ಕರ್ನಾಟಕ

karnataka

ETV Bharat / bharat

ವಿಶ್ವದ ಸಮಯ ನಿರ್ಧರಿಸುವ ಸ್ಥಳ ಉಜ್ಜಯಿನಿ, ಪುರಾತನ ಯಂತ್ರದ ಪುನರುತ್ಥಾನಕ್ಕೆ ಯತ್ನ: ಮಧ್ಯಪ್ರದೇಶ ಸಿಎಂ

Ujjain Prime Meridian: ಉಜ್ಜಯಿನಿಯನ್ನು 'ವಿಶ್ವದ ಸಮಯ ನಿರ್ಧರಿಸುವ ಸ್ಥಳ'ವನ್ನಾಗಿ ಮರುಸ್ಥಾಪಿಸಲು ಪ್ರಯತ್ನ ಮಾಡಲಾಗುವುದು ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

By ETV Bharat Karnataka Team

Published : Dec 24, 2023, 7:58 AM IST

ಮಧ್ಯಪ್ರದೇಶ ಸಿಎಂ
ಮಧ್ಯಪ್ರದೇಶ ಸಿಎಂ

ಭೋಪಾಲ್​(ಮಧ್ಯಪ್ರದೇಶ) :ವಿಶ್ವದ ಸಮಯವನ್ನು ಸದ್ಯ ಇಂಗ್ಲೆಂಡ್​ನ ಗ್ರೀನ್​ವಿಚ್​ ಸ್ಥಳ ನಿರ್ಧರಿಸುತ್ತದೆ. ಆದರೆ, 300 ವರ್ಷಗಳ ಹಿಂದೆ ಭಾರತದ ಮಧ್ಯಪ್ರದೇಶದಲ್ಲಿನ ಉಜ್ಜಯಿನಿಯು 'ವಿಶ್ವದ ಮೆರಿಡಿಯನ್​' ಆಗಿತ್ತು ಎಂಬುದು ಬಹುಜನರಿಗೆ ಗೊತ್ತಿರಲಿಕ್ಕಿಲ್ಲ. ಅದನ್ನು ಮರುಸಾಕಾರ ಮಾಡಲು ಅಲ್ಲಿನ ನೂತನ ಸಿಎಂ ಮೋಹನ್​ ಯಾದವ್​ ಮುಂದಾಗಿದ್ದಾರೆ.

ಉಜ್ಜಯಿನಿಯಲ್ಲಿ ಭೂಮಿಯ ಪ್ರಧಾನ ಮಧ್ಯರೇಖೆಯಿದೆ. ಸಮಯವನ್ನು ನಿರ್ಧರಿಸುವ ಪುರಾತನ ಯಂತ್ರವಿದೆ. ಅದರ ಪುನರುತ್ಥಾನ ಮಾಡಿ, ಜಗತ್ತಿನ ಸಮಯವನ್ನು ಉಜ್ಜಯಿನಿಯೇ ನಿರ್ಧರಿಸುವಂತೆ ಮಾಡಲಾಗುವುದು ಎಂದು ಮೋಹನ್​ ಯಾದವ್​ ಅವರು ಹೇಳಿದ್ದಾರೆ.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವೇಳೆ ಈ ಬಗ್ಗೆ ಮಾತನಾಡಿದ ಅವರು, 300 ವರ್ಷಗಳ ಹಿಂದೆ ಭಾರತದ ಸ್ಟ್ಯಾಂಡರ್ಡ್​ ಟೈಮ್​ ಅನ್ನೇ ವಿಶ್ವ ಪರಿಗಣಿಸುತ್ತಿತ್ತು. ಬಳಿಕ ಅದು ಪ್ಯಾರೀಸ್​ಗೆ ಸ್ಥಳಾಂತರವಾಯಿತು. ಬ್ರಿಟಿಷರ ಆಡಳಿತದಲ್ಲಿ ಲಂಡನ್​ನ ಗ್ರೀನ್​ವಿಚ್​ ಪ್ರದೇಶವನ್ನು ಸಮಯ ನಿರ್ಧರಿಸುವ ಸ್ಥಳವನ್ನಾಗಿ ಗುರುತಿಸಲಾಯಿತು. ಆದರೆ, ಸಮಯ ನಿರ್ಧರಿಸುವ ಮೂಲ ಸ್ಥಳ ಉಜ್ಜಯಿನಿಯಾಗಿದೆ. ಈ ಬಗ್ಗೆ ನಮ್ಮ ಇತಿಹಾಸದಲ್ಲಿ ಉಲ್ಲೇಖವಿದೆ ಎಂದು ಹೇಳಿದರು.

