ಕರ್ನಾಟಕ

karnataka

By

Published : Apr 30, 2023, 4:55 PM IST

ETV Bharat / bharat

ಲೂಧಿಯಾನ ಅನಿಲ ಸೋರಿಕೆ: ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ಎಲ್ಲ ಐವರು ಸಾವು!

ಹಾಲಿನ ಘಟಕದಲ್ಲಿ ಉಂಟಾದ ಅನಿಲ ಸೋರಿಕೆಯಿಂದಾಗಿ ಒಂದೇ ಕುಟುಂಬದ ಎಲ್ಲ ಐವರೂ ಮೃತಪಟ್ಟಿದ್ದಾರೆ. ಇದು ಲೂಧಿಯಾನದಲ್ಲಿಂದು ನಡೆದ ದುರಂತದ ಲೇಟೆಸ್ಟ್‌ ಅಪ್ಡೇಟ್‌.

ಪಂಜಾಬ್​ನ ಲೂಧಿಯಾನ
ಪಂಜಾಬ್​ನ ಲೂಧಿಯಾನ

ಲೂಧಿಯಾನ (ಪಂಜಾಬ್​): ಲೂಧಿಯಾನ ಹಾಲಿನ ಸ್ಥಾವರದಲ್ಲಿ ಸಂಭವಿಸಿದ ಅನಿಲ ಸೋರಿಕೆ ದುರಂತದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟಿರುವ ಆಘಾತಕಾರಿ ಮಾಹಿತಿ ಇದೀಗ ಹೊರಬಿದ್ದಿದೆ. ದುರಂತದಲ್ಲಿ 10 ಮತ್ತು 13 ವರ್ಷದ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೆಡಿಕಲ್ ಕ್ಲಿನಿಕ್ ನಡೆಸುತ್ತಿದ್ದ ವ್ಯಕ್ತಿ, ಅವರ ಪತ್ನಿ, ಮಗಳು ಮತ್ತು ಇಬ್ಬರು ಪುತ್ರರು ಸಾವನ್ನಪ್ಪಿದ್ದಾರೆ. ಮೃತಪಟ್ಟ ಹೆಣ್ಣು ಮಗುವಿಗೆ 9 ವರ್ಷ ಎಂದು ತಿಳಿದುಬಂದಿದೆ. ಎಲ್ಲರೂ ನಿದ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಅನಿಲ ಸೋರಿಕೆ ದುರಂತದಲ್ಲಿ ಕನಿಷ್ಠ 11 ಜನರು ಸಾವಿಗೀಡಾಗಿದ್ದಾರೆ. ಮೃತರಲ್ಲಿ ಐವರು ಮಹಿಳೆಯರು ಮತ್ತು ಆರು ಪುರುಷರು ಸೇರಿದ್ದಾರೆ.

"ನಾವು ಮ್ಯಾನ್‌ಹೋಲ್‌ಗಳಿಂದ ಮಾದರಿಗಳನ್ನು ಸಂಗ್ರಹಿಸಲಿದ್ದೇವೆ. ಮ್ಯಾನ್‌ಹೋಲ್‌ಗಳಲ್ಲಿ ಕೆಲವು ರಾಸಾಯನಿಕಗಳು ಮೀಥೇನ್‌ನೊಂದಿಗೆ ಪ್ರತಿಕ್ರಿಯಿಸಿರುವ ಸಾಧ್ಯತೆಯಿದೆ" ಎಂದು ಲೂಧಿಯಾನ ಡೆಪ್ಯುಟಿ ಕಮಿಷನರ್ ಸುರಭಿ ಮಲಿಕ್ ಹೇಳಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿದವರಲ್ಲಿ ಉಸಿರಾಟದ ತೊಂದರೆಯ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ನ್ಯೂರೋಟಾಕ್ಸಿನ್‌ನಿಂದ ಸಾವಾಗಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು. ಈಗಾಗಲೇ ಸ್ಥಳಕ್ಕೆ ತಲುಪಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡವು ಅನಿಲದ ಮೂಲ ಮತ್ತು ಪ್ರಕಾರವನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಸುತ್ತಿದೆ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಇದನ್ನೂ ಓದಿ:ಪಂಜಾಬ್​ನಲ್ಲಿ 105 ಲಕ್ಷ ಮೆಟ್ರಿಕ್ ಟನ್ ಗೋಧಿ ಉತ್ಪಾದನೆ: ಕಳೆದ ವರ್ಷಕ್ಕಿಂತ ಹೆಚ್ಚು!

