ಕರ್ನಾಟಕ

karnataka

ಉಕ್ರೇನ್​​ನಲ್ಲಿ ಭಾರತೀಯರ ಒತ್ತೆ: ರಷ್ಯಾ ಆರೋಪಕ್ಕೆ ಭಾರತ ಹೇಳಿದ್ದೇನು?

By

Published : Mar 3, 2022, 10:27 AM IST

Updated : Mar 3, 2022, 10:52 AM IST

ಕಳೆದ ರಾತ್ರಿಯಷ್ಟೇ ಪ್ರಧಾನಿ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರು ಉಕ್ರೇನ್, ಅದರಲ್ಲೂ ಖಾರ್ಕಿವ್ ಪರಿಸ್ಥಿತಿ ಮತ್ತು ಭಾರತೀಯರ ಸುರಕ್ಷತೆ ಬಗ್ಗೆ ಚರ್ಚಿಸಿದ್ದರು. ಇದರ ಬೆನ್ನಲ್ಲೇ ಇಂತಹ ಆರೋಪವನ್ನು ರಷ್ಯಾ ಮಾಡಿದೆ.

Students taken hostage
Students taken hostage

ದೆಹಲಿ: ಭಾರತೀಯರಿಗೆ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಮತ್ತಷ್ಟು ಆತಂಕ ಸೃಷ್ಟಿಸಿದೆ. ಉಕ್ರೇನ್​​ನಲ್ಲಿ ಸಿಲುಕಿರುವ ಭಾರತೀಯರನ್ನು ಒತ್ತೆ ಇಟ್ಟುಕೊಂಡಿರುವುದು ಮತ್ತು ಅವರಿಗೆ ಥಳಿಸಲಾಗಿದೆ ಎಂಬ ವರದಿ ಬರುತ್ತಿದೆ. ಅದರಲ್ಲೂ ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಮಾನವ ಗುರಾಣಿಯಾಗಿ ಬಳಕೆ ಮಾಡುತ್ತಿದೆ ಎಂದು ಖುದ್ದು ರಷ್ಯಾ ಆರೋಪಿಸಿದೆ. ಆದರೆ, ಇದನ್ನು ಭಾರತದ ವಿದೇಶಾಂಗ ಸಚಿವಾಲಯ ಸ್ಪಷ್ಟವಾಗಿ ನಿರಾಕರಿಸಿದೆ.

ಉಕ್ರೇನ್​ನಲ್ಲಿ ಸಿಲುಕಿರುವ ಭಾರತದ ವಿದ್ಯಾರ್ಥಿಗಳನ್ನು ಉಕ್ರೇನ್​ ಭದ್ರತಾ ಪಡೆಗಳು ಒತ್ತೆಯಾಗಿರಿಸಿಕೊಂಡಿವೆ. ಅವರನ್ನು ಮಾನವ ಗುರಾಣಿಯಾಗಿ ಬಳಕೆ ಮಾಡಲಾಗುತ್ತಿದೆ ಎಂದು ಭಾರತದಲ್ಲಿರುವ ರಷ್ಯಾದ ರಾಯಭಾರಿ ಕಚೇರಿ ದೂರಿದೆ. ಕಳೆದ ರಾತ್ರಿಯಷ್ಟೇ ಪ್ರಧಾನಿ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರು ಉಕ್ರೇನ್, ಅದರಲ್ಲೂ ಖಾರ್ಕಿವ್ ಪರಿಸ್ಥಿತಿ ಮತ್ತು ಭಾರತೀಯರ ಸುರಕ್ಷತೆ ಬಗ್ಗೆ ಚರ್ಚಿಸಿದ್ದರು. ಇದರ ಬೆನ್ನಲ್ಲೇ ಇಂತಹ ಆರೋಪವನ್ನು ರಷ್ಯಾ ಮಾಡಿದೆ.

