ಕರ್ನಾಟಕ

karnataka

By

Published : Jan 27, 2023, 4:47 PM IST

ETV Bharat / bharat

ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ಭೂಕಂಪದ ಅನುಭವ: ರಿಕ್ಟರ್​ ಮಾಪಕದಲ್ಲಿ 3ರಷ್ಟು ತೀವ್ರತೆ ದಾಖಲು

ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಭೂಸಾವಲ್ ತಾಲೂಕಿನಲ್ಲಿ ಭೂಕಂಪನ ಸಂಭವಿಸಿದ್ದು, ಜನತೆ ಭಯಭೀತರಾಗಿ ಮನೆಗಳಿಂದ ಹೊರ ಓಡಿ ಬಂದಿದ್ದಾರೆ.

magnitude-3-dot-3-earthquake-jolts-bhusawal-in-jalgaon-district
ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ಭೂಕಂಪದ ಅನುಭವ

ಜಲಗಾಂವ್ (ಮಹಾರಾಷ್ಟ್ರ): ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಭೂಕಂಪದ ಅನುಭವವಾಗಿದೆ. ಇಲ್ಲಿನ ಭೂಸಾವಲ್, ಸವಡಾ ಪ್ರದೇಶದಲ್ಲಿ ಇಂದು ಬೆಳಗ್ಗೆ 10.35ರ ಸುಮಾರಿಗೆ ಭೂಮಿ ಕಂಪಿಸಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ರಿಕ್ಟರ್​ ಮಾಪಕದಲ್ಲಿ 3.3ರಷ್ಟು ತೀವ್ರತೆ ದಾಖಲಾಗಿದೆ. ಅದೃಷ್ಟವಶಾತ್, ಯಾವುದೇ ರೀತಿಯ ಹಾನಿಯ ವರದಿಯಾಗಿಲ್ಲ.

ಜಲಗಾಂವ್ ಜಿಲ್ಲೆಯ ಭೂಸಾವಲ್, ಸವಡಾ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಕಂಪದ ಅನುಭವವಾಗುತ್ತಿದ್ದಂತೆ ಮನೆಗಳಲ್ಲಿ ಇದ್ದ ಜನರು ಹೊರ ಬಂದಿದ್ದಾರೆ. ಬೆಳ್ಳಂಬೆಳಗ್ಗೆ ಭೂಮಿ ನಡುಗಿದ ಅನುಭವ ಉಂಟಾದ ಕಾರಣಕ್ಕೆ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈ ಬಗ್ಗೆ ತಕ್ಷಣವೇ ಕೆಲವರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳು ತಕ್ಷಣವೇ ಎಚ್ಚೆತ್ತು ಭೂಕಂಪದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದಾರೆ.

ಇದನ್ನೂ ಓದಿ:ವಿಜಯಪುರದಲ್ಲಿ ಮತ್ತೆ ಭೂಕಂಪನ: ಭಾರಿ ಸದ್ದು.. ಭಯಭೀತರಾದ ಜನತೆ

ಬೆಳಗ್ಗೆ ಏಕಾಏಕಿ ಇಡೀ ಮನೆಯ ಕಟ್ಟಡವೇ ಅಲುಗಾಡಿದ ಅನುಭವ ಆಯಿತು. ಕೆಲ ನಿಮಿಷಗಳ ಕಾಲ ಇದೇ ರೀತಿಯ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಲಗಾಂವ್​ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಅಮನ್ ಮಿತ್ತಲ್, ಜಿಲ್ಲೆಯ ಭೂಸಾವಲ್ ತಾಲೂಕಿನಲ್ಲಿ ರಿಕ್ಟರ್​ ಮಾಪಕದಲ್ಲಿ 3.3ರಷ್ಟು ತೀವ್ರತೆಯ ಭೂಕಂಪನದ ಅನುಭವವಾಗಿದೆ. ಇದುವರೆಗೆ ಸಿಕ್ಕ ಮಾಹಿತಿ ಪ್ರಕಾರ ಯಾವುದೇ ರೀತಿಯ ಹಾನಿ, ನಷ್ಟ ಉಂಟಾಗಿಲ್ಲ. ನಾಗರಿಕರು ಗಾಬರಿ ಮತ್ತು ಭಯ ಪಡುವ ಅಗತ್ಯವಿಲ್ಲ. ಆದರೆ, ಸ್ಥಳೀಯ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಇದೇ ವೇಳೆ ಜಿಲ್ಲೆಯಲ್ಲಿರುವ ಹತ್ನೂರು ಅಣೆಕಟ್ಟು ಯಾವುದೇ ಅಪಾಯವಿಲ್ಲ ಎಂದು ಮೂಲಗಳು ತಿಳಿಸಿವೆ.

