ಕೋಲ್ಕತ್ತಾ: ಅನಿರೀಕ್ಷಿತ ಬೆಳವಣಿಗೆಯೊಂದಕ್ಕೆ ಪಶ್ಚಿಮ ಬಂಗಾಳ ರಾಜಕೀಯ ಸಾಕ್ಷಿಯಾಗಿದೆ. ಸುಮಾರು ಮೂರೂವರೆ ವರ್ಷಗಳ ಬಳಿಕ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಮುಕುಲ್ ರಾಯ್ ಮರಳಿ ತೃಣಮೂಲ ಕಾಂಗ್ರೆಸ್ ಗೆ ಸೇರಿದ್ದಾರೆ. ತೃಣಮೂಲ ಭವನದಲ್ಲಿ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಮುಕುಲ್ ರಾಯ್ ಹಾಗೂ ಅವರ ಪುತ್ರ ಶುಭ್ರಂಶು ಟಿಎಂಸಿಗೆ ಮರಳಿ ಗೂಡು ಸೇರಿದ್ದಾರೆ.
ಇಂದು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಮುಕುಲ್ ರಾಯ್ ಹಾಗೂ ಅವರ ಪುತ್ರ ಶುಭ್ರಂಶು ತೃಣಮೂಲ ಭವನಕ್ಕೆ ಬಂದು, 2017 ರಲ್ಲಿ ಅವರು ಬಿಟ್ಟು ಹೋಗಿದ್ದ ಕೊಠಡಿಯತ್ತ ಹೆಜ್ಜೆ ಹಾಕಿದರು. ಆ ಬಳಿಕ ಸಿಎಂ ಮಮತಾ ಬ್ಯಾನರ್ಜಿ ಕಚೇರಿಗೆ ಆಗಮಿಸಿ, ಮುಕುಲ್ ರಾಯ್ ಹಾಗೂ ಅವರ ಪುತ್ರನನ್ನು ಪಕ್ಷಕ್ಕೆ ಸ್ವಾಗತಿಸಿದರು.
ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ‘ಆಪರೇಷನ್ ರಿಟರ್ನ್ ಆಫ್ ದಿ ಪ್ರಾಡಿಗಲ್’ ಇದೀಗ ಪ್ರಾರಂಭವಾಗಿದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ. ಟಿಎಂಸಿ ತೊರೆದಿರುವ ಬಹುತೇಕ ನಾಯಕರು ಮತ್ತೆ ಪಕ್ಷಕ್ಕೆ ಮರಳಿ ಬರಲಿದ್ದಾರೆ ಎನ್ನಲಾಗಿದೆ.
2017 ರಲ್ಲಿ ಮುಕುಲ್ ರಾಯ್ ಟಿಎಂಸಿ ತ್ಯಜಿಸಿದಾಗ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಸದ್ಯ ಈ ಸ್ಥಾನದಲ್ಲೀಗ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಇದ್ದಾರೆ. ಕಳೆದ ವಾರವಷ್ಟೇ ಮುಕುಲ್ ರಾಯ್ ದಂಪತಿಗೆ ಕೋವಿಡ್ ತಗುಲಿತ್ತು. ಈ ವೇಳೆ ಅಭಿಷೇಕ್ ಬ್ಯಾನರ್ಜಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಮರುದಿನವೇ ಪ್ರಧಾನಿ ನರೇಂದ್ರ ಮೋದಿ, ದೂರುವಾಣಿ ಕರೆ ಮಾಡಿ ಮುಕುಲ್ ರಾಯ್ ಆರೋಗ್ಯ ವಿಚಾರಿಸಿದ್ರು.
2021 ರ ಏಪ್ರಿಲ್, ಮೇ ತಿಂಗಳಲ್ಲಿ ಟಿಎಂಸಿ ತೊರೆದಿದ್ದ ಬಹುತೇಕ ನಾಯಕರು ಇದೀಗ ಪಕ್ಷಕ್ಕೆ ಬರುವ ಸಾಧ್ಯತೆಯಿದೆ. ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲೂ ದೀದಿ, ಮುಕುಲ್ ರಾಯ್ ಅವರು ಸುವೆಂದು ಅಧಿಕಾರಿಯಂತೆ ಕೆಟ್ಟವರಲ್ಲ ಎಂದು ಪುನರುಚ್ಛರಿಸುತ್ತಿದ್ದರು.
ಜತೆಗೆ, ಬಿಜೆಪಿಯಲ್ಲಿ ನನಗೆ ಉಸಿರುಗಟ್ಟಿದ ಭಾವನೆಯಿದೆ ಎಂದು ತಮ್ಮ ಆಪ್ತರೊಂದಿಗೆ ಮುಕುಲ್ ರಾಯ್ ಹೇಳಿಕೊಂಡಿದ್ದರಂತೆ. ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಸೋತ ನಂತರ ಹತಾಸೆ ಹೆಚ್ಚಾಗಿ, ಬಿಜೆಪಿ ತೊರೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.