ಕರ್ನಾಟಕ

karnataka

By

Published : Aug 10, 2021, 2:38 PM IST

Updated : Aug 10, 2021, 2:45 PM IST

ETV Bharat / bharat

ಜೀವ ಉಳಿಸಿದವನಿಗೆ ಜೀವನ ನಡೆಸುವುದೇ ಕಷ್ಟ.. ದಿನಗೂಲಿ ಮಾಡುತ್ತಿರುವ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪುರಸ್ಕೃತ

ಸರ್ಕಾರ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಿ ತುಂಬಾ ಹಣವನ್ನು ನನ್ನ ಪೋಷಕರು ಖರ್ಚು ಮಾಡಿದರು. ಆದರೆ, ನನಗೆ ಏನೂ ಸಿಗಲಿಲ್ಲ. ಹಣಕಾಸಿನ ತೊಂದರೆಯಿಂದಾಗಿ ನಾನು 11 ನೇ ತರಗತಿಯನ್ನು ಮುಗಿಸಿ ಕಾಲೇಜಿನಿಂದ ಹೊರ ಬಂದೆ. ಹಣ ನೀಡಲು ಸಾಧ್ಯವಾಗದ ಕಾರಣ, ಗ್ರಾಮದಲ್ಲೇ ಕಾಲೇಜಿಗೆ ದಾಖಲಾಗಿದ್ದೆ. ಹೊಲದಲ್ಲಿ ಕೆಲಸ ಮಾಡಿದ ಬಳಿಕ ನಾನು ಕಾಲೇಜಿಗೆ ಹೋಗುತ್ತಿದ್ದೆ. ಆದರೂ, 12ನೇ ತರಗತಿಯಲ್ಲಿ ಶೇ.82ರಷ್ಟು ಅಂಕಗಳೊಂದಿಗೆ ಪಾಸ್ ಆಗಿದ್ದೇನೆ. ಸರ್ಕಾರ ಇನ್ನು ಮುಂದೆಯಾದರೂ ಏನಾದರು ಕೆಲಸ ಕೊಟ್ಟರೆ ನಾನು ಮಾಡಲು ಸಿದ್ಧ.

National Bravery Award winner works as a labourer, ekes out Rs 300 a day
National Bravery Award winner works as a labourer, ekes out Rs 300 a day

ನಾಂದೇಡ್ (ಮಹಾರಾಷ್ಟ್ರ) :ಜಿಲ್ಲೆಯ ಅರ್ಧಪುರ ತಾಲೂಕಿನ ಪರಡಿ ಗ್ರಾಮದಲ್ಲಿ 2017ರಲ್ಲಿ ನದಿಯಲ್ಲಿ ಮುಳುಗುತ್ತಿದ್ದ ಇಬ್ಬರು ಹುಡುಗಿಯ ಜೀವ ಉಳಿಸಿದ್ದಕ್ಕಾಗಿ 2018ರಲ್ಲಿ ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪಡೆದಿರುವ ಇಜಾಜ್​ ಅಬ್ದುಲ್ ರೌಫ್ ನದಾಫ್, ಇದೀಗ ಜೀವನೋಪಾಯಕ್ಕಾಗಿ ದಿನಕ್ಕೆ ಕೂಲಿ ಕೆಲಸ ಮಾಡುತ್ತಿದ್ದಾರೆ. ದಿನಕ್ಕೆ 300 ರೂಪಾಯಿ ಗಳಿಸುವ ಅವರು, ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ.

'ಬಾಲ ಶೌರ್ಯ ಪ್ರಶಸ್ತಿ' ಪಡೆದಿದ್ದ ಇಜಾಜ್​ :ನಾಂದೇಡ್ ಜಿಲ್ಲೆಯವರಾದ ಇಜಾಜ್​, ತನ್ನ ಸಾಹಸದ ಮೂಲಕ ದೇಶಾದ್ಯಂತ ಪ್ರಸಿದ್ದಾಗಿದ್ದರು. ಇವರ ಕೆಲಸವನ್ನು ಮೆಚ್ಚಿ 9ನೇ ತರಗತಿಯಲ್ಲಿ ಇರುವಾಗಲೇ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಅವರು 'ಬಾಲ ಶೌರ್ಯ' ಪ್ರಶಸ್ತಿ ನೀಡಿ ಗೌರವಿಸಿದ್ದರು. ಅಲ್ಲದೇ ಪ್ರಧಾನಿ ಮೋದಿ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಂದ ಮೆಚ್ಚುಗೆ ಪಡೆದಿದ್ದರು.

