ಕರ್ನಾಟಕ

karnataka

ರಾಜಕೀಯ ಪಕ್ಷಗಳ ಹಣಕಾಸು ನಿಯಂತ್ರಿಸುವ ಪ್ರಸ್ತಾವನೆ ಇಲ್ಲ: ಕೇಂದ್ರದ ಸ್ಪಷ್ಟನೆ

By

Published : Feb 3, 2023, 6:26 PM IST

ದೇಶದಲ್ಲಿರುವ ರಾಜಕೀಯ ಪಕ್ಷಗಳ ಹಣಕಾಸು ನಿಯಂತ್ರಿಸುವ ಯಾವುದೇ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಕಾನೂನು ಸಚಿವ ಕಿರಣ್ ರಿಜಿಜು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

no-proposal-to-regulate-finances-of-political-parties-clarification-from-centre
no-proposal-to-regulate-finances-of-political-parties-clarification-from-centre

ನವದೆಹಲಿ: ರಾಜಕೀಯ ಪಕ್ಷಗಳ ಹಣಕಾಸು ನಿಯಂತ್ರಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸರ್ಕಾರ ಶುಕ್ರವಾರ ಲೋಕಸಭೆಗೆ ತಿಳಿಸಿದೆ. ರಾಜಕೀಯ ಪಕ್ಷಗಳ ಹಣಕಾಸು ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಕಿರಣ್ ರಿಜಿಜು ಅಂಥ ಯಾವುದೇ ಪ್ರಸ್ತಾವನೆ ಇಲ್ಲ ಎಂದರು. ಪ್ರಶ್ನೆಗೆ ಲಿಖಿತ ಪ್ರತಿಕ್ರಿಯೆ ನೀಡಿದ ಅವರು, ದೇಶದಲ್ಲಿ ಅಸ್ತಿತ್ವದಲ್ಲಿರುವ ಚುನಾವಣಾ ಪದ್ಧತಿಗಳನ್ನು ಸುಧಾರಿಸಲು ಸರ್ಕಾರವು ಕಾಲಕಾಲಕ್ಕೆ ಚುನಾವಣಾ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.

ಚುನಾವಣಾ ಸುಧಾರಣೆಗಳು ನಿರಂತರ ಪ್ರಕ್ರಿಯೆಯಾಗಿದ್ದು, ದೇಶದಲ್ಲಿ ಅಸ್ತಿತ್ವದಲ್ಲಿರುವ ಚುನಾವಣಾ ಪದ್ಧತಿಗಳನ್ನು ಸುಧಾರಿಸುವ ಸಲುವಾಗಿ, ಭಾರತ ಚುನಾವಣಾ ಆಯೋಗದ ವಿವಿಧ ಪ್ರಸ್ತಾವನೆಗಳನ್ನು ಪರಿಶೀಲಿಸಿದ ನಂತರ ಸರ್ಕಾರವು ಕಾಲಕಾಲಕ್ಕೆ ವಿವಿಧ ತಿದ್ದುಪಡಿ ಕಾಯ್ದೆಗಳ ಮೂಲಕ ಅದನ್ನು ಜಾರಿಗೊಳಿಸುತ್ತದೆ ಎಂದು ಅವರು ಹೇಳಿದರು.

ಮೂರು ಅರ್ಜಿ ಒಟ್ಟಾಗಿ ವಿಚಾರಣೆ: ಚುನಾವಣಾ ಬಾಂಡ್ ಯೋಜನೆ, ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿಗೆ ತರುವುದು ಮತ್ತು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಲ್ಲಿನ ತಿದ್ದುಪಡಿಗಳನ್ನು ಪ್ರಶ್ನಿಸುವ ಅರ್ಜಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರನ್ನೊಳಗೊಂಡ ಪೀಠವು, ಅರ್ಜಿಗಳು ಮೂರು ಪ್ರತ್ಯೇಕ ವಿಷಯಗಳನ್ನು ಒಳಗೊಂಡಿವೆ. ಹೀಗಾಗಿ ಅವುಗಳನ್ನು ಪ್ರತ್ಯೇಕವಾಗಿ ಆಲಿಸುವ ಅಗತ್ಯವಿದೆ ಎಂದು ಹೇಳಿತು.

