ಕರ್ನಾಟಕ

karnataka

By

Published : Jun 10, 2023, 2:41 PM IST

ETV Bharat / bharat

Man slits throat: ತನ್ನ ಕತ್ತನ್ನು ತಾನೇ ಸೀಳಿಕೊಂಡ ಯುವಕ, ಬೆಚ್ಚಿಬಿದ್ದ ಜನರು!

ಯುವಕನೊಬ್ಬ ಕತ್ತು ಸೀಳಿಕೊಂಡ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಇದು ಆತ್ಮಹತ್ಯೆಯೇ, ಅಥವಾ ಬೇರೇನಾದರೂ ಕಾರಣವಿದೆಯಾ ಎಂಬುದು ತಿಳಿದು ಬಂದಿಲ್ಲ.

ತನ್ನ ಕತ್ತನ್ನು ತಾನೇ ಸೀಳಿಕೊಂಡ ಯುವಕ
ತನ್ನ ಕತ್ತನ್ನು ತಾನೇ ಸೀಳಿಕೊಂಡ ಯುವಕ

ಜಲ್ಪೈಗುರಿ (ರಾಜಸ್ಥಾನ):ಪ್ರೇಮ ವೈಫಲ್ಯ, ದ್ವೇಷ, ತುಸು ಹೆಚ್ಚೆಂದರೆ ಐಸಿಸ್​​ ಉಗ್ರರು ಸಾಲಾಗಿ ಕೂರಿಸಿ ಜನರ ಕತ್ತು ಕೊಯ್ದ ಘಟನೆಗಳನ್ನು ನಾವು ನೋಡಿದ್ದೇವೆ. ಆದರಿಲ್ಲಿ, ಯುವಕನೊಬ್ಬ ತನ್ನ ಕತ್ತನ್ನು ಚಾಕುವಿನಿಂದ ತಾನೇ ಕುಯ್ದುಕೊಂಡ ಭೀಕರ ಘಟನೆ ಶನಿವಾರ ನಡೆದಿದೆ. ಅತಿಯಾದ ರಕ್ತಸ್ರಾವದಿಂದಾಗಿ ಯುವಕ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.

ಘಟನೆಯ ವಿವರ:ಜಲ್ಪೈಗುರಿಯ ಮೇನಗುರಿ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಯುವಕನೊಬ್ಬ ಚಾಕುವಿನಿಂದ ಕತ್ತು ಸೀಳಿಕೊಂಡಿದ್ದಾನೆ. ಇದನ್ನು ಕಂಡವರು ಕೂಗಿ ಹೇಳಿದರೂ, ಆತ ನಿಲ್ಲಿಸದೇ ಕುತ್ತಿಗೆ ಸೀಳಿಕೊಂಡಿದ್ದಾನೆ. ಯಾಕಾಗಿ ಆತ ಈ ರೀತಿ ಮಾಡಿಕೊಂಡ ಎಂಬುದೇ ಅಲ್ಲಿದ್ದವರಿಗೆ ಅಚ್ಚರಿ ಮೂಡಿಸಿದೆ. ಈ ಭಯಾನಕ ದೃಶ್ಯವನ್ನು ಕಂಡವರು ಯುವಕನ ಹತ್ತಿರವೂ ಹೋಗದೇ ದೂರದಲ್ಲೇ ಭಯಭೀತರಾಗಿ ನಿಂತಿದ್ದರು. ಇದಲ್ಲದೇ, ಕೆಲವರು ಯುವಕರನ್ನು ರಕ್ಷಿಸಲು ಯತ್ನಿಸಿದಾಗ ಅವರ ಮೇಲೆಯೇ ಚಾಕು ತೋರಿಸಿ ಹಲ್ಲೆ ನಡೆಸಲು ಆತ ಯತ್ನಿಸಿದ್ದನಂತೆ.

