ಕರ್ನಾಟಕ

karnataka

ETV Bharat / bharat

ಚುನಾವಣಾ ಹಬ್ಬದಲ್ಲಿ ಕುರುಡು ಕಾಂಚಾಣ ಕುಣಿತ.. ಪ್ರಜಾಪ್ರಭುತ್ವ ಉಳಿವಿಗೆ ಬೇಕಿದೆ ತುರ್ತು​ ಸರ್ಜರಿ

ವಿಶ್ವಕ್ಕೇ ಮಾದರಿಯಾಗಿದ್ದ ಭಾರತೀಯ ಪ್ರಜಾಪ್ರಭುತ್ವ, ಅದರ ಮೌಲ್ಯಗಳು ಈಗೀಗ ಕುಸಿಯುತ್ತಾ ಬರುತ್ತಿವೆ. ಹಣವಿದ್ದರೆ ಚುನಾವಣೆ ಎಂಬಂತಾಗಿದ್ದು, ಶೀಘ್ರವೇ ಬದಲಾವಣೆಗಳು ತರಬೇಕಿದೆ. ಇಲ್ಲವಾದಲ್ಲಿ ಮುಂದೊಂದು ದಿನ ಪ್ರಜಾಪ್ರಭುತ್ವದ ಅಂಶಗಳೇ ಅಣಕಕ್ಕೀಡಾಗುವ ಸಂಭವ ಹೆಚ್ಚಾಗುತ್ತಿದೆ.

By

Published : Jul 11, 2023, 5:14 PM IST

ಚುನಾವಣಾ ಹಬ್ಬದಲ್ಲಿ ಕುರುಡು ಕಾಂಚಾಣ ಕುಣಿತ
ಚುನಾವಣಾ ಹಬ್ಬದಲ್ಲಿ ಕುರುಡು ಕಾಂಚಾಣ ಕುಣಿತ

ಪ್ರಜಾಪ್ರಭುತ್ವದ ಹಬ್ಬ ಎಂದೇ ಕರೆಯುವ ಚುನಾವಣೆಗಳು ತಮ್ಮ ಪಾವಿತ್ರ್ಯತೆ ಕಳೆದುಕೊಂಡಿವೆ. ರಾಜಕೀಯ ಪಕ್ಷಗಳ ಹೊಣೆಗೇಡಿತನ, ಅಧಿಕಾರದ ಲಾಲಸೆಯಿಂದಾಗಿ ಚುನಾವಣೆಗಳ ಸ್ವರೂಪವೇ ಬದಲಾಗಿದೆ. ಅಭ್ಯರ್ಥಿಗಳು ಮತ ಪಡೆಯಲು ಆಮಿಷಗಳನ್ನು ಒಡ್ಡುವಂತಹ ಹಾಗೂ ಬೆದರಿಕೆಯಂತ ಕೆಲಸಗಳ ಮೊರೆ ಹೋಗಿದ್ದಾರೆ. ಇದು ಪ್ರಜಾಪ್ರಭುತ್ವದ ಮೇಲೆಯೇ ನಕಾರಾತ್ಮಕ ಪರಿಣಾಮ ಬೀರಿದೆ. ಹಲವು ಗಂಭೀರ ಆರೋಪಗಳನ್ನು ಹೊತ್ತಿದ್ದ ತಮಿಳುನಾಡಿನ ಸಂಸದರೊಬ್ಬರ ಆಯ್ಕೆಯನ್ನೇ ಇದೀಗ ಮದ್ರಾಸ್​ ಹೈಕೋರ್ಟ್​ ಅಸಿಂಧುಗೊಳಿಸಿದೆ.

ಈ ಪ್ರಕರಣ ದೇಶದಲ್ಲಿ ಮೊದಲೇನಲ್ಲ. ಕೊನೆಯದ್ದೂ ಅಲ್ಲವೇನೋ?. ದೇಶಾದ್ಯಂತ ಅದೆಷ್ಟೋ ಶಾಸಕರು, ಸಂಸದರು ಅಕ್ರಮವಾಗಿ ಆಯ್ಕೆಯಾಗಿ ಸ್ಥಾನದಿಂದ ವಜಾಗೊಂಡಿದ್ದಾರೆ. 2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜನರಿಗೆ ನಕಲಿ ವಿಮಾ ಬಾಂಡ್‌ಗಳನ್ನು ವಿತರಿಸಿದ ಆರೋಪ ಸಾಬೀತಾದ ಕಾರಣ ಮಾರ್ಚ್‌ನಲ್ಲಿ ಜೆಡಿಎಸ್ ಶಾಸಕರನ್ನೊಬ್ಬರನ್ನ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಆ ಬಳಿಕ ಅವರು ಮೇಲ್ಮನವಿ ಸಲ್ಲಿಸಿ ತಾತ್ಕಾಲಿಕ ರಿಲೀಫ್​ ಕೂಡಾ ಪಡೆದುಕೊಂಡಿದ್ದರು. ಪ್ರಜಾಪ್ರಭುತ್ವವನ್ನು ಅಣಕಿಸಿ ಅನ್ಯ ಮಾರ್ಗದಲ್ಲಿ ಗೆದ್ದವರನ್ನು ವಜಾಗೊಳಿಸಬೇಕು ಎಂಬುದು ನಿರ್ವಿವಾದ.

