಾಹನ ಸಿಗದೇ ಅನಾರೋಗ್ಯಪೀಡಿತ ಪತ್ನಿಯನ್ನು ತಳ್ಳುವ ಗಾಡಿಯಲ್ಲಿ ವ್ಯಕ್ತಿಯೊಬ್ಬ ಕರೆದೊಯ್ದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸರ್ಕಾರದ ಆರೋಗ್ಯ ಸೇವೆಗೆ ಟೀಕೆ ವ್ಯಕ್ತವಾಗಿದೆ.

ಘಟನೆಯ ವಿವರ:ರೇವಾ ಜಿಲ್ಲೆಯ ಹನುಮಾನ ಎಂಬಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಅನಾರೋಗ್ಯಕ್ಕೀಡಾದ ಪತ್ನಿಯನ್ನು 5 ಕಿ.ಮೀ ದೂರವಿರುವ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ವೃದ್ಧ ಪತಿ ಆಂಬ್ಯುಲೆನ್ಸ್​ ಸೇವೆಯಾದ 108 ಸಹಾಯವಾಣಿಗೆ ಕರೆ ಮಾಡಿದ್ದಾರೆ. ಆದರೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇದರಿಂದ ಬೇಸರಗೊಂಡ ವ್ಯಕ್ತಿ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಅನಿವಾರ್ಯವಾಗಿ ತಳ್ಳುವ ಗಾಡಿಯಲ್ಲಿ ಅನಾರೋಗ್ಯಕ್ಕೀಡಾದ ಮಹಿಳೆಯನ್ನು ಕರೆದುಕೊಂಡು ಬಂದಿದ್ದಾರೆ.

ಆಸ್ಪತ್ರೆಗೆ ಪತ್ನಿಯನ್ನು ತಳ್ಳುವ ಗಾಡಿಯಲ್ಲಿ ಸಾಗಿಸುತ್ತಿರುವ ಕರುಣಾಜನಕ ದೃಶ್ಯವನ್ನು ನೋಡಿದ ದಾರಿಹೋಕರೊಬ್ಬರು ಘಟನೆಯ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದು ವೈರಲ್​ ಆಗಿದ್ದು, ಅವಸರಕ್ಕಾಗದ ಆಂಬ್ಯುಲೆನ್ಸ್​ ಸೇವೆಯ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ. ಇದನ್ನು ಪ್ರಶ್ನಿಸಿ ಈಟಿವಿ ಭಾರತ್​ ಸಹಾಯವಾಣಿಗೆ ಕರೆ ಮಾಡಿ ವಿಚಾರಿಸಿದಾಗ, ತಮಗೆ ಈ ಬಗ್ಗೆ ಮಾಹಿತಿ ಇಲ್ಲ ಎಂಬ ಉತ್ತರ ಅಲ್ಲಿನ ಸಿಬ್ಬಂದಿಯಿಂದ ಬಂದಿದೆ.

ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್​ ಸಿಗದ ಕಾರಣ ಅನಾರೋಗ್ಯಕ್ಕೀಡಾದ ವ್ಯಕ್ತಿಗಳನ್ನು ಸಂಬಂಧಿಕರು ತಳ್ಳುವಗಾಡಿ, ಬೈಕ್​, ಇತರ ಸಾರಿಗೆ ವಿಧಾನಗಳ ಮೂಲಕ ಕರೆದೊಯ್ಯವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿವೆ. ಆಂಬ್ಯುಲೆನ್ಸ್ ಸೇವೆಗಳು ಲಭ್ಯವಾಗದಿರುವುದು ಜನರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಬಿಹಾರದಲ್ಲೂ ನಡೆದಿತ್ತು ಘಟನೆ:ಆಂಬ್ಯುಲೆನ್ಸ್​​​ ಬಾರದ ಕಾರಣ ತರಕಾರಿ ಮಾರುವ ತಳ್ಳು ಗಾಡಿಯಲ್ಲೇ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಸಾಗಿಸಿದ ದಯನೀಯ ಘಟನೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ತವರು ಜಿಲ್ಲೆಯಾದ ನಳಂದಾದಲ್ಲಿ ಈಚೆಗೆ ಬೆಳಕಿಗೆ ಬಂದಿತ್ತು. ಹೆರಿಗೆ ನೋವು ಕಾಣಿಸಿಕೊಂಡಿದ್ದ ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲು ಆಂಬ್ಯುಲೆನ್ಸ್​ ಸಹಾಯವಾಣಿಗೆ ಕರೆ ಮಾಡಿದರೂ ಜೀವರಕ್ಷಕ ವಾಹನ ಬಂದಿರಲಿಲ್ಲ. ಹೀಗಾಗಿ ಪತಿ ಕಮ್ರುದ್ದೀನ್ ಗಂಜ್ ನಿವಾಸಿಯಾದ ರಾಜೀವ್ ಪ್ರಸಾದ ಎಂಬುವರು ಗರ್ಭಿಣಿ ಪತ್ನಿಯನ್ನು ತಳ್ಳು ಗಾಡಿಯಲ್ಲೇ ಆಸ್ಪತ್ರೆಗೆ ಸೇರಿಸಿದ್ದರು.

ಇಂತಹ ಸಮಸ್ಯೆಗಳ ನಿವಾರಣೆಗಾಗಿ ಬಿಹಾರದ ಆರೋಗ್ಯ ಸಚಿವ ತೇಜಸ್ವಿ ಯಾದವ್ ಅವರು ಪ್ರತಿ ಜಿಲ್ಲಾ ಆಸ್ಪತ್ರೆಗೆ ಹಾಸಿಗೆ, ಸ್ಟ್ರೆಚರ್‌ಗಳು, ಆಂಬ್ಯುಲೆನ್ಸ್, ಆಮ್ಲಜನಕ ಸಿಲಿಂಡರ್‌, ಔಷಧಿ, ಮತ್ತು ಇತರ ಸಾಧನಗಳನ್ನು ಉಚಿತವಾಗಿ ಒದಗಿಸಲು ಮಿಷನ್ 60 ಯೋಜನೆಯನ್ನು ಪ್ರಾರಂಭಿಸಿದ್ದಾರೆ.

ಮೊಮ್ಮಗನನ್ನು ಕೈಗಾಡಿಯಲ್ಲಿ ಆಸ್ಪತ್ರೆ ಸೇರಿಸಿದ್ದ ಅಜ್ಜ:ಅಜ್ಜನೊಬ್ಬ ಅನಾರೋಗ್ಯಕ್ಕೀಡಾದಮೊಮ್ಮಗನನ್ನು ಕೈಗಾಡಿಯಲ್ಲೇ ಆಸ್ಪತ್ರೆಗೆ ಕರೆತಂದ ಘಟನೆ ಉತ್ತರ ಪ್ರದೇಶದಲ್ಲೂ ಈಚೆಗೆ ನಡೆದಿತ್ತು. ಇದರ ವಿಡಿಯೋ ಕೂಡ ವೈರಲ್ ಆಗಿದೆ. 3 ಕಿಲೋ ಮೀಟರ್​ ದೂರದ ಆರೋಗ್ಯ ಕೇಂದ್ರಕ್ಕೆ ಮೊಮ್ಮಗನನ್ನು ಅಜ್ಜ ಕರೆದೊಯ್ದಿದ್ದು, ಬಳಿಕ ವೈದ್ಯರು ಚಿಕಿತ್ಸೆ ನೀಡಿದ್ದರು.

ಇದನ್ನೂ ಓದಿ:ಬಿಸಿಯೂಟದಲ್ಲಿ ಹಲ್ಲಿ ಅಲ್ಲ, ಹಾವು! 20 ವಿದ್ಯಾರ್ಥಿಗಳು ಅಸ್ವಸ್ಥ, ಶಿಕ್ಷಕರ ವಾಹನ ಧ್ವಂಸ

ABOUT THE AUTHOR

...view details