ಈ ಘಟನೆಯಿಂದ ಸ್ಥಳದಲ್ಲಿ ಭಾರೀ ಆತಂಕ ಸೃಷ್ಟಿಯಾಗಿತ್ತು. ಚಾಕುವಿನಿಂದ ಕತ್ತುಕುಯ್ದುಕೊಂಡ ಬಳಿಕ ಅತಿಯಾದ ರಕ್ತಸ್ರಾವವಾಗಿ ಯುವಕ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ. ಕೆಲವರು ಯುವಕನಿಗೆ ಸಹಾಯ ಮಾಡಲು ಬಯಸಿದ್ದರೂ, ಕಾನೂನು ತೊಡಕು ಉಂಟಾಗಲಿದೆ ಎಂಬ ಕಾರಣಕ್ಕಾಗಿ ಹಿಂದೆ ಸರಿದಿದ್ದಾರೆ. ಇನ್ನು ಕೆಲವರು ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯಲು ಬಯಸಿದ್ದರು. ಆದರೆ ಅವರೂ ಯಾಕೋ ಮುಂದೆ ಬಂದಿಲ್ಲ ಎಂದು ತಿಳಿದುಬಂದಿದೆ.

ಚಾಕುವಿನಿಂದ ತನ್ನನ್ನೇ ತೀವ್ರ ಘಾಸಿ ಮಾಡಿಕೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದರೆ, ಕಾನೂನಿನ ಕಪಿಮುಷ್ಠಿಯಲ್ಲಿ ಸಿಕ್ಕಿಹಾಕಿಕೊಂಡು ಹಲವಾರು ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ ಎಂದು ಜನರು ಸಹಾಯಕ್ಕೆ ಯತ್ನಿಸುವ ಧೈರ್ಯ ತೋರಿಲ್ಲ ಎಂದು ಹೇಳಲಾಗಿದೆ.

ಪೊಲೀಸರಿಗೆ ಮಾಹಿತಿ, ಆಸ್ಪತ್ರೆಗೆ:ಬಳಿಕ ಅಲ್ಲಿದ್ದವರು ಹೆದರಿ ಮೇನಗುರಿ ಪೊಲೀಸ್ ಠಾಣೆಗೆ ಧಾವಿಸಿ ಗಾಯಗೊಂಡ ಯುವಕನ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಯುವಕನನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರು. ಯುವಕನ ಕಡೆಯಿಂದ ರಕ್ತಸಿಕ್ತ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಆತನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸ್ಥಳೀಯರ ಹೇಳಿಕೆಯಂತೆ ಈತ ಸುತ್ತಲಿನ ಪ್ರದೇಶದ ನಿವಾಸಿಯಲ್ಲ ಎಂದು ತಿಳಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಯುವಕನ ಮನೆ ಫಲಕಟಾದಲ್ಲಿದೆ. ಮೇನಗುರಿ ರಸ್ತೆ ರೈಲ್ವೆ ಗೇಟ್ ಬಳಿ ಬಂದು ಆತನೇ ಕತ್ತು ಸೀಳಿಕೊಂಡಿದ್ದಾನೆ. ಇದನ್ನು ಸ್ಥಳೀಯರು ಕಂಡಿದ್ದಾರೆ. ಜನರ ಕೂಗಾಟದ ನಡುವೆಯೂ ಆತ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಆತ ಜಲ್ಪೈಗುರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯಾವ ಕಾರಣಕ್ಕಾಗಿ ಆತ ಇಂತಹ ಕೃತ್ಯ ಎಸಗಿದ್ದಾನೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜಲ್ಪೈಗುರಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಂದೇನ್ ಭುಟಿಯಾ ಅವರು, "ಏನಾಯಿತು ಎಂದು ತನಿಖೆ ನಡೆಸುತ್ತಿದ್ದೇವೆ. ಇದು ಆತ್ಮಹತ್ಯೆ ಯತ್ನವೇ ಅಥವಾ ಇನ್ನೇನಾದರೂ ಕಾರಣವಿದೆಯಾ ಎಂಬುದನ್ನು ತನಿಖೆ ಮಾಡುತ್ತಿದ್ದೇವೆ. ಘಟನೆಗೆ ಕಾರಣ ತನಿಖೆಯ ನಂತರ ತಿಳಿಯುತ್ತದೆ" ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:Death sentence: ಐವರ ಕೊಂದ ಹಂತಕನಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್​

ABOUT THE AUTHOR

...view details