ಕರ್ನಾಟಕ

karnataka

ETV Bharat / bharat

ಮದುವೆ ನೋಂದಣಿಗೆ ಬಂದ ವಿಕಲಚೇತನ ವಧು; ಲಿಫ್ಟ್​ ಇಲ್ಲ, ಸಹಿಗೆ ಕೆಳಗೆ ಬರಲ್ಲ ಎಂದ ಅಧಿಕಾರಿಗಳು - ವಿಕಲಚೇತನ ಮಹಿಳೆಯೊಬ್ಬರು ಕಷ್ಟಕ್ಕೆ

ಸರ್ಕಾರಿ ಕಚೇರಿಗಳ ಅವ್ಯವಸ್ಥೆ ಮತ್ತು ಅಧಿಕಾರಿಗಳ ಅಮಾನವೀಯತೆಗೆ ಸಾಕ್ಷಿ ಎಂಬಂತಹ ಘಟನೆ ಮಹಾರಾಷ್ಟ್ರದಿಂದ ವರದಿಯಾಗಿದೆ.

maharashtra-disabled-woman-carried-to-second-floor-to-get-married-as-registrars-office-had-no-lift-alleges-officials-did-not-come-down
maharashtra-disabled-woman-carried-to-second-floor-to-get-married-as-registrars-office-had-no-lift-alleges-officials-did-not-come-down

By ETV Bharat Karnataka Team

Published : Oct 18, 2023, 3:14 PM IST

Updated : Oct 18, 2023, 3:33 PM IST

ಮುಂಬೈ( ಮಹಾರಾಷ್ಟ್ರ):ಸರ್ಕಾರಿ ಕಚೇರಿಯಲ್ಲಿನ ಅವ್ಯವಸ್ಥೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ತಾತ್ಸಾರದಿಂದ ವಿಕಲಚೇತನ ಮಹಿಳೆಯೊಬ್ಬರು ಕಷ್ಟಕ್ಕೆ ಒಳಗಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ​ಎರಡು ಕಾಲಿಲ್ಲದ ಮಹಿಳೆ ವೀಲ್​ಚೇರ್​ ಸಹಾಯದಿಂದ ಮದುವೆ ನೋಂದಣಿಗೆ ರಿಜಿಸ್ಟ್ರಾರ್​​ ಕಚೇರಿಗೆ ಆಗಮಿಸಿದ್ದಾರೆ. ಈ ವೇಳೆ ಲಿಫ್ಟ್​ ಕೂಡ ಕಾರ್ಯ ನಿರ್ವಹಣೆ ಮಾಡುತ್ತಿರಲಿಲ್ಲ. ಜೊತೆಗೆ ಮದುವೆ ದಾಖಲಾತಿ ಪತ್ರಕ್ಕೆ ಸಹಿ ಪಡೆಯಲು ಅಧಿಕಾರಿಗಳು ಕೂಡ ಕೆಳಗೆ ಬಾರದೇ ಕಡೆಗೆ ಅವರನ್ನು ಕುಟುಂಬಸ್ಥರು ಮೇಲೆತ್ತಿಕೊಂಡು ಹೋಗಿರುವ ಘಟನೆ ನಡೆದಿದೆ.

ಘಟನೆ ಕುರಿತು ಸಾಮಾಜಿಕ ಜಾಲತಾಣದ ಎಕ್ಸ್​ನಲ್ಲಿ ಮಧುಮಗಳು ವಿರಾಲಿ ಮೋದಿ, ಸರ್ಕಾರಿ ಕಚೇರಿಯಲ್ಲಿ ನಡೆಸಿಕೊಂಡಿರುವ ಅಮಾನವೀಯತೆ ಕುರಿತು ಅಸಮಾಧಾನ ಹೊರ ಹಾಕಿದ್ದಾರೆ. ಅಕ್ಟೋಬರ್​ 16ರಂದು ಮುಂಬೈನ ಉಪನಗರದಲ್ಲಿರುವ ಖಾರ್​​ನಲ್ಲಿರುವ ಮದುವೆ ನೋಂದಣಿ ಕಚೇರಿಗೆ ತೆರಳಿದ್ದೆವು. ಕಚೇರಿಯು ಎರಡನೇ ಮಹಡಿಯಲ್ಲಿದ್ದು, ಅಲ್ಲಿ ಲಿಫ್ಟ್​ ಕೂಡ ಕಾರ್ಯಾಚರಣೆ ನಡೆಸುತ್ತಿರಲಿಲ್ಲ. ಅಧಿಕಾರಿಗಳು ಕೂಡ ಮದುವೆ ದಾಖಲಾತಿ ಸಹಿಯನ್ನು ನನ್ನಿಂದ ಪಡೆಯಲು ಕೆಳಗೆ ಬರಲು ಸಿದ್ದರಿರಲಿಲ್ಲ. ಕಡೆಗೆ ಎರಡು ಮೆಟ್ಟಿಲುಗಳು ಹತ್ತಿ ಮೇಲೆ ಹೋಗುವ ಸಂದರ್ಭ ಎದುರಾಯಿತು.

