ಮುಂಬೈ (ಮಹಾರಾಷ್ಟ್ರ): ಕೊರೊನಾ ಆರಂಭವಾದ ಕಾಲದಿಂದ ಇಲ್ಲಿಯವರೆಗೂ ಮಹಾರಾಷ್ಟ್ರ ಕೋವಿಡ್ ಹಾವಳಿಗೆ ಕಂಗೆಟ್ಟಿದೆ. ದಿನೆ ದಿನೇ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಕೋವಿಡ್ ಮಹಾಮಾರಿ ತಡೆಗೆ ಉದ್ಧವ್ ಠಾಕ್ರೆ ಸರ್ಕಾರ ಹರಸಾಹಸ ಪಡುತ್ತಿದೆ. ಈ ಸಂಬಂಧ ಅನೇಕ ಕಟ್ಟು ನಿಟ್ಟಿನ ಕ್ರಮಗಳು ಜಾರಿಯಲ್ಲಿವೆ. ಕೊರೊನಾ ನಿಯಂತ್ರಣಕ್ಕೆ ಮಹಾರಾಷ್ಟ್ರ ಸರ್ಕಾರ ಮತ್ತೊಂದು ಹೆಜ್ಜೆಯಿಟ್ಟಿದ್ದು, ಆರು ರಾಜ್ಯಗಳನ್ನು ಸೂಕ್ಷ್ಮ ವಲಯಗಳೆಂದು ಘೋಷಿಸಿದೆ. ಈ ರಾಜ್ಯಗಳಿಂದ ಬರುವ ಜನರಿಗೆ ಆರ್ಟಿ-ಪಿಸಿಆರ್ ನೆಗೆಟಿವ್ ವರದಿ ಕಡ್ಡಾಯವಾಗಿದೆ.
ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ ಹೊರಡಿಸಿದ ಆದೇಶದಲ್ಲಿ, ಕೇರಳ, ಗೋವಾ, ಗುಜರಾತ್, ದೆಹಲಿ, ರಾಜಸ್ಥಾನ ಮತ್ತು ಉತ್ತರಾಖಂಡ ರಾಜ್ಯಗಳನ್ನು ಕೊರೊನಾ ಸೂಕ್ಷ್ಮವಲಯಗಳೆಂದು ಘೋಷಿಸಲಾಗಿದೆ. ಆದೇಶದಂತೆ ಈ ಆರು ರಾಜ್ಯಗಳಿಂದ ಮಹಾರಾಷ್ಟ್ರಕ್ಕೆ ಬರುವ ಪ್ರಯಾಣಿಕರು ರೈಲು ಪ್ರಯಾಣದ 48 ಗಂಟೆಗಳ ಮುಂಚೆ ಆರ್ಟಿ-ಪಿಸಿಆರ್ ನೆಗೆಟಿವ್ ವರದಿಯನ್ನು ಹೊಂದಿರಬೇಕು. ಕೋವಿಡ್ ಸೋಂಕು ಪ್ರಸರಣವನ್ನು ನಿಗ್ರಹಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.