ಕರ್ನಾಟಕ

karnataka

ಅಬುಧಾಬಿಯಲ್ಲಿ ಹಿಂದೂ ದೇಗುಲ ಉದ್ಘಾಟಿಸಲು ಪ್ರಧಾನಿ ಮೋದಿಗೆ ಆಹ್ವಾನ

By ANI

Published : Dec 28, 2023, 10:29 PM IST

Hindu Mandir in Abu Dhabi: ಅಬುಧಾಬಿಯಲ್ಲಿ ನಿರ್ಮಿಸಿರುವ ಬಿಎಪಿಎಸ್ ಹಿಂದೂ ಮಂದಿರ ಉದ್ಘಾಟನೆಗೆ ಪ್ರಧಾನಿ ಮೋದಿ ಅವರಿಗೆ ಇಂದು ಆಹ್ವಾನ ನೀಡಲಾಗಿದೆ.

pm-modi-accepts-invitation-to-inaugurate-baps-hindu-mandir-in-abu-dhabi
ಅಬುಧಾಬಿಯಲ್ಲಿ ಹಿಂದೂ ಮಂದಿರ ಉದ್ಘಾಟಿಸಲು ಪ್ರಧಾನಿ ಮೋದಿಗೆ ಆಹ್ವಾನ

ನವದೆಹಲಿ:ಮುಂದಿನ ವರ್ಷದ ಫೆಬ್ರವರಿ 14ರಂದು ಅಬುಧಾಬಿಯಲ್ಲಿ ಬಿಎಪಿಎಸ್ ಹಿಂದೂ ಮಂದಿರ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆ ಆಹ್ವಾನ ನೀಡಿದೆ. ಸ್ವಾಮಿ ಈಶ್ವರಚರಣದಾಸ್ ಮತ್ತು ಸ್ವಾಮಿ ಬ್ರಹ್ಮವಿಹಾರಿದಾಸ್ ಅವರು ಇಂದು ಪ್ರಧಾನಿ ಭೇಟಿಯಾಗಿ ಆಮಂತ್ರಣ ಪತ್ರಿಕೆ ನೀಡಿದರು. ಈ ಆಹ್ವಾನವನ್ನು ಮೋದಿ ಸ್ವೀಕರಿಸಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಪ್ರಧಾನಿ ನಿವಾಸದ ಕಚೇರಿಯಲ್ಲಿ ಮೋದಿ ಅವರನ್ನು ಸ್ವಾಮಿ ಈಶ್ವರಚರಣದಾಸ್ ಬಿಎಪಿಎಸ್ ನಿರ್ದೇಶಕರ ಮಂಡಳಿಯೊಂದಿಗೆ ಭೇಟಿಯಾದರು. ಕೇಸರಿ ಶಾಲು ಹೊದಿಸಿ ಪ್ರಧಾನಿಯನ್ನು ಅವರು ಗೌರವಿಸಿದರು. ಇದೇ ವೇಳೆ, ಸಂಸ್ಥೆಯ ಆಹ್ವಾನವನ್ನು ಸ್ವೀಕರಿಸಿದ ಪ್ರಧಾನಿ, ಐತಿಹಾಸಿಕ ಮತ್ತು ಸಾಂಪ್ರದಾಯಿಕ ದೇವಾಲಯಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಜಾಗತಿಕ ಸಾಮರಸ್ಯಕ್ಕಾಗಿ ನಿರ್ಮಿಸಿರುವ ಅಬುಧಾಬಿ ದೇವಾಲಯದ ಮಹತ್ವ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತದ ಆಧ್ಯಾತ್ಮಿಕ ನಾಯಕತ್ವದ ಬಗ್ಗೆ ಚರ್ಚೆಗಳು ನಡೆದವು. ಇದೇ ವೇಳೆ, ಬಿಎಪಿಎಸ್ ನಿಯೋಗವು ಪ್ರಧಾನಿಯವರ ಆರೋಗ್ಯಕ್ಕಾಗಿ ಪ್ರಾರ್ಥಿಸಿತು. ಮತ್ತೊಂದೆಡೆ, ಪ್ರಮುಖ್ ಸ್ವಾಮಿ ಮಹಾರಾಜ್ ಅವರನ್ನು ಸ್ಮರಿಸಿದ ಪ್ರಧಾನಿ, ಅವರ ಶತಮಾನೋತ್ಸವ ಆಚರಣೆಯನ್ನು ನೆನಪಿಸಿಕೊಂಡರು. ಅಬುಧಾಬಿಯ ಹಿಂದೂ ಮಂದಿರ ನಿರ್ಮಾಣ ಯೋಜನೆಯಲ್ಲಿ ಭಾಗಿಯಾಗಿರುವ ಅಶೋಕ್ ಕೊಟೆಚಾ, ಉಪಾಧ್ಯಕ್ಷ ಯೋಗೇಶ್ ಮೆಹ್ತಾ ಮತ್ತು ನಿರ್ದೇಶಕ ಚಿರಾಗ್ ಪಟೇಲ್ ಸೇರಿದಂತೆ ಪ್ರಮುಖರು, ಸ್ವಯಂಸೇವಕರು ಮತ್ತು ಬೆಂಬಲಿಗರ ಪ್ರಯತ್ನಗಳು ಹಾಗೂ ಕೊಡುಗೆಗಳನ್ನು ಮೋದಿ ಶ್ಲಾಘಿಸಿದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

