ರಾಯಗಢ್ (ಛತ್ತೀಸ್ಗಢ್): ಯಾವುದೇ ವಿವಾದ ಉಂಟಾದರೂ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ನೋಟಿಸ್ ಜಾರಿ ಮಾಡುವುದು ಸಾಮಾನ್ಯ. ಆದರೆ, ಛತ್ತೀಸ್ಗಢ್ ರಾಜ್ಯದ ರಾಯಗಢ್ನಲ್ಲಿ ಭೂ ಮತ್ತು ಕಲ್ಯಾಣಿ ಒತ್ತುವರಿ ವಿವಾದಕ್ಕೆ ಸಂಬಂಧಪಟ್ಟ ವಿಚಾರಣೆಗೆ ಶಿವ ದೇವಾಲಯಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. ಹೀಗಾಗಿ ಖುದ್ದು 'ಶಿವ'ನೇ ತಹಶೀಲ್ದಾರ್ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾನೆ!.
ಇದು ವಿಚಿತ್ರವಾದರೂ ನಿಜ. ದೇವಾಲಯದ ಹೆಸರಲ್ಲಿ ನೋಟಿಸ್ ಕೊಟ್ಟಿದ್ದರಿಂದ ಶಿವಲಿಂಗವನ್ನೇ ವಿಚಾರಣಾ ಸ್ಥಳಕ್ಕೆ ತರಲಾಗಿದೆ. ಸೈಕಲ್ ರಿಕ್ಷಾದಲ್ಲಿ ಶಿವಲಿಂಗವನ್ನು ಶುಕ್ರವಾರ ಕೂಡಿಸಿಕೊಂಡು ತರಲಾಗಿದೆ. ಆದರೆ, ತಹಶೀಲ್ದಾರ್ ಅವರು ಕಾರ್ಯದೊತ್ತಡದಲ್ಲಿ ಇರುವುದರಿಂದ ಮುಂದಿನ ವಿಚಾರಣೆಯನ್ನು ಏ.13ಕ್ಕೆ ನಿಗದಿ ಮಾಡಲಾಗಿದೆ.
ಏನಿದು ಪ್ರಕರಣ?: ರಾಯಗಢ್ನ 25ನೇ ವಾರ್ಡ್ನಲ್ಲಿ ಸಾರ್ವಜನಿಕ ಶಿವ ದೇವಾಲಯ ಇದೆ. ಇಲ್ಲಿನ ನಿವಾಸಿ ಸುಧಾ ರಾಜ್ವಾಡೇ ಎಂಬುವರು ಸರ್ಕಾರಿ ಜಮೀನನ್ನು ಕಬಳಿಕೆ ಮಾಡಲಾಗಿದೆ ಎಂದು ಆರೋಪಿಸಿ ಶಿವನ ದೇವಾಲಯ ಸೇರಿ 16 ಜನರ ವಿರುದ್ಧ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.