ನವದೆಹಲಿ: ನಿರುದ್ಯೋಗ ಸಂಬಂಧ ರಾಹುಲ್ ಗಾಂಧಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ನೀತಿಗಳನ್ನು ಟೀಕಿಸಿದ್ದಾರೆ.
ಆಗಸ್ಟ್ನಲ್ಲಿ 15 ಲಕ್ಷ ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂಬ 'ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ'ಯ ದತ್ತಾಂಶ ಆಧರಿಸಿ ಪ್ರಕಟಿಸಿರುವ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಅವರು ಟೀಕೆಗಳ ಸುರಿಮಳೆ ಮಾಡಿದ್ದಾರೆ.
ಮೋದಿ ಸರ್ಕಾರ ಉದ್ಯೋಗಕ್ಕೆ ಹಾನಿಕಾರಕ. ಯಾವುದೇ ರೀತಿಯ ಸ್ನೇಹರಹಿತ ವ್ಯಾಪಾರ ಅಥವಾ ಉದ್ಯೋಗವನ್ನು ಅವರು ಉತ್ತೇಜಿಸುವುದಿಲ್ಲ. ಅವರು ಉದ್ಯೋಗ ಹೊಂದಿರುವವರ ಬಳಿ ಉದ್ಯೋಗ ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, 'ಜಿಡಿಪಿ' ಗ್ಯಾಸ್-ಡೀಸೆಲ್-ಪೆಟ್ರೋಲ್ ಬೆಲೆ ಏರಿಕೆ ಮುಂದುವರಿದಿದೆ. ಕೈಗಾರಿಕೋದ್ಯಮಿ ಮಿತ್ರರಿಗೆ ಮಾತ್ರ ಇದು ಲಾಭದಾಯಕವಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಜನರು ಜವಾಬ್ದಾರಿಯುತ ವ್ಯಕ್ತಿಯನ್ನು ಪ್ರಶ್ನಿಸಬೇಕು ಎಂದು ಮನವಿ ಮಾಡಿದ್ದಾರೆ.
ದೇಶದಲ್ಲಿ ಅತಿದೊಡ್ಡ ರಾಷ್ಟ್ರೀಯ ಸಮಸ್ಯೆ ಎಂದರೆ ಅದು ನಿರುದ್ಯೋಗ. ಇದಕ್ಕೆ ಕೆಲವು ನೇರ ಪರಿಹಾರಗಳಿವೆ. ಅವುಗಳಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳನ್ನು (PSU-PSB) ಮಾರಾಟ ಮಾಡದಿರುವುದು, ಸೂಕ್ಷ್ಣ, ಸಣ್ಣ ಮಧ್ಯಮ ಹಾಗು ಬೃಹತ್ (MSME) ಕೈಗಾರಿಕೆಗಳಿಗೆ ಆರ್ಥಿಕ ಸಹಾಯ ನೀಡುವುದು ಸೇರಿದೆ. ಹಾಗಾಗಿ, ನೀವು (ಕೇಂದ್ರ ಸರ್ಕಾರ) ದೇಶದ ಬಗ್ಗೆ ಯೋಚಿಸಬೇಕೇ ಹೊರತು ನಿಮ್ಮ ಸ್ನೇಹಿತರ ಬಗ್ಗೆ ಅಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ ರಾಷ್ಟ್ರೀಯ ನಗದೀಕರಣ ಯೋಜನೆ (NMP) ಸೇರಿದಂತೆ ಮೋದಿ ಸರ್ಕಾರದ ಆರ್ಥಿಕ ನೀತಿಗಳನ್ನು ರಾಹುಲ್ ಟೀಕಿಸುತ್ತಾ ಬರುತ್ತಿದ್ದಾರೆ.
ಇನ್ನು ಇಂಡಿಪೆಂಡೆಂಟ್ ಥಿಂಕ್ ಟ್ಯಾಂಕ್ ಇತ್ತೀಚೆಗೆ ಪ್ರಕಟಿಸಿದ ದತ್ತಾಂಶವು ರಾಷ್ಟ್ರೀಯ ನಿರುದ್ಯೋಗವು ಕಳೆದ ತಿಂಗಳು ಶೇಕಡಾ 8.32ಕ್ಕೆ ಏರಿದೆ ಎಂದು ತಿಳಿಸುತ್ತದೆ. ನಿರುದ್ಯೋಗ ಪ್ರಮಾಣ ಜುಲೈನಲ್ಲಿ ಶೇಕಡಾ 6.96 ಇತ್ತು. ಹಾಗೆಯೇ ನಗರ ನಿರುದ್ಯೋಗದಲ್ಲಿ ಆಗಸ್ಟ್ನಲ್ಲಿ 9.78 ಶೇಕಡಾ ಇದ್ದು, ಇದು ಜುಲೈನಲ್ಲಿ 8.3 ಶೇಕಡಾ ಇತ್ತು ಎಂದು ಹೇಳಿದೆ.
ದೇಶದಲ್ಲಿ ಆರ್ಥಿಕ ಹಿನ್ನಡೆ ಇಲ್ಲದಿದ್ದರೂ ಸಹ ಉದ್ಯೋಗಾವಕಾಶಗಳ ಕುಸಿತ ಕಂಡುಬಂದಿದೆ. 2021- 22 ರ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 20.1 ಜಿಡಿಪಿ ಇತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 24.4 ರಷ್ಟಿತ್ತು. ಆದಾಗ್ಯೂ, ದೆಹಲಿ, ಹರಿಯಾಣ ಮತ್ತು ರಾಜಸ್ಥಾನ ಸೇರಿದಂತೆ ದೇಶಾದ್ಯಂತ ಕನಿಷ್ಠ ಎಂಟು ರಾಜ್ಯಗಳು ಎರಡಂಕಿಯ ನಿರುದ್ಯೋಗ ದರಗಳನ್ನು ವರದಿ ಮಾಡುತ್ತಿವೆ. ಅದರಲ್ಲಿ ಪ್ರಮುಖವಾಗಿ 35.7 ಶೇಕಡದೊಂದಿಗೆ ಹರಿಯಾಣ ಅತಿ ಹೆಚ್ಚು ನಿರುದ್ಯೋಗ ವರದಿ ಮಾಡಿದೆ.