ಕರ್ನಾಟಕ

karnataka

ಯಾಸ್​ ಸೈಕ್ಲೋನ್​ ಅಬ್ಬರಕ್ಕೆ ಇಬ್ಬರು ಬಲಿ: 20,000ಕ್ಕೂ ಹೆಚ್ಚು ಮನೆಗಳಿಗೆ ಹಾನಿ

By

Published : May 26, 2021, 12:32 PM IST

ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಯಾಸ್​ ಚಂಡಮಾರತದ ಅಬ್ಬರ ಹೆಚ್ಚಾಗಿದ್ದು, ಇಬ್ಬರು ಬಲಿಯಾಗಿದ್ದಾರೆ. ಬಂಗಾಳದಲ್ಲಿ ವಿಮಾನ, ರೈಲು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಿಂದ 11.5 ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದ್ದು, 20,000ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Yaas cyclone
ಯಾಸ್​ ಸೈಕ್ಲೋನ್​ ಅಬ್ಬರಕ್ಕೆ ಇಬ್ಬರು ಬಲಿ

ನವದೆಹಲಿ: ಆನಂದಪುರದಲ್ಲಿ ಒಬ್ಬರು ಮತ್ತು ಬಾಲೆಸೋರ್​ನಲ್ಲಿ ಓರ್ವ ಸೇರಿ ಒಡಿಶಾದಲ್ಲಿ ಯಾಸ್​ ಚಂಡಮಾರತಕ್ಕೆ ಇಬ್ಬರು ಬಲಿಯಾಗಿದ್ದಾರೆ.

ಆನಂದಪುರದಲ್ಲಿ ಮೃತಪಟ್ಟವರನ್ನು ಕೇಂದೂಜಾರ್ ಜಿಲ್ಲೆಯ ಪಂಚಪಲ್ಲ ಗ್ರಾಮದ ಪೂರ್ಣಚಂದ್ರ ನಾಯಕ್ ಎಂದು ಗುರುತಿಸಲಾಗಿದೆ. ಅವರು ದೇವಸ್ಥಾನದಿಂದ ಹಿಂದಿರುಗುತ್ತಿದ್ದಾಗ ಜೋರಾಗಿ ಬೀಸಿದ ಗಾಳಿಯಿಂದಾಗಿ ಮಾರ್ಗ ಮಧ್ಯೆ ದೊಡ್ಡ ಮರದ ಕೊಂಬೆ ತಲೆಯ ಮೇಲೆ ಬಿದ್ದಿದೆ. ಪರಿಣಾಮ ಅವರು ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಯಾಸ್​ ಸೈಕ್ಲೋನ್​ ಅಬ್ಬರಕ್ಕೆ ಇಬ್ಬರು ಬಲಿ

ಬಾಲಸೋರ್ ನಗರದಲ್ಲಿಯೂ ಮರ ಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮೃತರನ್ನು ಭಾಸ್ಕರ್‌ನ ಗಂಜ್ ಪ್ರದೇಶದ ಮಾಂಟು ಜೆನಾ ಎಂದು ಗುರುತಿಸಲಾಗಿದೆ.

ಬಂಗಾಳದಲ್ಲಿ ವಿಮಾನ, ರೈಲು ಕಾರ್ಯಾಚರಣೆ ಸ್ಥಗಿತ:

ಕೋಲ್ಕತ್ತಾದ ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಇಂದು ಸಂಜೆ 7.45ರವರೆಗೆ ಸ್ಥಗಿತಗೊಳಿಸಲಾಗಿದೆ. ಯಾಸ್ ಚಂಡಮಾರುತದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಹೌರಾ ಮತ್ತು ಸೀಲ್ಡಾ ಟರ್ಮಿನಲ್ ನಿಲ್ದಾಣಗಳಿಂದ 129ಕ್ಕೂ ಹೆಚ್ಚು ವಿಶೇಷ ರೈಲುಗಳನ್ನು ಸಹ ರದ್ದುಪಡಿಸಲಾಗಿದೆ.

