ಬಿಜಾಪುರ (ಛತ್ತೀಸ್ಗಢ): ರಜೆ ಮೇಲೆ ಊರಿಗೆ ಬಂದಿದ್ದ ಪೊಲೀಸ್ ಕಾನ್ಸ್ಟೇಬಲ್ವೊಬ್ಬರನ್ನು ನಕ್ಸಲರು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ. ಬೈಕ್ನಲ್ಲಿ ಬರುತ್ತಿದ್ದ ಪೊಲೀಸ್ ಸಿಬ್ಬಂದಿಯನ್ನು ನಕ್ಸಲರು ಅಪಹರಿಸಿ ಕೊಲೆಗೈದು ನಂತರ ಶವವನ್ನು ರಸ್ತೆಯಲ್ಲಿ ಎಸೆದು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧ್ರಾಮ್ ಅವಲಂ ಹತ್ಯೆಯಾದ ಪೊಲೀಸ್ ಕಾನ್ಸ್ಟೇಬಲ್. ಟೋಯ್ನಾರ್ನಲ್ಲಿ ಸಹಾಯಕ ಕಾನ್ಸ್ಟೇಬಲ್ ಆಗಿ ಕರ್ತವ್ಯ ವಹಿಸುತ್ತಿದ್ದ ಇವರು ರಜೆಯಲ್ಲಿ ತಮ್ಮ ಸ್ವಗ್ರಾಮ ಜಂಗ್ಲಾಗೆ ತೆರಳಿದ್ದರು. ಗಂಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ದುವಾಲಿಪಾರ ಗ್ರಾಮದ ಸಮೀಪ ಮೃತದೇಹ ಸಿಕ್ಕಿದೆ ಎಂದು ಎಎಸ್ಪಿ ಚಂದ್ರಕಾಂತ್ ಗೋವರ್ಣ ಮಾಹಿತಿ ನೀಡಿದರು.
ಬುಧವಾರ, ಆಗಸ್ಟ್ 30ರಂದು ಬುಧ್ರಾಮ್, ತಮ್ಮ ಸೋದರಳಿಯನನ್ನು ದುವಾಲಿಪಾರಾಕ್ಕೆ ಬಿಡಲು ಬೈಕ್ ಮೇಲೆ ತೆರಳಿದ್ದರು. ಅಲ್ಲಿಂದ ವಾಪಸಾಗುತ್ತಿದ್ದಾಗ ನಕ್ಸಲರು ಹೊಂಚು ಹಾಕಿ ತಡೆದಿದ್ದಾರೆ. ಬಳಿಕ ಅಪಹರಿಸಿ ಕಾಡಿಗೆ ಕರೆದೊಯ್ದ ಕೊಲೆ ಮಾಡಿದ್ದಾರೆ. ಇದಾದ ಬಳಿಕ ಶವವನ್ನು ರಸ್ತೆಗೆ ತಂದು ಎಸೆದಿದ್ದಾರೆ. ರಕ್ತದಲ್ಲಿ ತೋಯ್ದ ಶವವನ್ನು ಕಂಡ ಗ್ರಾಮಸ್ಥರು ಗಂಗಾಲೂರು ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ ಎಂದು ಅವರು ಹೇಳಿದರು.