ರಷ್ಯಾ ಹೇಳಿದ್ದೇನು?: ಸದ್ಯ ಮಾಹಿತಿ ಪ್ರಕಾರ ಉಕ್ರೇನ್-ಪೋಲಿಷ್ ಗಡಿಯಲ್ಲಿ ಭಾರತೀಯರ ವಿದ್ಯಾರ್ಥಿಗಳನ್ನು ಉಕ್ರೇನ್​ ಭದ್ರತಾ ಪಡೆ ಒತ್ತೆಯಾಳಾಗಿ ಇಟ್ಟುಕೊಂಡಿದೆ. ಅವರನ್ನು ಮಾನವ ಗುರಾಣಿಯಾಗಿ ಬಳಕೆ ಮಾಡುತ್ತಿದೆ. ರಷ್ಯಾಕ್ಕೆ ಬರುವುದನ್ನು ತಡೆಯಲೆಂದೇ ಇದನ್ನು ಮಾಡಲಾಗುತ್ತಿದೆ. ಆದರೂ, ಭಾರತೀಯರ ಸುರಕ್ಷತೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ರಷ್ಯಾ ಸೇನೆಯು ತೆಗೆದುಕೊಳ್ಳಲಿದೆ. ಅವರನ್ನು ತಮ್ಮ ಮನೆಗಳಿಗೆ ರಷ್ಯಾದ ಸೇನಾ ವಿಮಾನಗಳು ಅಥವಾ ಭಾರತೀಯ ವಿಮಾನಗಳ ಮೂಲಕ ಕಳುಹಿಸಿಕೊಡಲು ಸಿದ್ಧ ಇರುವುದಾಗಿ ರಷ್ಯಾದ ರಾಯಭಾರಿ ಟ್ವೀಟ್ ಮಾಡಿದ್ದಾರೆ.

ಭಾರತೀಯರಿಗೆ ಥಳಿತ?:ಇನ್ನೊಂದೆಡೆ ಇದೇ ಪೋಲಿಷ್ ಗಡಿಯಲ್ಲಿ ಫೆ.26ರಂದು ಸುಮಾರು 100 ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಭದ್ರತಾ ಪಡೆಗಳು ಥಳಿಸಿವೆ. ಅಲ್ಲದೇ, ಅವರನ್ನು ಉಕ್ರೇನ್‌ಗೆ ಮರಳಿ ಗಡೀಪಾರು ಮಾಡಲಾಗಿತ್ತು. ನಂತರ ಅವರನ್ನು ರೊಮೇನಿಯಾದ ನಿರಾಶ್ರಿತರ ಶಿಬಿರದಲ್ಲಿ ಇರಿಸಲಾಗಿದೆ ಎಂದು ಬೆಲಾರಸ್ ಆರೋಪಿಸಿದೆ.

ವಿಶ್ವಸಂಸ್ಥೆಯಲ್ಲಿ ಬೆಲಾರಸ್‌ನ ರಾಯಭಾರಿ ವ್ಯಾಲೆಂಟಿನ್ ರೈಬಕೋವ್ ಈ ಹೇಳಿಕೆ ನೀಡಿದ್ದಾರೆ. ಇತ್ತ, ಉಕ್ರೇನ್ ರಾಯಭಾರಿ ಸೆರ್ಗೆಯ್ ಕಿಸ್ಲಿಟ್ಸಿಯಾ ಅವರು ಕೂಡ ವಿಶ್ವಸಂಸ್ಥೆಯಲ್ಲಿ ಹೇಳಿಕೆ ನೀಡಿದ್ದು, ರಷ್ಯಾದ ಸೇನಾ ದಾಳಿಯಿಂದ ಭಾರತದ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ಅಲ್ಲದೇ, ಚೀನಿಯರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

ವಿದೇಶಾಂಗ ಸಚಿವಾಲಯದ ಸ್ಪಷ್ಟನೆ:ಈ ಎಲ್ಲ ಬೆಳವಣಿಗೆಗಳ ನಡುವೆ ಭಾರತದ ವಿದೇಶಾಂಗ ಸಚಿವಾಲಯವು ಭಾರತದ ವಿದ್ಯಾರ್ಥಿಗಳನ್ನು ಒತ್ತೆಯಾಗಿರುವ ಬಗ್ಗೆ ಯಾವುದೇ ವರದಿ ಇಲ್ಲ. ಉಕ್ರೇನ್​ನಲ್ಲಿರುವ ನಮ್ಮ ರಾಯಭಾರಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ. ಅಲ್ಲದೇ, ಉಕ್ರೇನ್ ಅಧಿಕಾರಿಗಳು ನಮಗೆ ಸಹಕಾರ ನೀಡುತ್ತಿದ್ದಾರೆ. ಅನೇಕ ವಿದ್ಯಾರ್ಥಿಗಳು ಖಾರ್ಕಿವ್​​ನಿಂದ ಸುರಕ್ಷಿತವಾಗಿ ಬಂದಿದ್ದಾರೆ. ಖಾರ್ಕಿವ್ ಮತ್ತು ಪಕ್ಕದ ಪ್ರದೇಶಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ವಿಶೇಷ ರೈಲು ವ್ಯವಸ್ಥೆ ಮಾಡುವಂತೆ ಉಕ್ರೇನ್ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.

Last Updated : Mar 3, 2022, 10:52 AM IST

ABOUT THE AUTHOR

...view details