ವರಂಗಲ್, ಹೈದರಾಬಾದ್: ಜಿಲ್ಲೆಯ ಎಂಜಿಎಂನಲ್ಲಿ ಹಿರಿಯರ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಯತ್ನಿಸಿದ ಪಿಜಿ ವಿದ್ಯಾರ್ಥಿನಿ ನಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂತ್ರಸ್ತೆಯ ಆರೋಗ್ಯ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ವೈದ್ಯಕೀಯ ವಿದ್ಯಾರ್ಥಿನಿ ಎಕ್ಮೋದಲ್ಲಿದ್ದಾರೆ.. ಡಯಾಲಿಸಿಸ್ ಪ್ರಕ್ರಿಯೆ ಮುಂದುವರಿಯಲಿದೆ ಎಂದು ನಿಮ್ಸ್ ಅಧೀಕ್ಷಕರು ವಿವರಿಸಿದರು.
ಏನಿದು ಪ್ರಕರಣ: ವೈದ್ಯಕೀಯ ವಿದ್ಯಾರ್ಥಿನಿ ಪ್ರೀತಿ ಹಿರಿಯರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಿದ್ದು, ಈಗ ಅವರ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಪ್ರೀತಿ ನವೆಂಬರ್ನಲ್ಲಿ ಕೆಎನ್ಸಿಯಲ್ಲಿ ಪಿಜಿಗೆ ಸೇರಿದ್ದು, ಕಾಜಿಪೇಟೆಯ ಹಿರಿಯ ವೈದ್ಯಕೀಯ ವಿದ್ಯಾರ್ಥಿ ಸೈಫ್ ಡಿಸೆಂಬರ್ನಿಂದ ಕಿರುಕುಳ ನೀಡುತ್ತಿದ್ದ ಎಂಬುದಕ್ಕೆ ಪೊಲೀಸರಿಗೆ ಸಾಕ್ಷಿಗಳು ದೊರೆತ್ತಿದ್ದು, ಆರೋಪಿಯ ಕುರಿತು ಕೆಲವೊಂದು ಮಾಹಿತಿಗಳನ್ನು ಮಾಧ್ಯಮಕ್ಕೆ ವರಂಗಲ್ ಸಿಪಿ ಎವಿ ರಂಗನಾಥ್ ಹೇಳಿದ್ದಾರೆ.
ಇದೇ ತಿಂಗಳ 18ರಂದು ಹನುಮಕೊಂಡದ ಹೆರಿಗೆ ಆಸ್ಪತ್ರೆಯಲ್ಲಿ ಪ್ರೀತಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಸೈಫ್ ರೋಗಿಯ ಕೇಸ್ ಶೀಟ್ ಅನ್ನು ಮತ್ತೊಬ್ಬ ಹೌಸ್ ಸರ್ಜನ್ ವಿದ್ಯಾರ್ಥಿ ಬರೆದಿದ್ದಾರೆ ಎಂದು ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಪೋಸ್ಟ್ ಮಾಡಿ ಪ್ರೀತಿಯನ್ನು ಅವಮಾನಿಸಿದ್ದರು. ಪ್ರೀತಿ ಸೈಫ್ಗೆ ವೈಯಕ್ತಿಕ ವಾಟ್ಸ್ಆ್ಯಪ್ ಸಂದೇಶವನ್ನು ಕಳುಹಿಸಿ, ಗ್ರೂಪ್ನಲ್ಲಿ ಈ ರೀತಿ ಅವಹೇಳನಕಾರಿಯಾಗಿ ಏಕೆ ಪೋಸ್ಟ್ ಮಾಡಿದ್ದಾರೆ ಎಂದು ಕೇಳಿದ್ದರು. ನನ್ನಿಂದ ಏನಾದರೂ ತಪ್ಪಾಗಿದ್ದರೆ ಎಚ್ಒಡಿಗೆ ಮಾತ್ರ ತಿಳಿಸಬೇಕು ಎಂದು ಬರೆದಿದ್ದರು. ಸೈಫ್ ಇತರ ವೈದ್ಯರಿಗೆ ಪ್ರೀತಿಯ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ. ನಾವು ಪ್ರೀತಿ ಮತ್ತು ಸೈಫ್ ನಡುವಿನ ಸಂಭಾಷಣೆಯ ಚಾಟ್ಗಳನ್ನು ಸಂಗ್ರಹಿಸಿದ್ದೇವೆ ಎಂದು ಸಿಪಿ ವಿವರಿಸಿದರು.
ಇದನ್ನೆಲ್ಲ ಸಹಿಸಲಾಗದ ಪ್ರೀತಿ ತನ್ನ ತಂದೆ ನರೇಂದರ್ ಅವರಿಗೆ ಮಾಹಿತಿ ನೀಡಿದ್ದು, ಅವರು ವಾರಂಗಲ್ ಎಸಿಪಿ ಬೋನಾಳ ಕಿಶನ್ ಹಾಗೂ ಮತ್ತೇವಾಡ ಎಸ್ಐ ಶಂಕರನಾಯ್ಕ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಪೊಲೀಸರು ಕೆಎಂಸಿ ಪ್ರಾಂಶುಪಾಲರು ಹಾಗೂ ಎಚ್ಒಡಿಗೆ ಮಾಹಿತಿ ರವಾನಿಸಿದ್ದಾರೆ ಎನ್ನಲಾಗಿದೆ. ಪ್ರಾಂಶುಪಾಲರು ಸೈಫ್ಗೆ ಛೀಮಾರಿ ಹಾಕಿದಾಗ ಪ್ರೀತಿಗೆ ವೃತ್ತಿಯ ವಿಷಯದಲ್ಲಿ ಸೂಚನೆಗಳನ್ನು ನೀಡಿದ್ದೇ ಹೊರತು ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂದು ಸೈಫ್ ವಿವರಿಸಿದ್ದಾರೆ ಎಂದು ಸಿಪಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು.
ಆರೋಗ್ಯವಂತ ವ್ಯಕ್ತಿ ಸ್ಯಾಕ್ಸಲಿನ್ ಕೋಲಿನ್ ಎಂಬ ಚುಚ್ಚುಮದ್ದನ್ನು ತೆಗೆದುಕೊಂಡರೆ ಏನಾಗುತ್ತದೆ ಎಂದು ಪ್ರೀತಿ ಗೂಗಲ್ನಲ್ಲಿ ಸರ್ಚ್ ಮಾಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ನಂತರ ಆಕೆಯ ಬಳಿ ಇದ್ದ ಇಂಜೆಕ್ಷನ್ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಿರಿಯ ವಿದ್ಯಾರ್ಥಿಗಳನ್ನು ಕಿರಿಯರು ಸರ್ ಎಂದು ಕರೆಯುವ ಸಂಸ್ಕೃತಿ ಕೆಎಂಸಿಯಲ್ಲಿದೆ. ಇದನ್ನು ತಪ್ಪಿಸಿ ವಿದ್ಯಾರ್ಥಿಗಳಲ್ಲಿ ಸೌಹಾರ್ದತೆಯ ವಾತಾವರಣ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.