ನೈನಿತಾಲ್ (ಉತ್ತರಾಖಂಡ್) : ವಿಧಾನಸಭೆ ಸಚಿವಾಲಯದ 228 ನೌಕರರನ್ನು ವಜಾಗೊಳಿಸಿದ ಕ್ರಮವನ್ನು ಉತ್ತರಾಖಂಡ್ ಹೈಕೋರ್ಟ್ ಎತ್ತಿ ಹಿಡಿದಿದೆ. ಈ ಹಿಂದೆ ಏಕಸದಸ್ಯ ಪೀಠ ಸಭಾಧ್ಯಕ್ಷರ ಈ ಆದೇಶಕ್ಕೆ ತಡೆ ನೀಡಿತ್ತು. ವಿಧಾನಸೌಧದಿಂದ ವಜಾಗೊಂಡ ನೌಕರರ ಮರು ನೇಮಕ ಮಾಡಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಹಾಗೂ ನ್ಯಾಯಮೂರ್ತಿ ಆರ್.ಸಿ. ಖುಲ್ಬೆ ಅವರಿದ್ದ ವಿಭಾಗೀಯ ಪೀಠವು, ವಿಧಾನಸಭೆ ಆದೇಶವನ್ನು ಎತ್ತಿಹಿಡಿಯಿತು. ನೌಕರರನ್ನು ವಜಾಗೊಳಿಸಿದ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಈ ಸಿಬ್ಬಂದಿಯನ್ನು ಯಾವುದೇ ಕಾರಣ ಅಥವಾ ಸೂಚನೆ ನೀಡದೇ ಅವರ ಸೇವೆಗಳನ್ನು ಯಾವುದೇ ಸಮಯದಲ್ಲಿ ಕೊನೆಗೊಳಿಸಬಹುದು ಎಂಬ ಷರತ್ತಿನ ಮೇಲೆ ನೇಮಿಸಲಾಗಿತ್ತು. ಈ ನೇಮಕಾತಿಗಳನ್ನು ವಿಧಾನಸಭಾ ಸೇವಾ ನಿಯಮಗಳಿಗೆ ವಿರುದ್ಧವಾಗಿ ಮಾಡಲಾಗಿದೆ ಎಂದು ವಿಧಾನಸಭಾ ಸಚಿವಾಲಯವು ನ್ಯಾಯಾಲಯಕ್ಕೆ ಹೇಳಿದೆ.
ಮತ್ತೊಂದೆಡೆ ತಮ್ಮನ್ನು ವಿಧಾನಸಭಾಧ್ಯಕ್ಷರು ವಜಾಗೊಳಿಸುವ ಸಂದರ್ಭದಲ್ಲಿ ಸಂವಿಧಾನದ 14ನೇ ಪರಿಚ್ಛೇದವನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ ಎಂದು ನೌಕರರ ಪರವಾಗಿ ವಾದಿಸಲಾಯಿತು. 2016 ರಿಂದ 2021 ರವರೆಗೆ ನೇಮಕವಾದ ನೌಕರರನ್ನು ಮಾತ್ರ ಸ್ಪೀಕರ್ ವಜಾಗೊಳಿಸಿದ್ದಾರೆ.
ಆದರೆ, 2000 ಮತ್ತು 2015 ರ ನಡುವೆ ವಿಧಾನಸಭೆ ಸಚಿವಾಲಯದಲ್ಲಿ ಇದೇ ರೀತಿಯ ನೇಮಕಾತಿಗಳನ್ನು ಮಾಡಲಾಗಿದ್ದು, ಅವುಗಳನ್ನು ಕಾಯಂಗೊಳಿಸಲಾಗಿದೆ. ಹಾಗಾಗಿ ಇದೇ ನಿಯಮ ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕಿತ್ತು ಎಂದು ನೌಕರರು ವಾದಿಸಿದ್ದರು.
ತಮ್ಮ ವಜಾ ಆದೇಶ ಪ್ರಶ್ನಿಸಿ ನೌಕರರಾದ ಬಬಿತಾ ಭಂಡಾರಿ, ಭೂಪೇಂದ್ರ ಸಿಂಗ್ ಬಿಶ್ತ್, ಕುಲದೀಪ್ ಸಿಂಗ್ ಮತ್ತು ಇತರ 102 ಮಂದಿ ಏಕ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು.
ಸಾರ್ವಜನಿಕ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸಭಾಧ್ಯಕ್ಷರು ಸೆ.27, 28 ಮತ್ತು 29ರಂದು ನಮ್ಮನ್ನು ವಜಾ ಮಾಡಿದ್ದಾರೆ ಎಂದು ನಮಗೆ ತಿಳಿಸಲಾಗಿದೆ. ಆದರೆ, ಯಾವ ಆಧಾರದ ಮೇಲೆ ಮತ್ತು ಯಾವ ಕಾರಣಕ್ಕಾಗಿ ತೆಗೆದು ಹಾಕಲಾಗಿದೆ ಎಂಬುದನ್ನು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ ಅಥವಾ ನಮ್ಮ ವಾದವನ್ನು ಕೂಡ ಅವರು ಕೇಳಿಲ್ಲ.