ಕರ್ನಾಟಕ

karnataka

By

Published : Feb 23, 2023, 3:50 PM IST

ETV Bharat / bharat

ಬುಡಕಟ್ಟು ಜನರ ಜಮೀನು ವಿವಾದ: ಜಿಲ್ಲಾಧಿಕಾರಿ ಬಂಧನಕ್ಕೆ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಆದೇಶ

ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲಾಧಿಕಾರಿಯನ್ನು ಬಂಧಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಆದೇಶಿಸಿದೆ.

national-commission-for-st-issue-arrest-warrant-against-chandrapur-district-collector
ಬುಡಕಟ್ಟು ಜನರ ಜಮೀನು ವಿವಾದ: ಜಿಲ್ಲಾಧಿಕಾರಿ ಬಂಧನಕ್ಕೆ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಆದೇಶ

ಚಂದ್ರಾಪುರ (ಮಹಾರಾಷ್ಟ್ರ): ಬುಡಕಟ್ಟು ಜನರ ಜಮೀನು ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲಾಧಿಕಾರಿ ವಿನಯ್ ಗೌಡ ಅವರ ಬಂಧನಕ್ಕೆ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಆದೇಶಿಸಿದೆ. ಈ ಪ್ರಕರಣದಲ್ಲಿ ವಿಚಾರಣೆ ಹಾಜರಾಗದ ಕಾರಣ ಮಾರ್ಚ್ 2ರೊಳಗೆ ಡಿಸಿ ಅವರನ್ನು ಬಂಧಿಸಿ ಆಯೋಗದ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಆಯೋಗ ಸೂಚಿಸಿದೆ.

ಚಂದ್ರಾಪುರ ಜಿಲ್ಲೆಯ ಜೀವಾಟಿ ತಾಲೂಕಿನ ಕುಸುಂಬಿ ಗ್ರಾಮದ 24 ಬುಡಕಟ್ಟು ಜನರಿಗೆ ಸೇರಿದ 200 ಎಕರೆ ಭೂಮಿಯನ್ನು 2001ರಲ್ಲಿ ಸಿಮೆಂಟ್ ಕಂಪನಿಗೆ 20 ವರ್ಷಗಳಿಗೆ ಗುತ್ತಿಗೆ ನೀಡಲಾಗಿದೆ. ಆದರೆ, ಇದುವರೆಗೆ ಈ ಬುಡಕ್ಕಟ್ಟು ಕುಟುಂಬಗಳಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಜಮೀನು ಕಳೆದುಕೊಂಡವರಿಗೆ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ವಿನೋದ್​ ಖೋಬ್ರಗಡೆ ಹೋರಾಟ ನಡೆಸುತ್ತಿದ್ದಾರೆ. ಈ ಸಂಬಂಧ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದಲ್ಲೂ ಅವರು ದೂರು ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ್ದ ಆಯೋಗವು ಫೆಬ್ರವರಿ 16ರಂದು ಜಿಲ್ಲಾಧಿಕಾರಿ ವಿನಯ್ ಗೌಡ ಅವರಿಗೆ ಹಾಜರಾಗುವಂತೆ ಆದೇಶಿಸಿತ್ತು. ಆದರೆ, ಇವರು ವಿಚಾರಣೆಗೆ ಹಾಜರಾಗಿರಲಿಲ್ಲ. ಜಿಲ್ಲಾಧಿಕಾರಿ ಬದಲಿಗೆ ಅಪರ ಜಿಲ್ಲಾಧಿಕಾರಿ ತೃಪ್ತಿ ಸೂರ್ಯವಂಶಿ ಹಾಜರಾಗಿದ್ದರು. ಆದ್ದರಿಂದ ಆಯೋಗವು ಸಂವಿಧಾನದ 338 ಎ ಕಲಂ ಉಲ್ಲಂಘನೆಯಡಿ ಫೆ.21ರಂದು ಡಿಸಿ ಅವರನ್ನು ಬಂಧಿಸುವಂತೆ ಡಿಜಿಪಿಗೆ ಆದೇಶಿಸಿದೆ. ಸದ್ಯ ಜಿಲ್ಲಾಧಿಕಾರಿ ವಿರುದ್ಧದ ಆದೇಶವು ಜಿಲ್ಲೆಯ ಅಧಿಕಾರಿಗಳ ವರ್ಗದಲ್ಲಿ ಸಂಚಲನ ಸೃಷ್ಟಿಸಿದೆ.

