ಮುಂಬೈ (ಮಹಾರಾಷ್ಟ್ರ):ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಕಿಚ್ಚು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇಂದು ರಾಜಧಾನಿ ಮುಂಬೈನಲ್ಲಿ ಸರ್ವಪಕ್ಷ ಸಭೆ ನಡೆಸಿದೆ. ಮರಾಠ ಮೀಸಲಾತಿ ನೀಡಲು ಎಲ್ಲ ಪಕ್ಷಗಳು ಒಪ್ಪಿಗೆ ಸೂಚಿಸಿವೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಭೆ ಬಳಿಕ ತಿಳಿಸಿದ್ದಾರೆ.
ಸರ್ವಪಕ್ಷ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ವಪಕ್ಷ ಸಭೆಯಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆ. ಅದು ಕೂಡ, ಇತರ ಸಮುದಾಯಗಳಿಗೆ ಅನ್ಯಾಯವಾಗದಂತೆ ಕಾನೂನಿನ ಚೌಕಟ್ಟಿನೊಳಗೆ ಮೀಸಲಾತಿ ನೀಡಬೇಕು ಎಂದು ನಿರ್ಧರಿಸಲಾಗಿದೆ ಎಂದು ಹೇಳಿದರು.
ಮೀಸಲಾತಿ ಕಲ್ಪಿಸುವಲ್ಲಿ ಸರ್ಕಾರದ ಪ್ರಯತ್ನದಲ್ಲಿ ನಂಬಿಕೆ ಇಡುವಂತೆ ನಾನು ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಅವರಿಗೆ ಮನವಿ ಮಾಡುತ್ತೇನೆ. ಈ ಪ್ರತಿಭಟನೆಯು ಹೊಸ ದಿಕ್ಕನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಘಟನೆಗಳು ಸಮರ್ಥನೀಯವಲ್ಲ. ಇವು ಚಳವಳಿಗೆ ಅಪಖ್ಯಾತಿ ತರುತ್ತಿವೆ. ಇಂತಹ ಘಟನೆಗಳನ್ನು ನಾವು ಬಲವಾಗಿ ತಿರಸ್ಕರಿಸುತ್ತೇವೆ ಎಂದರು.
ಇದನ್ನೂ ಓದಿ:ಮರಾಠ ಮೀಸಲಾತಿ ಹೋರಾಟ ತೀವ್ರ: ಇಬ್ಬರು ಶಿವಸೇನೆ ಸಂಸದರ ರಾಜೀನಾಮೆ, ಸರ್ಕಾರದಿಂದ ಸುಗ್ರೀವಾಜ್ಞೆ ಸಾಧ್ಯತೆ
ಜನಸಾಮಾನ್ಯರಿಗೆ ಅಭದ್ರತೆ ಕಲ್ಪನೆ ಮೂಡಬಾರದು. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಶಾಂತಿ ಕಾಪಾಡಲು ಮತ್ತು ರಾಜ್ಯ ಸರ್ಕಾರದೊಂದಿಗೆ ಸಹಕರಿಸಲು ನಾನು ಎಲ್ಲರಿಗೂ ವಿನಂತಿಸುತ್ತೇನೆ. ಮೀಸಲಾತಿಗಾಗಿ ಸಮಯ ನೀಡಬೇಕು. ಸರ್ವಪಕ್ಷ ಸಭೆಯಲ್ಲಿ ಎಲ್ಲರೂ ಕೂಡ ಇದೇ ನಿರ್ಧಾರಕ್ಕೆ ಬಂದಿದ್ದೇವೆ. ಯಾವುದೇ ಅಹಿತಕರ ಘಟನೆಗಳ ಬಗ್ಗೆ ಎಲ್ಲರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಸಿಎಂ ಶಿಂಧೆ ವಿವರಿಸಿದರು.
ಮೂವರು ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ರಚಿಸಲಾಗಿದೆ. ಹಿಂದುಳಿದ ವರ್ಗಗಳ ಆಯೋಗವು ಯುದ್ಧೋಪಾದಿಯಲ್ಲಿ ತನ್ನ ಕಾರ್ಯದಲ್ಲಿ ನಿರತವಾಗಿದೆ. ಶೀಘ್ರವೇ ಮರಾಠ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಲು ತೀರ್ಮಾನ ಕೈಗೊಳ್ಳಲಾಗುವುದು. ಇದಕ್ಕೆ ಸಮಯಾವಕಾಶ ನೀಡಬೇಕಾಗಿದ್ದು, ಮರಾಠ ಸಮುದಾಯವೂ ತಾಳ್ಮೆಯಿಂದಿರಬೇಕು ಎಂದು ಏಕನಾಥ್ ಮನವಿ ಮಾಡಿದ್ದಾರೆ.
