ಕರ್ನಾಟಕ

karnataka

ETV Bharat / bharat

ನಂದಿಗ್ರಾಮದಲ್ಲಿ ಸಿಎಂ ಮಮತಾ ಮತಬೇಟೆ, ಇಂದು 8 ಕಿಮೀ ರೋಡ್​ ಶೋ - ಎರಡನೇ ಹಂತದ ವಿಧಾನಸಭಾ ಚುನಾವಣೆ

ಸುವೇಂದು ಅಧಿಕಾರಿಯನ್ನು ಸೋಲಿಸಲು ಪಣ ತೊಟ್ಟಿರುವ ಮಮತಾ ಬ್ಯಾನರ್ಜಿ ಅವರು ತಮ್ಮ ಕಡೆಯ ಹಂತದ ಚುನಾವಣಾ ಪ್ರಚಾರ ತೀವ್ರಗೊಳಿಸಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಖುದಿರಾಮ್ ಮೋರ್‌ನಿಂದ ನಂದಿಗ್ರಾಮ್ ಬ್ಲಾಕ್ 2ರ ಠಾಕೂರ್‌ಚೌಕ್‌ವರೆಗೆ 8 ಕಿಲೋಮೀಟರ್ ರೋಡ್ ಶೋ ನಡೆಸಲಿದ್ದಾರೆ.

ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

By

Published : Mar 29, 2021, 9:31 AM IST

ಕೋಲ್ಕತ್ತಾ: ನಂದಿಗ್ರಾಮ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ತಮ್ಮ ಮಾಜಿ ಸಹೋದ್ಯೋಗಿ ಸುವೇಂದು ಅಧಿಕಾರಿಯನ್ನು ಸೋಲಿಸಲು ಪಣ ತೊಟ್ಟಿರುವ ಸಿಎಂ ಮಮತಾ ಬ್ಯಾನರ್ಜಿ ತಮ್ಮ ಕಡೆಯ ಹಂತದ ಚುನಾವಣಾ ಪ್ರಚಾರ ತೀವ್ರಗೊಳಿಸಿದ್ದಾರೆ.

ಎರಡನೇ ಹಂತದ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಮಂಗಳವಾರ ಸಂಜೆ ಬ್ರೇಕ್​ ಬೀಳಲಿದೆ. ಈ ಹಿನ್ನೆಲೆ ಕೊನೆಯ ಹಂತದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ ಖುದಿರಾಮ್ ಮೋರ್‌ನಿಂದ ನಂದಿಗ್ರಾಮ್ ಬ್ಲಾಕ್ 2ರ ಠಾಕೂರ್ ‌ಚೌಕ್‌ವರೆಗೆ 8 ಕಿಲೋಮೀಟರ್ ರೋಡ್ ಶೋ ನಡೆಸಲಿದ್ದಾರೆ. ನಂತರ ಬೋಯಲ್ ಸೆಕೆಂಡ್​ರಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 3: 30 ಕ್ಕೆ ಅಮದಾಬಾದ್ ಪ್ರೌಢ ಶಾಲಾ ಮೈದಾನದಲ್ಲಿ ಸಹ ಸಾರ್ವಜನಿಕ ಸಭೆ ನಡೆಸಿ ಮತಬೇಟೆ ನಡೆಸಲಿದ್ದಾರೆ.

ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮ ಅತ್ಯಂತ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಇಲ್ಲಿಯವರೆಗೆ ಮಮತಾ ಬ್ಯಾನರ್ಜಿ ಭವಾನಿಪೋರ್‌ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರು. ನಂದಿಗ್ರಾಮದಲ್ಲೇ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕುಳಿತು ದೀದಿ ರಾಜಕೀಯದಲ್ಲಿ ಪ್ರಬಲ ನೆಲೆ ಕಂಡುಕೊಂಡವರಾದರೂ, ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದವರು ಸುವೇಂದು ಅಧಿಕಾರಿ. ಇದೇ ಅಧಿಕಾರಿ ಈಗ ಬಿಜೆಪಿ ಸೇರಿದ್ದು, ನಂದಿಗ್ರಾಮದಿಂದಲೇ ಸ್ಪರ್ಧೆಗಿಳಿದಿದ್ದಾರೆ. ಹೀಗಾಗಿ ಅವರನ್ನು ಚುನಾವಣಾ ಅಖಾಡದಲ್ಲೇ ಮಣಿಸುವ ತೀರ್ಮಾನವನ್ನು ಮಮತಾ ಬ್ಯಾನರ್ಜಿ ತೆಗೆದುಕೊಂಡಿದ್ದಾರೆ.

ಈ ಹಿಂದೆ ಬಿಜೆಪಿ ಸೇರ್ಪಡೆ ವೇಳೆ ಪ್ರತಿಕ್ರಿಯೆ ನೀಡಿದ್ದ ಸುವೇಂದು ಅಧಿಕಾರಿ, ನಂದಿಗ್ರಾಮದಲ್ಲಿ ಟಿಎಂಸಿಯನ್ನು 50,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸುವುದಾಗಿ ಹೇಳಿದ್ದರು. ಇದೀಗ ಅವರಿಗೆ ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯಿಂದಲೇ ಸವಾಲು ಎದುರಾಗಿದೆ. ತಮ್ಮ ಮಾತನ್ನು ಸುವೇಂದು ಅಧಿಕಾರಿ ಉಳಿಸಿಕೊಳ್ಳುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಈಗಾಗಲೇ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಶನಿವಾರ ನಡೆದಿದ್ದು, ಶೇಕಡಾ 79.79 ರಷ್ಟು ಮತದಾನವಾಗಿದೆ. ಉಳಿದ ಏಳು ಹಂತಗಳ ಮತದಾನ ನಿಗದಿಯಾದ ದಿನಾಂಕಗಳಂದು ನಡೆಯಲಿದ್ದು, ಮತಗಳ ಎಣಿಕೆ ಮೇ 2 ರಂದು ನಡೆಯಲಿದೆ.

ABOUT THE AUTHOR

...view details