ವಿಶಾಖಪಟ್ಟಣಂ (ಆಂಧ್ರಪ್ರದೇಶ): ಅನಾರೋಗ್ಯದಿಂದ ಸಾವನ್ನಪ್ಪಿದ ಪತ್ನಿ ಮೃತದೇಹವನ್ನು ಒಡಿಶಾದ ಕೊರಾಪುಟ್ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಹೆಗಲ ಮೇಲೆ ಹೊತ್ತು ಸುಮಾರು ನಾಲ್ಕು ಕಿಲೋಮೀಟರ್ ದೂರದವರೆಗೆ ನಡೆದುಕೊಂಡು ಹೋಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಆಟೋದಲ್ಲಿ ಪತ್ನಿಯನ್ನು ಕರೆದುಕೊಂಡು ಬರುತ್ತಿದ್ದಾಗ ಆಕೆ ಸಾವನ್ನಪ್ಪಿದ ನಂತರ, ಆಟೋ ಚಾಲಕ ಮಧ್ಯದಲ್ಲೇ ಮೃತದೇಹ ಬಿಟ್ಟು ತೆರಳಿದ್ದಾನೆ ಎಂದು ಹೇಳಲಾಗಿದೆ. ಹೀಗಾಗಿಯೇ, ನಡುರಸ್ತೆಯಲ್ಲಿ ಏನು ಮಾಡಬೇಕೆಂದು ತೋಚದೇ ಶವವನ್ನು ಪತಿ ಹೊತ್ತು ಸಾಗಿದ್ದಾರೆ.
ಕೊರಾಪುಟ್ ಜಿಲ್ಲೆಯ ಪೊಟ್ಟಂಗಿ ಸಮೀಪದ ಸೊರಡ ಗ್ರಾಮದ ಈಡೆ ಗುರು (30) ಎಂಬಾಕೆಯೇ ಮೃತ ಮಹಿಳೆ. 35 ವರ್ಷದ ಪತಿ ಸಾಮುಲು ಎಂಬುವರೇ ಪತ್ನಿ ಮೃತದೇಹವನ್ನು ಹೊತ್ತುಕೊಂಡು ಸಾಗಿದ ಪತಿ. ಕೆಲವು ದಿನಗಳಿಂದ ಪತ್ನಿ ಈಡೆ ಗುರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿಯೇ ವಾರದ ಹಿಂದೆ ಒಡಿಶಾದ ಗಡಿ ಹೊಂದಿಕೊಂಡಿರುವ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಟಗರಪುವಲಸ ಬಳಿಯ ಖಾಸಗಿ ಆಸ್ಪತ್ರೆಗೆ ಸಾಮುಲು ತನ್ನ ಪತ್ನಿಯನ್ನು ದಾಖಲಿಸಿದ್ದರು. ಆದರೆ, ಆಕೆಯ ಆರೋಗ್ಯ ಸ್ಥಿತಿ ಸುಧಾರಿಸದ ಕಾರಣ ಬುಧವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ರಸ್ತೆಯಲ್ಲೇ ಶವ ಬಿಟ್ಟು ಹೋದ ಆಟೋ ಚಾಲಕ: ಪತ್ನಿಯ ಆರೋಗ್ಯ ಸುಧಾರಿಸದ ಮತ್ತು ಆಸ್ಪತ್ರೆಯಿಂದಲೂ ಡಿಸ್ಚಾರ್ಜ್ ಮಾಡಿದ ನಂತರ ಪತಿ ಸಾಮುಲು, ಆಕೆಯನ್ನು ತನ್ನೂರಿಗೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದ. ಅಂತೆಯೇ, ಆಟೋದಲ್ಲಿ ಪತ್ನಿ ಈಡೆ ಗುರುವನ್ನು ಕರೆದುಕೊಂಡು ಹೋಗುತ್ತಿದ್ದ. ಆದರೆ, ಆಂಧ್ರದ ಮತ್ತೊಂದು ಗಡಿ ಜಿಲ್ಲೆಯ ವಿಜಯನಗರದ ಗಂಟ್ಯಾಡ ಮಂಡಲದ ರಾಮಾವರಂ ಸೇತುವೆ ತಲುಪುತ್ತಿದಂತೆ ಆಟೋದಲ್ಲಿ ಪತ್ನಿ ಕೊನೆಯುಸಿರೆಳೆದಿದ್ದಾರೆ. ಆಗ ಆಟೋ ಚಾಲಕ ಮನುಷ್ಯತ್ವವನ್ನು ಮರೆತು ಮೃತದೇಹವನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ ಎಂದು ಹೇಳಲಾಗುತ್ತಿದೆ.