ಇದು ದಟ್ಟ ಜನನಿಬಿಡ ಪ್ರದೇಶವಾಗಿದ್ದು ಸ್ಥಳದಿಂದ ಜನರನ್ನು ಸ್ಥಳಾಂತರಿಸುವುದು ತಕ್ಷಣದ ಆದ್ಯತೆಯಾಗಿದೆ ಎಂದು ಅಧಿಕಾರಿ ಹೇಳಿದರು. NDRF ತಂಡವು ವಿವಿಧ ರೀತಿಯ ರಾಸಾಯನಿಕಗಳ ಮಾದರಿಗಳನ್ನು ಹೊರತೆಗೆಯುವಲ್ಲಿ ತೊಡಗಿದೆ ಎಂದು ಲೂಧಿಯಾನ ಡಿಸಿ ಹೇಳಿದ್ದಾರೆ. ರಾಸಾಯನಿಕ ಕ್ರಿಯೆಯ ಸ್ವರೂಪವನ್ನು ಖಚಿತಪಡಿಸಿದ ನಂತರವೇ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದು ಎಂದು ಹೇಳಿದರು. ಸ್ಥಳದಲ್ಲಿ ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್ ನಿಯೋಜಿಸಲಾಗಿದ್ದು, ಪೊಲೀಸರು ಪ್ರದೇಶವನ್ನು ಸೀಲ್ ಮಾಡಿದ್ದಾರೆ. ಸೋರಿಕೆಯಾದ ಅನಿಲವು ಹೆಚ್ಚಿನ ಪ್ರಮಾಣದಲ್ಲಿ ದುರ್ಬಲಗೊಂಡಿದೆ ಎಂದು ಡಿಸಿ ತಿಳಿಸಿದರು.

ಇದನ್ನೂ ಓದಿ:ಹೈದರಾಬಾದ್‌ನಲ್ಲಿ ಸಿಎಂ ಕೆಸಿಆರ್​ ಕನಸಿನ ಭವ್ಯಸೌಧ ಸೆಕ್ರೆಟರಿಯೇಟ್‌ ಲೋಕಾರ್ಪಣೆ

ಸಿಸಿಟಿವಿ ಕ್ಯಾಮರಾಗಳ ಫೂಟೇಜ್​ ಪರಿಶೀಲಿಸಲಾಗುತ್ತಿದೆ. ಜಿಲ್ಲಾಡಳಿತ, ಪೊಲೀಸ್, ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಪಂಜಾಬ್ ಮಾಲಿನ್ಯ ನಿಯಂತ್ರಣ ಮಂಡಳಿಯ ವಿವಿಧ ತಂಡಗಳು ಸ್ಥಳದಲ್ಲಿ ಬೀಡುಬಿಟ್ಟಿವೆ. ಘಟನೆಯ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಟ್ವೀಟ್​ ಮಾಡಿದ್ದು, 'ಲೂಧಿಯಾನದ ಗಿಯಾಸ್ಪುರ ಪ್ರದೇಶದಲ್ಲಿನ ಅನಿಲ ಸೋರಿಕೆಯ ಘಟನೆಯಿಂದ ಮನಸ್ಸಿಗೆ ತುಂಬಾ ನೋವುಂಟಾಗಿದೆ. ಪೊಲೀಸ್, ಜಿಲ್ಲಾಡಳಿತ ಮತ್ತು ಎನ್‌ಡಿಆರ್‌ಎಫ್ ತಂಡಗಳು ಸ್ಥಳದಲ್ಲಿವೆ. ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುತ್ತಿದೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ :ಲೂಧಿಯಾನದಲ್ಲಿ ಅನಿಲ ಸೋರಿಕೆ: ಇಬ್ಬರು ಮಕ್ಕಳು ಸೇರಿದಂತೆ 11 ಮಂದಿ ಸಾವು

ABOUT THE AUTHOR

...view details