ಒಂದು ಸೆಟ್ ಅರ್ಜಿಯು ಚುನಾವಣಾ ಬಾಂಡ್ ಯೋಜನೆಯ ಮೂಲಕ ರಾಜಕೀಯ ಪಕ್ಷಗಳಿಗೆ ಧನಸಹಾಯವನ್ನು ಅನುಮತಿಸುವ ಕಾನೂನುಗಳನ್ನು ಪ್ರಶ್ನಿಸಿದೆ. ಎರಡನೇ ಸೆಟ್ ಪಕ್ಷಗಳನ್ನು ಪಾರದರ್ಶಕ ಕಾನೂನು, ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ತರುವ ಬಗ್ಗೆ ವಿಚಾರಣೆಗೆ ಕೋರಿದೆ. ಮೂರನೇ ಸೆಟ್​ನ ಪಿಐಎಲ್​​ 2016 ಮತ್ತು 2018 ರ ಹಣಕಾಸು ಕಾಯಿದೆಯ ಮೂಲಕ ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆ, 2010 ಗೆ ಕೇಂದ್ರ ಸರ್ಕಾರವು ಮಾಡಿದ ತಿದ್ದುಪಡಿಯನ್ನು ಪ್ರಶ್ನಿಸಿದೆ. ತಿದ್ದುಪಡಿ ಮಾಡಲಾದ FCRA ವಿದೇಶಿ ದೇಣಿಗೆಗಳನ್ನು ಸ್ವೀಕರಿಸಲು ರಾಜಕೀಯ ಪಕ್ಷಗಳಿಗೆ ಅನುಮತಿ ನೀಡುತ್ತದೆ.

ಈಗಿನ ಬ್ಯಾಚ್‌ನಲ್ಲಿರುವ ಅರ್ಜಿಗಳನ್ನು ಮೇಲಿನ ಮೂರು ಸವಾಲುಗಳನ್ನು ಉಲ್ಲೇಖಿಸಿ ವಿಭಜಿಸಲಾಗಿದೆ. ಮೂರು ಸೆಟ್‌ಗಳ ಅರ್ಜಿಗಳನ್ನು ಪ್ರತ್ಯೇಕವಾಗಿ ಆಲಿಸಬೇಕಾಗಿದೆ ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ. ಹಳೆಯ ಅರ್ಜಿಗಳು ಸೇರಿದಂತೆ ಕೆಲವು ಅರ್ಜಿಗಳಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಪೀಠವು ಕೇಂದ್ರಕ್ಕೆ ಸೂಚಿಸಿದೆ. ಚುನಾವಣಾ ಬಾಂಡ್ ಯೋಜನೆಯನ್ನು ಪ್ರಶ್ನಿಸುವ ಅರ್ಜಿಗಳನ್ನು ಮಾರ್ಚ್ ಮೂರನೇ ವಾರದಲ್ಲಿ ವಿಚಾರಣೆ ನಡೆಸಲಾಗುವುದು ಮತ್ತು ಏಪ್ರಿಲ್ ಮೊದಲ ವಾರದಲ್ಲಿ ರಾಜಕೀಯ ಪಕ್ಷಗಳನ್ನು ಆರ್‌ಟಿಐ ಅಡಿಯಲ್ಲಿ ತರಲು ಕೋರಿರುವ ಅರ್ಜಿಗಳನ್ನು ವಿಚಾರಣೆ ನಡೆಸಲಾಗುವುದು ಎಂದು ಅದು ಹೇಳಿದೆ. ಎಫ್‌ಸಿಆರ್‌ಎ ತಿದ್ದುಪಡಿಗಳಿಗೆ ಸಂಬಂಧಿಸಿದ ಮೂರನೇ ಬ್ಯಾಚ್ ಅನ್ನು ಏಪ್ರಿಲ್ ಮಧ್ಯದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಸಿಜೆಐ ಹೇಳಿದರು. 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್' ಎಂಬ ಎನ್‌ಜಿಒ ಸಲ್ಲಿಸಿದ ಅರ್ಜಿ ಸೇರಿದಂತೆ ಏಳು ಅರ್ಜಿಗಳನ್ನು ಮಂಗಳವಾರ ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು.

ಇದನ್ನೂ ಓದಿ: ಮತದಾರರ ಪಟ್ಟಿ ಅವ್ಯವಹಾರ ಸಂವಿಧಾನಕ್ಕೆ ವಿರುದ್ಧವಾದದ್ದು: ಸಂತೋಷ್ ಹೆಗ್ಡೆ

ABOUT THE AUTHOR

...view details