ಬಾಯಿ ಮಾತಿಗೆ ಸೀಮಿತವಾದ ಭರವಸೆಗಳು:ಆ ಸಮಯದಲ್ಲಿ ಜನಪ್ರತಿನಿಧಿಗಳು ಭರವಸೆಗಳ ಸುರಿಮಳೆಯನ್ನೇ ಸುರಿಸಿದ್ದರು. ಇಜಾಜ್​ ಅವರ ಮುಂದಿನ ಶಿಕ್ಷಣದ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ವಹಿಸಿಕೊಂಡಿತ್ತು. ಆದರೆ, ಅವೆಲ್ಲವೂ ಕೇವಲ ಭರವಸೆಗಳಾಗಿ ಉಳಿಯಿತೇ ಹೊರತು, ಇದುವರೆಗೆ ಇಜಾಜ್​ ಅವರಿಗೆ ಸರಿಯಾದ ಸಹಕಾರಗಳು ಸಿಕ್ಕಿಲ್ಲ.

ಕೂಲಿ ಕೆಲಸದ ಮೊರೆ ಹೋದ ರಾಷ್ಟ್ರ ಪ್ರಶಸ್ತಿ ವಿಜೇತ:ಮನೆಯಲ್ಲಿ ಆರ್ಥಿಕ ಸಂಕಷ್ಟ ಇರುವುದರಿಂದ ಇಜಾಜ್​ ಈಗ ಕೂಲಿ ಕೆಲಸದ ಮೊರೆ ಹೋಗಿದ್ದಾರೆ. ತಂದೆ, ತಾಯಿ, ಸಹೋದರ ಮತ್ತು ಸಹೋದರಿಯೊಂದಿಗೆ ಪುಟ್ಟ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಸರ್ಕಾರ ಶಿಕ್ಷಣದ ವೆಚ್ಚ ಭರಿಸುವ ಭರವಸೆ ನೀಡಿದ್ದರಿಂದ ಇಜಾಜ್​ ಅವರ ತಂದೆ, ಅವರನ್ನು ನಾಂದೇಡ್​ನ ಉನ್ನತ ಶಿಕ್ಷಣ ಸಂಸ್ಥೆಯೊಂದಕ್ಕೆ 11ನೇ ತರಗತಿಯ ವಿಜ್ಞಾನ ವಿಭಾಗಕ್ಕೆ ಸೇರಿಸಿದ್ದರು.

ಆರಂಭದಲ್ಲಿ ಕೇಂದ್ರ ಸರ್ಕಾರ 20 ರಿಂದ 30 ಸಾವಿರ ರೂ. ಕಾಲೇಜಿಗೆ ಪಾವತಿಸಿತ್ತು. ಆದರೆ, 12ನೇ ತರಗತಿಗೆ ಸೇರಿಸುವಾಗ ಸರ್ಕಾರದ ಕಡೆಯಿಂದ ಯಾವುದೇ ಸಹಕಾರ ಸಿಗಲಿಲ್ಲ. ಆದ್ದರಿಂದ ಕಾಲೇಜು ಶುಲ್ಕ ಕಟ್ಟಲಾಗದೇ ಇಜಾಜ್​ ತನ್ನ ದಾಖಲಾತಿ ವಾಪಸ್ ಪಡೆದಿದ್ದರು.

ಬಳಿಕ ತನ್ನ ಗ್ರಾಮದ ಕಾಲೇಜಿಗೆ ಸೇರಿದ್ದರು. ಆದರೆ, ಅಲ್ಲಿಯೂ ಇಜಾಜ್​​ಗೆ ಪರೀಕ್ಷಾ ಶುಲ್ಕ ಕಟ್ಟಲೂ ಹಣವಿಲ್ಲದ ಪರಿಸ್ಥಿತಿ ಎದುರಾಗಿತ್ತು. ಹಾಗಾಗಿ, ಅವರ ಒಂದು ವರ್ಷ ಸುಮ್ಮನೆ ಹಾಳಾಯಿತು. ಬಳಿಕ ಅವರು 2021ರಲ್ಲಿ ಶೇ. 82ರಷ್ಟು ಅಂಕಗಳೊಂದಿಗೆ 12ನೇ ತರಗತಿ ಪಾಸ್ ಮಾಡುವಲ್ಲಿ ಯಶಸ್ವಿಯಾದರು.

