ನವದೆಹಲಿ: 38 ವರ್ಷಗಳ ಹಿಂದೆ ಭಾರಿ ಹಿಮಕುಸಿತದಲ್ಲಿ ನಾಪತ್ತೆಯಾಗಿದ್ದ ಉತ್ತರಾಖಂಡ್ ಮೂಲದ ಯೋಧನೋರ್ವನ ಮೃತದೇಹವನ್ನು ಭಾರತೀಯ ಸೇನೆ ಇತ್ತೀಚೆಗೆ ಪತ್ತೆ ಮಾಡಿದೆ. ಲ್ಯಾನ್ಸ್ ನಾಯಕ್ ಚಂದ್ರಶೇಖರ್ ಅವರ ಮೃತದೇಹ ಇದಾಗಿದ್ದು ಹಿಮಾಲಯದ ಹಿಮನದಿಯಲ್ಲಿ ದೊರೆತಿದೆ. ಭಾರತೀಯ ಸೇನೆಯ ಉತ್ತರ ಕಮಾಂಡ್ ಸೋಮವಾರ ಈ ಮಾಹಿತಿ ಬಹಿರಂಗಪಡಿಸಿದೆ. ಸ್ಥಳದಲ್ಲಿ ಸಿಕ್ಕಿರುವ ಗುರುತಿನ ಬಿಲ್ಲೆಯಲ್ಲಿದ್ದ ಸಂಖ್ಯೆ ಯೋಧನ ಗುರುತು ಕಂಡುಹಿಡಿಯಲು ಸಹಕಾರಿಯಾಗಿದೆ.
1984ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆಯು ಆಪರೇಷನ್ ಮೇಘದೂತ್ ಎಂಬ ಕಾರ್ಯಾಚರಣೆ ಆರಂಭಿಸಿತ್ತು. ಇದೇ ವರ್ಷದ ಮೇ 29ರಂದು ಭಾರಿ ಹಿಮಪಾತ ಉಂಟಾಗಿತ್ತು. ಪರಿಣಾಮ 18 ಜನ ಸೈನಿಕರು ಸಾವನ್ನಪ್ಪಿದ್ದರು. ಆಗ 14 ಸೈನಿಕರ ಶವಗಳು ಮಾತ್ರವೇ ಪತ್ತೆಯಾಗಿದ್ದವು. ಇತರ 14 ಯೋಧರು ಕಾಣೆಯಾಗಿದ್ದರು. ಇದರಲ್ಲಿ ಹಿಮಪ್ರದೇಶದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಲ್ಯಾನ್ಸ್ ನಾಯಕ್ ಚಂದ್ರಶೇಖರ್ ಕೂಡ ಒಬ್ಬರು.
ಮೃತದೇಹ ಪತ್ತೆಯಾಗದೇ ಇರುವುದರಿಂದ ಅವರ ಕುಟುಂಬಸ್ಥರು ಬಹಳ ನೊಂದುಕೊಂಡಿದ್ದರು. ಇಂದು ಅದೇ ಹಿಮಚ್ಛಾದಿತ ಪ್ರದೇಶದಲ್ಲಿ ಗಸ್ತಿನಲ್ಲಿದ್ದಾಗ ಈ ಯೋಧನ ಅಸ್ತಿಪಂಜರ ಕಾಣಸಿಕ್ಕಿದೆ. ಯೋಧನ ಮೃತದೇಹದಲ್ಲಿ ಸಿಕ್ಕ ಎರಡು ಲಾಕೆಟ್ನಿಂದ ಅದು ಚಂದ್ರಶೇಖರ್ ಮೃತದೇಹ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಹೀಗಾಗಿ ಮೃತದೇಹವೂ ಸಿಗಲಿಲ್ಲವಲ್ಲ ಎಂದು ಕಣ್ಣೀರು ಹಾಕುತ್ತಿದ್ದ ಕುಟುಂಬವೀಗ ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.