ನವದೆಹಲಿ: ಹಳೆ ಸಂಸತ್ ಭವನದಿಂದ ಕಲಾಪಗಳು ಹೊಸ ಸಂಸತ್ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ಮುನ್ನ ಇಂದು (ಮಂಗಳವಾರ) ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ಒಟ್ಟಾಗಿ ಫೋಟೋ ತೆಗೆಸಿಕೊಂಡರು. ಉಪರಾಷ್ಟ್ರಪತಿ, ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರ ಎರಡೂ ಬದಿಗಳಲ್ಲಿ ನಿಂತು ಸದಸ್ಯರು ಫೋಟೋಗೆ ಪೋಸ್ ಕೊಟ್ಟರು.
ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಅಧೀರ್ ರಂಜನ್ ಚೌಧರಿ, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆಯ ಸಮಾಜವಾದಿ ಪಕ್ಷದ ಸದಸ್ಯ 93 ವರ್ಷದ ಶಫೀಕ್ ಉರ್ ರಹಮಾನ್ ಬಾರ್ಕ್ ಮತ್ತು ಹಿರಿಯ ಸದಸ್ಯರಾದ ಎನ್ಸಿಪಿಯ ವರಿಷ್ಠ ಶರದ್ ಪವಾರ್, ನ್ಯಾಷನಲ್ ಕಾನ್ಫೆರನ್ಸ್ನ ಫಾರೂಕ್ ಅಬ್ದುಲ್ಲಾ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮೊದಲ ಸಾಲಿನಲ್ಲಿ ಕುಳಿತಿದ್ದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನೀಷ್ ತಿವಾರಿ ಅವರೊಂದಿಗೆ ಎರಡನೇ ಸಾಲಿನಲ್ಲಿ ನಿಂತಿದ್ದರು. ಉಭಯ ಸದನಗಳ ಸದಸ್ಯರು ತಮ್ಮ ಛಾಯಾಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದಂತೆ ಕೆಲವು ಸದಸ್ಯರು ನೆಲದ ಮೇಲೆ ಕುಳಿತುಕೊಂಡಿರುವುದು ಕೂಡ ಕಂಡುಬಂತು. ಎಲ್ಲರೊಂದಿಗೆ ಗ್ರೂಪ್ ಫೋಟೋ ಬಳಿಕ ರಾಜ್ಯಸಭಾ ಸದಸ್ಯರ ತಮ್ಮದೇ ಪ್ರತ್ಯೇಕ ಗ್ರೂಪ್ ಫೋಟೋ ತೆಗೆದುಕೊಂಡರು. ಬಳಿಕ ಲೋಕಸಭಾ ಸದಸ್ಯರು ಪ್ರತ್ಯೇಕ ಫೋಟೋ ತೆಗೆಸಿಕೊಂಡರು.