ಸಮಯ ನಿರ್ಧರಿಸುವ ಪುರಾತನ ಯಂತ್ರ:ಉಜ್ಜಯಿನಿಯಲ್ಲಿ ಪ್ರಧಾನ ಮಧ್ಯರೇಖೆಯಿದೆ. ಹಿಂದೂ ಪಂಚಾಂಗಕ್ಕೂ ಇದೇ ಆಧಾರವಾಗಿದೆ. ಗ್ರೀನ್​ವಿಚ್​ ಪ್ರದೇಶವನ್ನು ಸಮಯ ನಿರ್ಧರಿಸುವ ಪ್ರದೇಶವನ್ನಾಗಿ ಮಾಡಿದ ಬಳಿಕ, ಮಧ್ಯರಾತ್ರಿ 12 ಗಂಟೆಗೆ ದಿನದ ಆರಂಭ ಸೂಚಿಸಲಾಗುತ್ತದೆ. ಆದರೆ, ಮಧ್ಯರಾತ್ರಿ 12 ಗಂಟೆಗೆ ಯಾರು ತಾನೆ ದಿನ ಆರಂಭಿಸುತ್ತಾರೆ. ಹೀಗಾಗಿ ಇಂಡಿಯನ್​​ ಸ್ಟ್ಯಾಂಡರ್ಡ್​ ಸಮಯವನ್ನೇ ಜಗತ್ತು ಅಳವಡಿಸಿಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದರು.

ಉಜ್ಜಯಿನಿಯಲ್ಲಿ ಸಮಯ ನಿರ್ಧರಿಸುವ ಪುರಾತನ ಯಂತ್ರವಿದೆ. ಅದರ ಪುನರುತ್ಥಾನ ಮಾಡಿ ಜಗತ್ತಿನ ಸಮಯವನ್ನು ಪುನರ್ರಚನೆ ಮಾಡಲಾಗುವುದು. ಈ ಮೂಲಕ ವಿಶ್ವವೇ ಭಾರತದ ಸಮಯವನ್ನು ಪಾಲಿಸುವಂತೆ ಮಾಡುವ ಎಲ್ಲ ಪ್ರಯತ್ನ ಮಾಡಲಾಗುವುದು. ಪ್ರೈಮ್ ಮೆರಿಡಿಯನ್ ರೇಖೆಯನ್ನು ಇಂಗ್ಲೆಂಡ್‌ನ ಗ್ರೀನ್‌ವಿಚ್‌ನಿಂದ ಉಜ್ಜಯಿನಿಗೆ ವರ್ಗಾಯಿಸುವ ಕೆಲಸ ಮಾಡಲಾಗುವುದು ಎಂದು ಯಾದವ್ ಹೇಳಿದರು.

ಉಜ್ಜಯಿನಿಯೇ ಜಾಗತಿಕ ಪ್ರಧಾನ ಮೆರಿಡಿಯನ್:ಉಜ್ಜಯಿನಿಯೇ ಜಾಗತಿಕ ಪ್ರಧಾನ ಮೆರಿಡಿಯನ್ ಆಗಿದೆ. ಪ್ರಾಚೀನ ಹಿಂದೂ ಖಗೋಳಶಾಸ್ತ್ರದ ನಂಬಿಕೆಯ ಪ್ರಕಾರ, ಉಜ್ಜಯಿನಿಯನ್ನು ಭಾರತದ ಕೇಂದ್ರ ಮೆರಿಡಿಯನ್ ಎಂದು ಪರಿಗಣಿಸಲಾಗಿತ್ತು. ನಗರವು ದೇಶದ ಸಮಯ ಮತ್ತು ವ್ಯತ್ಯಾಸಗಳನ್ನು ನಿರ್ಧರಿಸುತ್ತಿತ್ತು. ಇದು ಹಿಂದೂ ಕ್ಯಾಲೆಂಡರ್‌ನ ಆಧಾರವಾಗಿದೆ ಎಂದರು.

ರಾಜ್ಯದ ಧಾರ್ಮಿಕ ಸ್ಥಳಗಳನ್ನು ಪುನರುಜ್ಜೀವನಗೊಳಿಸುವ ಕಾರ್ಯವನ್ನು ನಮ್ಮ ಸರ್ಕಾರ ರೂಪಿಸಲಿದೆ. ಉದ್ದೇಶಿತ ಯೋಜನೆಯು ಉಜ್ಜಯಿನಿಯ ಮಹಾಕಾಲ್ ಲೋಕದಿಂದ ಓರ್ಚಾ, ಸಲ್ಕನ್‌ಪುರ ಮತ್ತು ಮೈಹಾರ್‌ವರೆಗಿನ ಸ್ಥಳಗಳನ್ನು ಒಳಗೊಂಡಿದೆ ಎಂದು ಸಿಎಂ ಮೋಹನ್​ ಯಾದವ್ ತಿಳಿಸಿದರು.

ಇದನ್ನೂ ಓದಿ:6 ವರ್ಷಗಳ ಕಾಲ ಬರಿಗಾಲಲ್ಲೇ ಓಡಾಡಿದ ಮಧ್ಯಪ್ರದೇಶದ ಬಿಜೆಪಿ ನಾಯಕ: ಕಾರಣ ಏನು ಗೊತ್ತಾ?

ABOUT THE AUTHOR

...view details