ಸಭೆಯಲ್ಲಿ ಯಾರೆಲ್ಲ ಭಾಗಿ?: ಸಹ್ಯಾದ್ರಿ ಅತಿಥಿ ಗೃಹದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಹಲವು ನಾಯಕರು ಪಾಲ್ಗೊಂಡಿದ್ದರು. ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ವರಿಷ್ಠ ಶರದ್ ಪವಾರ್, ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್, ಸಚಿವರಾದ ರಾಧಾಕೃಷ್ಣ ವಿಖೆ ಪಾಟೀಲ್, ಚಂದ್ರಕಾಂತ್ ದಾದಾ ಪಾಟೀಲ್, ಛಗನ್ ಭುಜಬಲ್, ದಿಲೀಪ್ ವಲ್ಸೆ ಪಾಟೀಲ್, ಗಿರೀಶ್ ಮಹಾಜನ್, ದಾದಾಜಿ ಭೂಸೆ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ ವಾಡೆತ್ತಿವಾರ್, ಉದ್ಧವ್ ಠಾಕ್ರೆ ಬಣದ ಶಿವಸೇನೆ ಶಾಸಕರು ಮತ್ತು ಇತರ ಪಕ್ಷಗಳ ಅನೇಕ ನಾಯಕರು ಭಾಗವಹಿಸಿದ್ದರು.
ಉದ್ಧವ್ ಠಾಕ್ರೆಗೆ ಆಹ್ವಾನವಿಲ್ಲ: ಮತ್ತೊಂದೆಡೆ, ಇಂದಿನ ಸರ್ವಪಕ್ಷ ಸಭೆಗೆ ಮತ್ತು ಉದ್ಧವ್ ಠಾಕ್ರೆ ಬಣದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಆಹ್ವಾನ ನೀಡಿಲ್ಲ. ಉದ್ಧವ್ ಠಾಕ್ರೆ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರೂ ಸರ್ಕಾರ ಸಭೆಗೆ ಕರೆದಿಲ್ಲ.
ಈ ಬಗ್ಗೆ ಸಂಸದ ಸಂಜಯ್ ರಾವತ್ ಆಕ್ರೋಶ ವ್ಯಕ್ತಪಡಿಸಿ, ತಮ್ಮ ಪಕ್ಷದ ಸಂಸದರು ಮತ್ತು ಶಾಸಕರಿಗೆ ಸರ್ವಪಕ್ಷ ಸಭೆಗೆ ಆಹ್ವಾನ ನೀಡಿಲ್ಲ. ಯಾವುದೇ ಶಾಸಕರನ್ನು ಹೊಂದಿರುವ ಪಕ್ಷವನ್ನು ಸಭೆಗೆ ಆಹ್ವಾನಿಸಲಾಗಿದೆ. 16 ಶಾಸಕರು ಮತ್ತು 6 ಸಂಸದರನ್ನು ಹೊಂದಿರುವ ನಮ್ಮ ಪಕ್ಷವನ್ನು ಆಹ್ವಾನಿಸಿಲ್ಲ ಎಂದು ಮಂಗಳವಾರ ವಾಗ್ದಾಳಿ ನಡೆಸಿದ್ದರು. ಆದರೂ, ಮರಾಠ ಮೀಸಲಾತಿಗಾಗಿ ಯಾವುದೇ ರಾಜಕೀಯ ಮಾಡದೆ ಉದ್ಧವ್ ಠಾಕ್ರೆ ಬಣವು ತಮ್ಮ ಶಾಸಕರನ್ನು ಈ ಸಭೆಗೆ ಕಳುಹಿಸಲಾಗಿದೆ ಎಂದು ಹೇಳಿಕೊಂಡಿದೆ.
ಇದನ್ನೂ ಓದಿ:ಮುಂಬೈನಲ್ಲಿ ಪಟಾಕಿ ಸಿಡಿಸುವುದಿಲ್ಲ: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