ಡಿಸಿ ವಿನಯ್ ಗೌಡ ಹೇಳಿದ್ದೇನು?: ಈ ಬಗ್ಗೆ ಈಟಿವಿ ಭಾರತ್​ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ವಿನಯ್ ಗೌಡ, ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಆದೇಶದ ಪ್ರತಿ ಇನ್ನೂ ಅಧಿಕೃತವಾಗಿ ತಮ್ಮ ಕೈಗೆ ಸಿಕ್ಕಿಲ್ಲ. ಆದರೆ, ಇದು ಅರೆಸ್ಟ್​ ವಾರಂಟ್​​​ ಆಗಿರಲಿಲ್ಲ. ಆಯೋಗದ ಮುಂದೆ ಹಾಜರಾಗಲು ಸೂಚನೆ ನೀಡಬೇಕೆಂದು ನಾನು ಭಾವಿಸಿದ್ದೇನೆ ಎಂದು ಹೇಳಿದರು. ಇದೇ ವೇಳೆ ನನಗೆ ಹಿಂದಿನ ಎರಡು ಬಾರಿ ವಿಚಾರಣೆ ಸಂದರ್ಭದಲ್ಲಿ ಹಾಜರಾಗಲು ಸಾಧ್ಯವಾಗಿರಲಿಲ್ಲ. ನಾನು ನನ್ನ ಪ್ರತಿನಿಧಿಯನ್ನು ಕಳುಹಿಸಿದ್ದೆ. ಮುಂದಿನ ವಿಚಾರಣೆಗೆ ಖುದ್ದು ಹಾಜರಾಗುತ್ತೇನೆ ಎಂದು ತಿಳಿಸಿದರು.

ಗ್ರಾಮಸ್ಥರ ಪರ ಅರ್ಜಿದಾರರ ವಾದವೇನು?:ಜಮೀನು ಕಳೆದುಕೊಂಡ ಬುಡಕಟ್ಟು ಜನರ ಅರ್ಜಿ ಸಲ್ಲಿಸಿರುವ ವಿನೋದ್​ ಖೋಬ್ರಗಡೆ, 24 ಗಿರಿಜನರಿಗೆ 200 ಎಕರೆ ಭೂಮಿಯನ್ನು ವಾಪಸ್ ನೀಡಬೇಕು. ಸಿಮೆಂಟ್​ ಕಂಪನಿಯ ಗುತ್ತಿಗೆಯನ್ನು ಶಾಶ್ವತವಾಗಿ ರದ್ದುಗೊಳಿಸಬೇಕು. ಇದುವರೆಗೆ ಸಿಗಬೇಕಾದ ಪರಿಹಾರವನ್ನು ಆಯೋಗದ ಮೂಲಕ ಪಾವತಿಸಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಾಪುರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್​ ಸಹಿತ ಕಂಪನಿ ವಿರುದ್ಧ ಕ್ರಿಮಿನಲ್ ಕೇಸ್​ ಅಡಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಕಳೆದ ತಿಂಗಳು ಇದೇ ರೀತಿಯ ಪ್ರಕರಣದಲ್ಲಿ ಪಂಜಾಬ್‌ನ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ಕೂಡ ಐಎಎಸ್ ಅಧಿಕಾರಿಯ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಿತ್ತು. ಅಧಿಕಾರಿಯನ್ನು ಬಂಧಿಸಿ ಜನವರಿ 17ರಂದು ಆಯೋಗದ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶ ಹೊರಡಿಸಿತ್ತು.

ಇದನ್ನೂ ಓದಿ:500 ಕೆಜಿ ಈರುಳ್ಳಿಗೆ ಸಿಕ್ಕಿದ್ದು ಬರೇ 2 ರೂಪಾಯಿ ಚೆಕ್!​ ಬೆಲೆ ಕುಸಿತದಿಂದ ತತ್ತರಿಸಿದ ರೈತ

ABOUT THE AUTHOR

...view details