ಕರ್ನಾಟಕ

karnataka

ಮುಂದಿನ ದಿನಗಳಲ್ಲಿ ಐಪಿಸಿ, ಸಿಆರ್‌ಪಿಸಿ, ಸಾಕ್ಷ್ಯ ಕಾಯ್ದೆಗಳಿಗೆ ಮಹತ್ವದ ಬದಲಾವಣೆ: ಅಮಿತ್ ಶಾ

By

Published : Feb 16, 2023, 10:04 PM IST

ವಿಧಿವಿಜ್ಞಾನದ ಪುರಾವೆಗಳ ಆಧಾರದ ಮೇಲೆ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸುವ ಅವಶ್ಯಕತೆ ಇದೆ ಎಂದು ಕೇಂದ್ರ ಸಚಿವ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

major-changes-in-ipc-crpc-evidence-act-in-coming-days-amit-shah
ಐಪಿಸಿ, ಸಿಆರ್‌ಪಿಸಿ, ಸಾಕ್ಷ್ಯ ಕಾಯ್ದೆಗಳಲ್ಲಿ ಆಮೂಲಾಗ್ರ ಬದಲಾವಣೆ: ಗೃಹ ಸಚಿವ ಅಮಿತ್ ಶಾ

ನವದೆಹಲಿ: ಕೇಂದ್ರ ಸರ್ಕಾರವು ಮುಂಬರುವ ದಿನಗಳಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ), ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ (ಸಿಆರ್‌ಪಿಸಿ) ಹಾಗೂ ಸಾಕ್ಷ್ಯ ಕಾಯ್ದೆಗಳಲ್ಲಿ ಆಮೂಲಾಗ್ರ ಬದಲಾವಣೆ ತರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ದೆಹಲಿ ಪೊಲೀಸ್​ ಇಲಾಖೆಯ ಹಮ್ಮಿಕೊಂಡಿದ್ದ 76ನೇ ಸಂಸ್ಥಾಪನಾ ಆಚರಣೆ ಉದ್ದೇಶಿಸಿ ಅವರು ಮಾತನಾಡಿದರು.

ಐಪಿಸಿ, ಸಿಆರ್‌ಪಿಸಿ ಹಾಗೂ ಸಾಕ್ಷ್ಯ ಕಾಯ್ದೆಗಳಲ್ಲಿ ಸಂವಿಧಾನದ ಆತ್ಮ ಮತ್ತು ಸಮಯಕ್ಕೆ ಅನುಗುಣವಾಗಿ ಬದಲಾವಣೆ ತರಲಾಗುವುದು. ಜೊತೆಗೆ ಆಂತರಿಕ ಭದ್ರತೆಯನ್ನು ಬಲಪಡಿಸಲು ಫೋರೆನ್ಸಿಕ್ ಮತ್ತು ಇತರ ಸಾಕ್ಷ್ಯಗಳ ಲಭ್ಯತೆಯೊಂದಿಗೆ ಕಾಯ್ದೆಗಳಿಗೆ ಮತ್ತಷ್ಟು ಶಕ್ತಿ ತುಂಬಲಾಗುವುದು. ಇದಕ್ಕಾಗಿ ವಿಧಿವಿಜ್ಞಾನದ ಜಾಲವು ದೇಶಾದ್ಯಂತ ಪಸರಿಸಬೇಕಿದೆ ಎಂದು ಗೃಹ ಸಚಿವರು ಒತ್ತಿ ಹೇಳಿದರು.

ಇದೇ ನಿಟ್ಟಿನಲ್ಲಿ ದೆಹಲಿ ಪೊಲೀಸರು ಒಂದು ಸುಧಾರಣೆಯ ಪ್ರಯೋಗ ಪ್ರಾರಂಭಿಸಿದ್ದಾರೆ. ಇದರ ಅಡಿಯಲ್ಲಿ 6 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಶಿಕ್ಷೆಗೆ ಒಳಪಡುವ ಪ್ರತಿ ಅಪರಾಧದಲ್ಲಿ ವಿಧಿವಿಜ್ಞಾನ ತಂಡದ ಭೇಟಿ, ಪರಿಶೀಲನೆಯನ್ನು ಕಡ್ಡಾಯಗೊಳಿಸಲಾಗಿದೆ. ವಿಧಿವಿಜ್ಞಾನ ತಂಡದ ಭೇಟಿಯೊಂದಿಗೆ ದೆಹಲಿ ಪೊಲೀಸರು ಪ್ರತಿ ಅಪರಾಧವನ್ನು ತನಿಖೆ ಮಾಡುವ ದೇಶದ ಮೊದಲ ಪೊಲೀಸ್ ಪಡೆಯಾಗಲಿದೆ ಎಂದು ತಿಳಿಸಿದರು.

