ತಿರುವನಂತಪುರಂ:ಮೂರು ಹೊಸ ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಡಿಸಿದ ನಿರ್ಣಯವನ್ನು ಕೇರಳ ವಿಧಾನಸಭೆ ಗುರುವಾರ ಅಂಗೀಕರಿಸಿದ್ದು, ಇಲ್ಲಿನ ಬಿಜೆಪಿ ಶಾಸಕ ಓ. ರಾಜಗೋಪಾಲ್ ಕೂಡಾ ಇದನ್ನು ಬೆಂಬಲಿಸಿದ್ದಾರೆ.
ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಧ್ವನಿ ಮತದಾನದ ಮೂಲಕ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ಹೇಳಿದರು. ಇದಕ್ಕೆ ರಾಜಗೋಪಾಲ್ ಕೂಡ ಬೆಂಬಲವಾಗಿ ನಿಂತ ನಂತರ ವಿವಾದ ಭುಗಿಲೆದ್ದಿತು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಶಾಸಕ, ನಾನು ನಿರ್ಣಯವನ್ನು ಬೆಂಬಲಿಸಿದ್ದೇನೆ. ಆದರೆ ಅದರಲ್ಲಿ ಕೆಲವು ಭಾಗಗಳನ್ನು ವಿರೋಧಿಸಿದ್ದೇನೆ. ನಾನು ವಿಧಾನಸಭೆಯಲ್ಲಿ ಸಾಮಾನ್ಯ ಒಮ್ಮತಕ್ಕೆ ಬದ್ಧನಾಗಿರುತ್ತೇನೆ ಮತ್ತು ಅದು ಪ್ರಜಾಪ್ರಭುತ್ವದ ಜೀವಾಳ ಎಂದಿದ್ದಾರೆ.