ನವದೆಹಲಿ:ಭಾರತವನ್ನು ಗುರಿಯಾಗಿಸಿಕೊಂಡು ನಡೆಸುವ ಪ್ರಚೋದಿತ ಅಭಿಯಾನಗಳು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ಹೊಸ ಕೃಷಿ ಕಾನೂನುಗಳ ವಿರುದ್ಧ ಆಂದೋಲನ ನಡೆಸುತ್ತಿರುವ ರೈತರಿಗೆ ಬೆಂಬಲ ನೀಡಿದ್ದಕ್ಕಾಗಿ ಅವರು ಗಾಯಕಿ ರಿಹಾನಾ ಮತ್ತು ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ವಿರುದ್ಧ ಕಿಡಿಕಾರಿದ್ದಾರೆ.
ಪ್ರತಿಭಟನಾನಿರತ ರೈತರ ಪರವಾಗಿ ರಿಹಾನಾ ಮಾಡಿದ ಟ್ವೀಟ್ಗೆ ಹಲವಾರು ಜಾಗತಿಕ ಗಣ್ಯರು, ಕಾರ್ಯಕರ್ತರು ಮತ್ತು ರಾಜಕಾರಣಿಗಳು ಬೆಂಬಲ ನೀಡಿದ್ದರು.
"ಭಾರತವನ್ನು ಗುರಿಯಾಗಿಸಿಕೊಂಡು ನಡೆಯುವ ಪ್ರಚೋದಿತ ಅಭಿಯಾನಗಳು ಎಂದಿಗೂ ಯಶಸ್ವಿಯಾಗುವುದಿಲ್ಲ. ನಮ್ಮತನವನ್ನು ಎತ್ತಿಹಿಡಿಯುವ ಆತ್ಮವಿಶ್ವಾಸ ನಮಗಿದೆ. ಇದು ಭಾರತದ ಮೇಲೆ ಪರಿಣಾಮ ಬೀರದು" ಎಂದು ಜೈಶಂಕರ್ ಟ್ವಿಟ್ಟರ್ ಮೂಲಕ ಟಾಂಗ್ ಕೊಟ್ಟಿದ್ದು, #IndiaTogether ಮತ್ತು #IndiaAgainstPropaganda ಎಂದು ಹ್ಯಾಷ್ಟ್ಯಾಗ್ ಬರೆದಿದ್ದಾರೆ.
ರಿಹಾನಾ ಜೊತೆಗೆ, ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್, ಅಮೆರಿಕದ ವಕೀಲೆ ಮತ್ತು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸೋದರ ಸೊಸೆ, ನಟಿ ಅಮಂಡಾ ಸೆರ್ನಿ, ಗಾಯರು ಜೇ ಸೀನ್, ಡಾ ಜೀಯಸ್ ಮತ್ತು ನೀಲಿಚಿತ್ರ ತಾರೆ ಮಿಯಾ ಖಲೀಫಾ ಕೂಡ ಪ್ರತಿಭಟನಾ ನಿರತ ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.