ಸ್ವಾಮಿ ಬ್ರಹ್ಮವಿಹಾರಿದಾಸ್ ಅವರು ಅಬುಧಾಬಿಯಲ್ಲಿನ ಹಿಂದೂ ಮಂದಿರದ ಇತ್ತೀಚಿನ ನವೀಕರಣದ ಚಿತ್ರಗಳನ್ನು ಪ್ರಧಾನಿಗೆ ತೋರಿಸಿದರು. ಅದರ ಸಂಕೀರ್ಣ ಕೆತ್ತನೆಗಳು ಮತ್ತು ಎಲ್ಲವನ್ನೂ ಒಳಗೊಂಡಿರುವ ಭವ್ಯತೆ ಬಗ್ಗೆಯೂ ಒತ್ತಿಹೇಳಿದರು. ಮಂದಿರ ಉದ್ಘಾಟನಾ ಸಮಾರಂಭವು ಒಂದು ದೊಡ್ಡ ಕಾರ್ಯವಾಗಿದ್ದು, ಇದು ಮುಂಬರುವ ಸಮಯಕ್ಕೆ ಸಹಸ್ರಮಾನದ ಸಂಭ್ರಮಾಚರಣೆಯ ಕ್ಷಣವಾಗಿದೆ ಎಂದು ತಿಳಿಸಿದರು.

ಅದಕ್ಕೆ ಪ್ರಧಾನಿ ಮೋದಿ ಅವರು, ಇದು ವಸುಧೈವ ಕುಟುಂಬಕಂ ಆದರ್ಶವನ್ನು ಪ್ರತಿಬಿಂಬಿಸುತ್ತದೆ. ಆದರ್ಶ ಆಧ್ಯಾತ್ಮಿಕ ಸ್ಥಳ, ಕೇವಲ ನಂಬಿಕೆಗಳು ಮತ್ತು ಸಂಪ್ರದಾಯಗಳಲ್ಲಿ ಬೇರೂರಿಲ್ಲ. ಆದರೆ, ವೈವಿಧ್ಯಮಯ ಸಂಸ್ಕೃತಿಗಳು ಮತ್ತು ನಾಗರಿಕತೆಗಳ ಸಂಗಮವಾಗಿದೆ. ಆಧ್ಯಾತ್ಮಿಕ ಸಾಮರಸ್ಯದ ಸಾರ, ಮುಂದಿನ ಹಾದಿಯನ್ನು ಸಂಕೇತಿಸುತ್ತದೆ ಎಂಬುವುದಾಗಿ ಪ್ರತಿಕ್ರಿಯಿಸಿದರು ಎಂದು ಬಿಎಪಿಎಸ್​ ಸಂಸ್ಥೆ ಮಾಹಿತಿ ನೀಡಿದೆ.

ಇದನ್ನೂ ಓದಿ:ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಮನೆ-ಮನೆಗೆ ಆಮಂತ್ರಣ; ಬಿಜೆಪಿ ಅಭಿಯಾನ

ABOUT THE AUTHOR

...view details