ಇದನ್ನೂ ಓದಿ:ಒಡಿಶಾದ ಬಾಲಸೋರ್​ನಲ್ಲಿ ‘ಯಾಸ್​’ ಚಂಡಮಾರುತದ ಭೂಸ್ಪರ್ಶ ಪ್ರಕ್ರಿಯೆ ಪ್ರಾರಂಭ

ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಸಿಎಸ್‌ಎಂಐಎ) ಮುಂಬೈನಿಂದ ಭುವನೇಶ್ವರ ಮತ್ತು ಕೋಲ್ಕತ್ತಾದ ನಡುವಿನ ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಅಂದಾಜು 6 ವಿಮಾನಗಳನ್ನು ಇಲ್ಲಿಯವರೆಗೆ ರದ್ದುಪಡಿಸಲಾಗಿದೆ. ಇತರ ಪ್ರದೇಶಗಳಿಗೆ ವಿಮಾನಗಳು ನಿಗದಿತ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಮುಂಬೈ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಹೇಳಿದ್ದಾರೆ.

20,000ಕ್ಕೂ ಹೆಚ್ಚು ಮನೆಗಳಿಗೆ ಹಾನಿ:

ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಿಂದ 11.5 ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ. ಚಂಡಮಾರುತದ ಪರಿಣಾಮ ರಭಸವಾದ ಗಾಳಿ, ಮಳೆಗೆ ದಕ್ಷಿಣ 24 ಪರಗಣ (ಸಾಗರ್ ದ್ವೀಪಗಳು, ಸುಂದರ್‌ಬನ್ಸ್, ಪಥಪ್ರತಿಮಾ, ಗೋಸಾಬಾ) ಮತ್ತು ಪೂರ್ವ ಮೆದಿನಿಪುರ (ದಿಘಾ ಮತ್ತು ಶಂಕರ್‌ಪುರ) ಜಿಲ್ಲೆಗಳಲ್ಲಿ ಅನೇಕ ಕುಗ್ರಾಮಗಳು ಮತ್ತು ಗ್ರಾಮಗಳು ಸಂಪೂರ್ಣವಾಗಿ ಮುಳುಗಡೆಗೊಂಡಿವೆ. ಯಾಸ್​ ಸೃಷ್ಟಿಸಿದ ಅವಾಂತರಕ್ಕೆ 20,000ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಇದನ್ನೂ ಓದಿ: 'ಯಾಸ್' ಪ್ರಭಾವ.. ಒಡಿಶಾ, ಬಂಗಾಳದ ಕಡಲ ತೀರದಲ್ಲಿ ಭಾರೀ ಮಳೆ

ಪ್ರಕ್ಷುಬ್ಧಗೊಂಡ ಸಮುದ್ರ:

ಪೂರ್ವ ಮೆದಿನಿಪುರ ಜಿಲ್ಲೆಯ ದಿಘಾದಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಬಲವಾದ ಗಾಳಿ ಬೀಸುತ್ತಿದೆ. ಐಎಂಡಿ ಪ್ರಕಾರ ಚಂಡಮಾರುತದ ಪ್ರಸ್ತುತ ತೀವ್ರತೆ 130-140 ಕಿ.ಮೀ. ಇದೆ.

32 ನಾಗರಿಕರ ರಕ್ಷಣಾ ಕಾರ್ಯ ಆರಂಭ:

ಪೂರ್ವ ಮೆದಿನಿಪುರದಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಿಂದಾಗಿ ಸಿಲುಕಿರುವ 32 ನಾಗರಿಕರನ್ನು ರಕ್ಷಿಸಲು ಭಾರತೀಯ ಸೇನೆ ಕಾರ್ಯಾಚರಣೆ ಆರಂಭಿಸಿದೆ. ಸೈಕ್ಲೋನ್ ಯಾಸ್ ಕಾರಣದಿಂದಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರಿಗೆ ತಕ್ಷಣದ ಬೆಂಬಲವನ್ನು ಒದಗಿಸಲು, ಬ್ರೀಫಿಂಗ್, ಸಂಪರ್ಕ ಮತ್ತು ಸರ್ಕಾರದೊಂದಿಗೆ ಸಮನ್ವಯ ಪೂರ್ಣಗೊಂಡಿದೆ. ತಕ್ಷಣ ಪರಿಣಾಮ ಬೀರುವ ನಿರೀಕ್ಷೆಯ ಪ್ರದೇಶಗಳಲ್ಲಿ ಪರಿಹಾರ ಕಾಲಮ್‌ಗಳನ್ನು ಮೊದಲೇ ಇರಿಸಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

ABOUT THE AUTHOR

...view details