ಮೆಟ್ಟಿಲುಗಳು ಕಡಿದಾಗಿದ್ದು, ಬೇಲಿಗಳು ಕೂಡ ಸಡಿಲವಾಗಿದ್ದು, ತುಕ್ಕು ಹಿಡಿದಿದ್ದವು. ನಾನು ವಿಕಲಚೇತನೆ ಎಂಬ ಮಾಹಿತಿಯನ್ನು ನನ್ನ ಏಜೆಂಟ್​​ಗಳಿಗೂ ಕೂಡ ಮುಂಚೆಯೇ ನೀಡಿದ್ದೆ. ಯಾರು ಕೂಡ ನನ್ನ ಸಹಾಯಕ್ಕೆ ಬರಲಿಲ್ಲ. ಯಾವುದೇ ವ್ಯವಸ್ಥೆಯನ್ನೂ ಕೂಡ ನೀಡಲಿಲ್ಲ ಎಂದಿರುವ ಅವರು ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರದ ಆಕ್ಸೆಸಿಬಲ್ ಇಂಡಿಯಾ ಅಭಿಯಾನ ಏನಾಯಿತು ಎಂದು ಇದೇ ವೇಳೆ ಪ್ರಶ್ನಿಸಿದ್ದಾರೆ.

ಇದು ಯಾವ ನ್ಯಾಯ ಎಂದು ಖಾರವಾಗಿ ಪ್ರಶ್ನಿಸಿರುವ ಅವರು, ನಾನು ವೀಲ್​ಚೇರ್​ ಬಳಕೆದಾರಳು ಎಂಬ ಮಾತ್ರಕ್ಕೆ ನಾನು ಪ್ರೀತಿಸಿದವರನ್ನು ಮದುವೆಯಾಗುವ ಹಕ್ಕನ್ನು ಹೊಂದಿಲ್ಲವೇ? ಯಾರಾದರೂ ಕಾಲು ಜಾರಿ ನನ್ನ ಮೇಲೆ ಬಿದ್ದರೆ ಅಥವಾ ನಾನೇ ನನ್ನ ಮದುವೆ ದಿನ ಕಾಲು ಜಾರಿ ಬಿದ್ದರೆ ಏನಾಗಬಹುದು? ಇದಕ್ಕೆ ಯಾರು ಜವಾಬ್ದಾರಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ದೇಶದ ಪ್ರಜೆಯಾಗಿ ವಿಕಲಚೇತನರಿಗೆ ದೇಶ ಯಾವುದೇ ಸವಲತ್ತನ್ನು ನೀಡದಿರುವುದು ತುಂಬಾ ನೋವಿನ ವಿಚಾರವಾಗಿದೆ. ಮಾನವೀಯತೆಯಲ್ಲಿ ನಾನು ನಂಬಿಕೆ ಇಟ್ಟುಕೊಂಡಿದ್ದು, ಅದೀಗ ನಾಶವಾಗಿದೆ. ನನ್ನನ್ನು ಎರಡನೇ ಅಂತಸ್ಥಿಗೆ ತೆಗೆದುಕೊಂಡು ಹೋಗಲು ನಾನೇನು ಯಾವುದೋ ಸಾಮಗ್ರಿ ಅಲ್ಲ. ನಾನು ಮನುಷ್ಯಳಾಗಿದ್ದು, ನನ್ನ ಹಕ್ಕು ಕೂಡ ಮುಖ್ಯವಾಗುತ್ತದೆ ಎಂದಿದ್ದಾರೆ.

ನನ್ನ ದೇಶವೂ ನಮ್ಮ ಅಗತ್ಯತೆಗಳನ್ನು ಸರಿ ಹೊಂದಿಸಬೇಕಿದ್ದು, ಇದು ಲಕ್ಷಾಂತರ ವಿಕಲಚೇತನರಿಗೆ ಬೇಕಾಗಿದೆ. ಇದು ನಿಜಕ್ಕೂ ಅನ್ಯಾಯ, ಅನೀರಿಕ್ಷಿತವಾಗಿದೆ. ನನ್ನ ಹಕ್ಕು ಪ್ರಮುಖವಾಗಿದೆ. ಇದು ಸರ್ಕಾರಿ ಕಟ್ಟಡವಾಗಿದ್ದು, ಈ ದೇಶವನ್ನು ನಡೆಸುವ ಉಸ್ತುವಾರಿ ಜನರು ಇದರ ಜವಾಬ್ದಾರಿಯನ್ನು ಹೊರಬೇಕಾಗಿದೆ ಎಂದು ತಿಳಿಸಿದ್ದಾರೆ. ಈ ಪೋಸ್ಟ್​ ಅ​ನ್ನು ವಿರಾಲಿ ಬೃಹನ್ ​ಮುಂಬೈ ಮುನ್ಸಿಪಲ್​ ಕಾರ್ಪೊರೇಷನ್​, ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​ ಶಿಂಥೆ ಕಚೇರಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್​ ಶಾ ಸೇರಿದಂತೆ ಹಲವರಿಗೆ ಟ್ಯಾಕ್​ ಮಾಡಿದ್ದಾರೆ.

ಇದನ್ನೂ ಓದಿ: ಆನ್​ಲೈನ್​​ ಗೇಮ್ಸ್​​ನಲ್ಲಿ 1.5 ಕೋಟಿ ರೂ. ಗೆದ್ದಿದ್ದ ಪಿಎಸ್​ಐ ಅಮಾನತು

Last Updated : Oct 18, 2023, 3:33 PM IST

ABOUT THE AUTHOR

...view details