ಆದರೆ, ಆ ಬಳಿಕ ಆರ್ಥಿಕ ಸಮಸ್ಯೆಯಿಂದ ಇಜಾಜ್​​​​ಗೆ ಶಿಕ್ಷಣ ಮುಂದುವರೆಸಲು ಸಾಧ್ಯವಾಗಲಿಲ್ಲ. ಇದೀಗ ಅವರು ಅರ್ಧಪುರದಲ್ಲಿ ಲಾರಿಗೆ ಬಾಳೆಹಣ್ಣು ಲೋಡ್ ಮಾಡುವ ಕೆಲಸ ಮಾಡುತ್ತಿದ್ದಾರೆ.

ಇಜಾಜ್​ ಮಾಡಿದ ಸಾಹಸವೇನು?:ನಮ್ಮ ಹೊಲದ ಬಳಿ ಒಂದು ನದಿ ಹರಿಯುತ್ತದೆ, ಒಂದು ದಿನ ಎರಡ್ಮೂರು ಹುಡುಗಿಯರು ಅಲ್ಲಿ ಬಟ್ಟೆ ತೊಳೆಯುತ್ತಿದ್ದರು. ಈ ಪೈಕಿ ಇಬ್ಬರು ಹುಡುಗಿಯರು ಕಾಲು ಜಾರಿ ನದಿಗೆ ಬಿದ್ದರು, ಅವರು ಸಹಾಯಕ್ಕಾಗಿ ಅಂಗಲಾಚುತ್ತಿದ್ದರು. ಆ ವೇಳೆ, ನಾನು ನದಿಗೆ ಹಾರಿ ಅವರನ್ನು ರಕ್ಷಿಸಿದೆ.

ಇದಕ್ಕಾಗಿ 2018ರಲ್ಲಿ ನಾನು ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಂದ ದೆಹಲಿಯಲ್ಲಿ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪಡೆದಿದ್ದೇನೆ. ನಾನು ನಮ್ಮ ಹಳ್ಳಿಯ ರಾಜಾಬಾಯಿ ಪ್ರೌಢ ಶಾಲೆಯಲ್ಲಿ 10ನೇ ತರಗತಿವರೆಗೆ ಓದಿದ್ದೇನೆ. 10ನೇ ತರಗತಿಯಲ್ಲಿ ನಾನು ಶೇ.70ರಷ್ಟು ಅಂಕ ಪಡೆದಿದ್ದೇನೆ. ನಂತರ ನಾಂದೇಡ್‌ನಲ್ಲಿ ವಿಜ್ಞಾನ ವಿಷಯದಲ್ಲಿ ಪ್ರವೇಶ ಪಡೆದೆ. ಆದರೆ, ನಿರೀಕ್ಷೆಯಂತೆ ನನಗೆ ಅವಕಾಶ ಸಿಗಲಿಲ್ಲ.

ಸರ್ಕಾರ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಿ ತುಂಬಾ ಹಣವನ್ನು ನನ್ನ ಪೋಷಕರು ಖರ್ಚು ಮಾಡಿದರು. ಆದರೆ, ನನಗೆ ಏನೂ ಸಿಗಲಿಲ್ಲ. ಹಣಕಾಸಿನ ತೊಂದರೆಯಿಂದಾಗಿ ನಾನು 11 ನೇ ತರಗತಿಯನ್ನು ಮುಗಿಸಿ ಕಾಲೇಜಿನಿಂದ ಹೊರ ಬಂದೆ. ಹಣ ನೀಡಲು ಸಾಧ್ಯವಾಗದ ಕಾರಣ, ಗ್ರಾಮದಲ್ಲೇ ಕಾಲೇಜಿಗೆ ದಾಖಲಾಗಿದ್ದೆ.

ಹೊಲದಲ್ಲಿ ಕೆಲಸ ಮಾಡಿದ ಬಳಿಕ ನಾನು ಕಾಲೇಜಿಗೆ ಹೋಗುತ್ತಿದ್ದೆ. ಆದರೂ, 12ನೇ ತರಗತಿಯಲ್ಲಿ ಶೇ.82ರಷ್ಟು ಅಂಕಗಳೊಂದಿಗೆ ಪಾಸ್ ಆಗಿದ್ದೇನೆ. ಸರ್ಕಾರ ಇನ್ನು ಮುಂದೆಯಾದರೂ ಏನಾದರು ಕೆಲಸ ಕೊಟ್ಟರೆ ನಾನು ಮಾಡಲು ಸಿದ್ಧ ಎಂದು ಇಜಾಜ್​ ಹೇಳಿದ್ದಾರೆ.

Last Updated : Aug 10, 2021, 2:45 PM IST

ABOUT THE AUTHOR

...view details