ಜನವರಿ 8ರಂದು 3.3ರಷ್ಟು ತೀವ್ರತೆ ದಾಖಲಾಗಿತ್ತು: ಇದೇ ಜನವರಿ 8ರಂದು ಕೂಡ ಜಿಲ್ಲೆಯಲ್ಲಿ ಭೂಕಂಪದ ಅನುಭವ ಉಂಟಾಗಿತ್ತು. ವಸ್ಮತ್ ಕಲ್ಮನೂರಿ ಮತ್ತು ಔಂಧ ನಾಗನಾಥ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಬೆಳಗಿನ ಜಾವ 4.30ರ ಸುಮಾರಿಗೆ ಲಘು ಭೂಕಂಪನದ ಅನುಭವವಾಗಿತ್ತು. ಅಂದು ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 3.6ರಷ್ಟು ದಾಖಲಾಗಿತ್ತು. ಆಗಲೂ ಸಹ ಆ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.

40ರಿಂದ 50 ಗ್ರಾಮಗಳಲ್ಲಿ ಇದೇ ಪರಿಸ್ಥಿತಿ: ಜಲಗಾಂವ್ ಜಿಲ್ಲೆಯಲ್ಲಿ ಹಲವು ಗ್ರಾಮಗಳಲ್ಲಿ ಕಳೆದ ಎಂಟು - ಹತ್ತು ವರ್ಷಗಳಿಂದ ನೆಲದಿಂದ ಕಂಪನದ ಸದ್ದು ಬರುತ್ತಲೇ ಇದೆ. ಔಂಧ ನಾಗನಾಥ, ವಸ್ಮತ್ ಕಲ್ಮನೂರಿ ಮತ್ತು ಅಸೋಲ ತಾಲೂಕಿನ ಸುಮಾರು 40ರಿಂದ 50 ಗ್ರಾಮಗಳಲ್ಲಿ ಕಂಪನದ ಅನುಭವವಾಗುತ್ತಲೇ ಇರುತ್ತಿದೆ. ಇಲ್ಲಿನ ಪಿಂಪಲದಾರಿ, ರಾಜದಾರಿ, ಸೋನವಾಡಿ, ಅಮ್ದಾರಿ, ಕಂಜರ ಪುರ, ವಸಾಯಿ, ಜಮಗವಾನ್, ಜಲಾಲ್ ಧಾಬಾ, ಕಾಕಡ್ ಧಾಬಾ, ಪಾಂಗ್ರಾ ಶಿಂಧೆ, ವಾಪಾಟಿ, ಬೋತಿ ದಾಂಡೇಗಾಂವ್, ಸಿಂದಗಿ, ಬೋಲ್ಡಾ ಸೇರಿದಂತೆ ಇತರ ಗ್ರಾಮಗಳ ಜನರು ಆಗ್ಗಾಗ್ಗೆ ಕಂಪನದ ಸದ್ದು ಕೇಳುತ್ತಲೇ ಭಯಭೀತರಾಗುತ್ತಾರೆ.

ಪ್ರತಿ ಸಲ ಭೂಕಂಪದ ಅನುಭವ ಉಂಟಾಗುತ್ತಿರುವ ಕಾರಣಕ್ಕೆ ಅನೇಕ ಸಂಶೋಧಕರು ಈ ಪ್ರದೇಶಕ್ಕೆ ಭೇಟಿ ನೀಡಿ ಭೂಮಿಯನ್ನು ಪರಿಶೀಲನೆ ನಡೆಸಿ ಅಧ್ಯಯನ ಮಾಡಿದ್ದಾರೆ. ಸೂಕ್ಷ್ಮ ಭೂಗತ ಚಲನವಲನಗಳಿಂದ ಈ ಶಬ್ದಗಳು ಬರುತ್ತಿವೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಆದರೆ, ಭೂಮಿಯಿಂದ ಶಬ್ದ ಮತ್ತು ಅಲುಗಾಡಿದ ಅನುಭವ ನಿರಂತರವಾಗಿ ಆಗುತ್ತಿರುವುದರಿಂದ ಈ ಭಾಗದ ಗ್ರಾಮಸ್ಥರು ಸಾಕಷ್ಟು ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ:ದೆಹಲಿಯಲ್ಲಿ ಕಂಪಿಸಿದ ಭೂಮಿ: ನೇಪಾಳದಲ್ಲಿ ಕಂಪನದ ಕೇಂದ್ರ ಬಿಂದು

ABOUT THE AUTHOR

...view details