ಅಗರ್ತಲಾ (ತ್ರಿಪುರಾ): ಬಂಧಿತ ಎನ್ಎಲ್ಎಫ್ಟಿ (ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರಾ)ಗೆ ಸೇರಿದ ಯುವಕರನ್ನು ರಿಲೀಸ್ ಮಾಡುವಂತೆ ಆಗ್ರಹಿಸಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಲಾಗಿದ್ದು, ಈ ವೇಳೆ ಕೆಲ ಪೊಲೀಸರು ಗಾಯಗೊಂಡಿದ್ದಾರೆ.
ತ್ರಿಪುರದ ಧಲೈ ಜಿಲ್ಲೆಯ ಗಂಗಾನಗರ ಪೊಲೀಸ್ ಠಾಣೆಯ ಮೇಲೆ ಕೆಲವರು ದಾಳಿ ನಡೆಸಿದ್ದು, ಪರಿಣಾಮ ಐವರು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದಾರೆ. ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾಗಿ ತಿಳಿದು ಬಂದಿದೆ.
ನಿಷೇಧಿತ ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರಾದ ಮೂವರು ಬಂಧಿತರನ್ನ ತಕ್ಷಣವೇ ರಿಲೀಸ್ ಮಾಡುವಂತೆ ಈ ವೇಳೆ ಒತ್ತಾಯಿಸಲಾಗಿದೆ. ಆರಂಭದಲ್ಲಿ ಪೊಲೀಸ್ ಠಾಣೆ ಮುಂದೆ ನಿಲ್ಲಿಸಿದ್ದ ಮೂರು ವಾಹನ ಧ್ವಂಸಗೊಳಿಸಲಾಗಿದ್ದು, ಇದಾದ ಬಳಿಕ ದರೋಡೆಗೆ ಸಹ ಯತ್ನಿಸಲಾಗಿದೆ. ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಅರಿತ ಪೊಲೀಸರು ಅಶ್ರುವಾಯು ಪ್ರಯೋಗ ನಡೆಸಿದರು.