ಕಠಿಣ ಶಿಕ್ಷೆ ಜಾರಿ ಬೇಕಿದೆ:ಆದರೆ, ಈ ಕ್ರಮ ಅತ್ಯಂತ ತ್ವರಿತವಾಗಿ ನಡೆಯಬೇಕು. ಕೆಲ ಪ್ರಕರಣಗಳಲ್ಲಿ ಆಯ್ಕೆಯಾದ ಶಾಸಕರು, ಸಂಸದರು ಅಧಿಕಾರ ಮುಗಿದರೂ ಅವರ ಮೇಲಿನ ಆರೋಪಗಳು ಇನ್ನೂ ಸಾಬೀತಾಗಿರುವುದಿಲ್ಲ. ಹಾಗಾದಲ್ಲಿ ತನಿಖೆಗೆ ಬೆಲೆಯೇ ಇಲ್ಲವಾಗುತ್ತದೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ನಸೀಮ್ ಜೈದಿ ಅವರು ಸುಳ್ಳು ವಿವರಗಳನ್ನು ನೀಡಿ ಪ್ರಮಾಣಪತ್ರ ಸಲ್ಲಿಸಿದ ಅಭ್ಯರ್ಥಿಗಳಿಗೆ 2 ವರ್ಷಗಳ ಜೈಲು ಶಿಕ್ಷೆ ಮತ್ತು 6 ವರ್ಷಗಳವರೆಗೆ ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಬೇಕು ಎಂದು ಹೇಳಿದ್ದರು.

ಲಂಚ ಮತ್ತು ಮತದಾರರ ಮೇಲೆ ಪ್ರಭಾವ ಬೀರಿದ ಪ್ರಕರಣಗಳಲ್ಲಿ ಆರೋಪ ಸಾಬೀತಾದರೆ ಆಯಾ ಸಂಸದರು ಮತ್ತು ಶಾಸಕರನ್ನು ಅನರ್ಹತೆಗೆ ಆಯೋಗ ಪ್ರಸ್ತಾಪಿಸಿತ್ತು. 2017ರಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ತರುವಂತೆ ಕೇಂದ್ರಕ್ಕೆ ಪತ್ರವನ್ನೂ ಬರೆಯಲಾಗಿತ್ತು. ಆದರೆ, ಇಂತಹ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುವ ಎದೆಗಾರಿಕೆ ಸಾಧ್ಯವೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ!

ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು, ನಿಜವಾದ ರಾಜಕೀಯವೆಂದರೆ ಮಾನವನ ಸಂತೋಷವನ್ನು ಹೆಚ್ಚಿಸುವುದಾಗಿದೆ. ಅಂತಹ ಕಲ್ಪನೆಯನ್ನು ಹೊಂದಿರದ ಪಕ್ಷಗಳು ಸುಳ್ಳುಗಾರ, ಭ್ರಷ್ಟ ಮತ್ತು ಅರಾಜಕತಾವಾದಿ ನಾಯಕರನ್ನು ಹುಟ್ಟು ಹಾಕುತ್ತವೆ. ಪ್ರಾಮಾಣಿಕವಾಗಿ ಜನಸೇವೆ ಮಾಡಲು ಬಯಸುವ ಯಾವೊಬ್ಬ ಸಾಮಾನ್ಯನೂ ಈಗಿನ ದುಬಾರಿ ಚುನಾವಣೆಗಳಿಂದಾಗಿ ಶಾಸಕಾಂಗಕ್ಕೆ ಕಾಲಿಡಲಾರದಷ್ಟು ದೂರವಾಗಿದ್ದಾನೆ ಎಂದು ಅವರು ಹೇಳಿದ್ದರು.