ಇಷ್ಟೇ ಅಲ್ಲ, ವಿಧಿ ವಿಜ್ಞಾನದ ಪುರಾವೆಗಳ ಆಧಾರದ ಮೇಲೆ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸುವ ಅವಶ್ಯಕತೆ ಇದೆ ಎಂದು ಶಾ ಅಭಿಪ್ರಾಯಪಟ್ಟರು. ಇದರ ಭಾಗವಾಗಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ (ಎನ್‌ಎಫ್‌ಎಸ್‌ಯು)ದ ದೆಹಲಿ ಕ್ಯಾಂಪಸ್‌ನಲ್ಲಿ ಈ ಕುರಿತ ಶೈಕ್ಷಣಿಕ ಸೌಲಭ್ಯಗಳಿಗಾಗಿ 34 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಆಧುನಿಕ ಕಟ್ಟಡವನ್ನು ಅವರು ಉದ್ಘಾಟಿಸಿದರು.

ಕಾಶ್ಮೀರದಲ್ಲಿ ಉಗ್ರ ಕೃತ್ಯಗಳು ಇಳಿಕೆ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿಯನ್ನು ವಿಶೇಷ ರದ್ದುಗೊಳಿಸಿದ ನಂತರ, ಭದ್ರತಾ ಪಡೆಗಳು ಭಯೋತ್ಪಾದನೆಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಸಂಪೂರ್ಣ ಹಿಡಿತ ಸಾಧಿಸುತ್ತಿವೆ. ಇತ್ತೀಚಿನ ಮಾಹಿತಿಯ ಪ್ರಕಾರ ಅಲ್ಲಿನ ಭಯೋತ್ಪಾದಕ ಕೃತ್ಯಗಳಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಪ್ರವಾಸೋದ್ಯಮಕ್ಕಾಗಿ ಕೋಟ್ಯಂತರ ಜನರು ಕಣಿವೆ ನಾಡಿಗೆ ಭೇಟಿ ನೀಡುತ್ತಿದ್ದಾರೆ ಎಂದು ಗೃಹ ಸಚಿವ ಅಮಿತ್​ ಶಾ ತಿಳಿಸಿದರು.

ಐದೇ ದಿನದಲ್ಲಿ ಪಾಸ್​ಪೋರ್ಟ್ ಲಭ್ಯ​: ಇದೇ ಸಂದರ್ಭದಲ್ಲಿ ಕೇಂದ್ರದ ಹೊಸ ಎಂಪಾರ್ಸ್​ಪೋರ್ಟ್​ (mPassport) ಸೇವಾ ಉಪಕ್ರಮವನ್ನು ಪರಿಚಯಿಸಿದ ಸಚಿವರು, ರಾಷ್ಟ್ರ ರಾಜಧಾನಿಯ ನಾಗರಿಕರು ತಮ್ಮ ಪಾಸ್‌ಪೋರ್ಟ್‌ಗಳ ಪೊಲೀಸ್ ಪರಿಶೀಲನೆಗೆ ಅರ್ಜಿ ಸಲ್ಲಿಸಿದ ಕೇವಲ ಐದು ದಿನಗಳಲ್ಲಿ ಲಭ್ಯವಾಗುತ್ತದೆ. ಇನ್ಮುಂದೆ, ಇಲ್ಲಿನ ನಾಗರಿಕರು ತಮ್ಮ ಪಾಸ್‌ಪೋರ್ಟ್‌ಗಳನ್ನು ಪಡೆಯಲು ಅಥವಾ ಪೊಲೀಸ್ ಪರಿಶೀಲನೆಯನ್ನು ಪೂರ್ಣಗೊಳಿಸಲು 15 ದಿನಗಳವರೆಗೆ ಕಾಯಬೇಕಾಗಿಲ್ಲ. ಪ್ರತಿದಿನ ಸುಮಾರು 2,000 ಪಾಸ್‌ಪೋರ್ಟ್ ಅರ್ಜಿಗಳು ಬರುತ್ತಿವೆ. ಈ ಪ್ರಕ್ರಿಯೆಗೆ ಸಂಬಂಧಿಸಿದ ಸಾರ್ವಜನಿಕರ ಅನುಕೂಲಕ್ಕಾಗಿ ಇಂತಹ ಗಮನಾರ್ಹ ಬದಲಾವಣೆ ಪರಿಚಯಿಸುತ್ತಿದ್ದೇವೆ. ದೆಹಲಿಯಂತಹ ನಗರದಲ್ಲಿ ಸಮಯದ ಮೌಲ್ಯ ನನಗೆ ಗೊತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:ಪತ್ನಿ ಮೆಚ್ಚಿಸಲು ಪಾಸ್‌ಪೋರ್ಟ್ ಸಿಸ್ಟಮ್ ಹ್ಯಾಕ್​ ಮಾಡಿದ ಸಾಫ್ಟ್​ವೇರ್​ ಇಂಜಿನಿಯರ್​!

ABOUT THE AUTHOR

...view details