ಕೋಟಿ ಇದ್ದರೆ ವೋಟು!:1999ರ ಬಳಿಕ ಸಾರ್ವತ್ರಿಕ ಚುನಾವಣೆಗಳು ಹಣದ ಹಂಗಿನ ಮೇಲೆಯೇ ನಡೆಯುವಂತಾಗಿದೆ. ಆಗಿನ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ಪ್ರಚಾರಕ್ಕಾಗಿ 10,000 ಕೋಟಿ ರೂ.ವರೆಗೆ ಹಣ ವ್ಯಯಸಿದ್ದರು ಎಂದು ಅಂದಾಜಿಸಲಾಗಿದೆ. 2019ರ ಲೋಕಸಭೆ ಚುನಾವಣೆಗೆ ಅದು 60,000 ಕೋಟಿ ರೂ.ಗೆ ತಲುಪಿದೆ ಎಂದು ಸಿಎಂಎಸ್ ಅಧ್ಯಯನದಿಂದ ತಿಳಿದು ಬಂದಿತ್ತು. ವಿಧಾನಸಭೆ ಚುನಾವಣೆಗಳೂ ಇದಕ್ಕೆ ಹೊರತಾಗಿಲ್ಲ. ಇಲ್ಲಿಯೂ ಹಣದ ಹೊಳೆಯೇ ಹರಿದುಬರುತ್ತದೆ. ಉಪಚುನಾವಣೆಯೊಂದಕ್ಕೆ ರಾಜಕೀಯ ಪಕ್ಷಗಳು ಕನಿಷ್ಠ 100 ರಿಂದ 500 ಕೋಟಿ ರೂಪಾಯಿ ಖರ್ಚು ಮಾಡಿರುವುದು ಬಹಿರಂಗ ರಹಸ್ಯವಾಗಿದೆ. ಪ್ರತಿ ವೋಟಿಗೆ 5000 ರೂ.ನಂತೆ ನಾಯಕರು ಹಣ ಹಂಚುತ್ತಿರುವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿವೆ.

ಕೂಲಿ ಕಾರ್ಮಿಕರಿಗೆ ಮದ್ಯ, ಭೋಜನ ಉಣಬಡಿಸಿ ರಾಜಕೀಯ ಪಕ್ಷಗಳು ನಡೆಸುತ್ತಿರುವ ಅಪಪ್ರಚಾರದಿಂದ ಚುನಾವಣೆ ಮತ್ತು ಸಮಾಜ ಕೆಟ್ಟ ಸ್ಥಿತಿಗೆ ಬಂದು ತಲುಪಿದೆ. ಯಾವುದೇ ಮಾಹಿತಿ ಕ್ಷಣಾರ್ಧದಲ್ಲಿ ಜನರನ್ನು ತಲುಪುವ ಡಿಜಿಟಲ್ ಯುಗವಿದು. ಇಂತಹ ಕಾಲಘಟ್ಟದಲ್ಲೂ ಭಾರಿ ವೆಚ್ಚ ಮಾಡಿ ಸಾರ್ವಜನಿಕ ಸಭೆಗಳನ್ನು ನಡೆಸುವುದರ ಔಚಿತ್ಯವೇನು? ಆಯಾ ಪಕ್ಷಗಳ ಸಿದ್ಧಾಂತಗಳು ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವ ಯೋಜನೆಗಳಾಗಬೇಕೇ ಹೊರತು ಪ್ರಚಾರದ ಗೀಳಾಗಬಾರದು.

ಮೂಲೆಗುಂಪಾದ ಸದ್ವಿಚಾರಗಳು:ಈಗಿನ ಕಾಲಘಟ್ಟದಲ್ಲಿ ಇಂತಹ ಸದ್ವಿಚಾರಗಳು ಬದಿಗೊತ್ತಲಾಗುತ್ತಿದೆ. ಚುನಾವಣಾ ರ‍್ಯಾಲಿಗಳಲ್ಲಿ ಅಸಹ್ಯಕರ ವೈಯಕ್ತಿಕ ಟೀಕೆಗಳು, ಜಾತಿವಾದದ ಬಗ್ಗೆ ದ್ವೇಷಪೂರಿತ ಕಾಮೆಂಟ್‌ಗಳು ಮತ್ತು ಕೋಮುವಾದಿ ಹೇಳಿಕೆಗಳು ಹೇರಳವಾಗಿವೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಪರಿಕಲ್ಪನೆಯೇ ಮರೆಯಾಗುತ್ತಿದೆ. ಕೆಟ್ಟ ರಾಜಕೀಯದಿಂದಾಗಿ ಭಾರತೀಯ ಪ್ರಜಾಪ್ರಭುತ್ವವೇ ಉಸಿರುಗಟ್ಟುತ್ತಿದೆ. ಹೀಗಾಗಿ ತಕ್ಷಣಕ್ಕೆ ಸಮಗ್ರ ಚುನಾವಣಾ ಸುಧಾರಣೆಗಳ ಅತ್ಯಗತ್ಯವಿದೆ.

ಇದನ್ನೂ ಓದಿ:ಭಾರತೀಯ ಸಂವಿಧಾನದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ: ನೀವು ತಿಳಿದುಕೊಳ್ಳಬೇಕಾದ ಅಂಶಗಳಿವು!

ABOUT THE AUTHOR

...view details