ಕರ್ನಾಟಕ

karnataka

By

Published : Jun 24, 2023, 1:53 PM IST

ETV Bharat / bharat

ತಿರುಪತಿಯಲ್ಲಿ ಬಾಲಕನ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ.. ನಿಟ್ಟುಸಿರು ಬಿಟ್ಟ ಭಕ್ತರು!

ಎರಡು ದಿನಗಳ ಹಿಂದೆ ತಿರುಮಲದ ಕಾಲ್ನಡಿಗೆ ಮಾರ್ಗದಲ್ಲಿ ಬಾಲಕನ ಮೇಲೆ ದಾಳಿ ನಡೆಸಿದ್ದ ಚಿರತೆಯನ್ನು ಅರಣ್ಯಧಿಕಾರಿಗಳು ಸೆರ ಹಿಡಿದಿದ್ದಾರೆ.

ತಿರುಪತಿಯಲ್ಲಿ ಚಿರತೆ ಸೆರೆ
ತಿರುಪತಿಯಲ್ಲಿ ಚಿರತೆ ಸೆರೆ

ತಿರುಮಲ (ಆಂಧ್ರಪ್ರದೇಶ):ಎರಡು ದಿನಗಳ ಹಿಂದಷ್ಟೆ ಬಾಲಕನ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ತಿರುಮಲದಲ್ಲಿ ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದಾರೆ. ಬಾಲಕನ ಮೇಲೆ ದಾಳಿ ನಡೆಸಿದ ನಂತರ ಚಿರತೆ ಸೆರೆಗಾಗಿ ಅಲಿಪಿರಿ ಮಾರ್ಗದ ವಿವಿಧ ಸ್ಥಳಗಳಲ್ಲಿ 150 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಚಿರತೆಯ ಚಲನವಲನ ಗಮನಿಸಿದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಸಂಜೆ ಎರಡು ಪ್ರದೇಶಗಳಲ್ಲಿ ಬೋನ್​ಗಳನ್ನು ಅಳವಡಿಸಿದ್ದರು.

ನಿನ್ನೆ ರಾತ್ರಿ 10:45ರ ಸುಮಾರಿಗೆ ಚಿರತೆ ಬೋನಿಗೆ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ (ಇಒ) ಧರ್ಮರೆಡ್ಡಿ ಬೋನನ್ನು ಪರಿಶೀಲಿಸಿ, ಬಳಿಕ ಮಾತನಾಡಿದ ಅವರು, ಸೆರೆಸಿಕ್ಕಿರುವ ಚಿರತೆಯ, ತಾಯಿಯೂ ಕೂಡ ಇದೇ ಪ್ರದೇಶದಲ್ಲಿ ಓಡಾಡುತ್ತಿದೆ. ಕ್ಯಾಮೆರಾಗಳಲ್ಲಿ ತಾಯಿ ಚಿರತೆಯ ಚಲನವಲನ ಪತ್ತೆಯಾಗಿದೆ. ಕೂಡಲೇ ಅದನ್ನೂ ಸೆರೆ ಹಿಡಿದು ಕಾಡಿಗೆ ಬಿಡಲಾಗುವುದು ಎಂದು ಇಒ ಹೇಳಿದ್ದಾರೆ.

ವಿಭಾಗೀಯ ಅರಣ್ಯಾಧಿಕಾರಿ ಶ್ರೀನಿವಾಸುಲು ಮಾತನಾಡಿ, ಚಿರತೆಯನ್ನ ಸೆರೆ ಹಿಡಿಯಲಾಗಿದೆ. ಇಒ ಅವರ ಆದೇಶದಂತೆ ಚಿರತೆಯ ಚಲನವಲನದ ಮೇಲೆ ನಿಗಾ ಇರಿಸಿ, ಸೆರೆ ಹಿಡಿಯಲು 2 ಬೋನ್​ನ ವ್ಯವಸ್ಥೆ ಮಾಡಲಾಗಿತ್ತು. ಚಿರತೆ ಕಂಡಿದ್ದ ಸ್ಥಳಗಳಲ್ಲಿ ಒಟ್ಟು 150 ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ರಾತ್ರಿ ವೇಳೆ ಚಿರತೆ ಬೋನಿಗೆ ಬಿದ್ದಿದೆ. ಇದರ ಹೊರತಾಗಿಯೂ ಈ ಪ್ರದೇಶದಲ್ಲಿ ಎಷ್ಟು ಚಿರತೆಗಳಿವೆ ಎಂಬುದರ ಬಗ್ಗೆ ತಿಳಿಯಲು ಕೂಡ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅಲಿಪಿರಿ ಮೆಟ್ಟಿಲಲ್ಲಿ ಬದಲಾವಣೆ:ಬಾಲಕನ ಮೇಲೆ ಚಿರತೆ ದಾಳಿ ನಡೆಸಿದ ನಂತರ ಎಚ್ಚೆತ್ತ ಅಧಿಕಾರಿಗಳು, ಅಲಿಪಿರಿ ಮೆಟ್ಟಿಲು ಹತ್ತಲು ಕೆಲ ಬದಲಾವಣೆ ಮಾಡಿದ್ದಾರೆ. ಸಂಜೆ 7ರ ನಂತರ ಗಾಳಿ ಗೋಪುರದಿಂದ ಸುಮಾರು 200 ಭಕ್ತರನ್ನು ಗುಂಪು ಗುಂಪಾಗಿ ಮೆಟ್ಟಿಲುಗಳ ಹತ್ತುವ ವ್ಯವಸ್ಥೆ ಮಾಡಲಾಗಿದೆ. 200 ಜನರ ಗುಂಪಿನ ಜೊತೆ ಒಬ್ಬ ಸೆಕ್ಯೂರಿಟಿ ಗಾರ್ಡ್ ಕೂಡ ಇರುತ್ತಾನೆ. ಅಲ್ಲದೇ, ಚಿಕ್ಕ ಮಕ್ಕಳನ್ನು ಗುಂಪಿನ ಮಧ್ಯದಲ್ಲಿ ಎಚ್ಚರಿಕೆಯಿಂದ ಹೋಗಲು ವ್ಯವಸ್ಥೆ ಮಾಡಲಾಗಿದೆ. ರಾತ್ರಿ 10ರವರೆಗೆ ಮಾತ್ರ ಅಲಿಪಿರಿ ಮಾರ್ಗದಲ್ಲಿ ಮೆಟ್ಟಿಲುಗಳನ್ನು ಹತ್ತಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಇಂತಹ ಘಟನೆ ಮರುಕಳಿಸದಿರಲು ಅಲಿಪಿರಿ ಮತ್ತು ಶ್ರೀವಾರಿ ಕಾಲ್ನಡಿಗೆ ಮಾರ್ಗದ ಎರಡೂ ಬದಿಯಲ್ಲಿ ಬೇಲಿ ನಿರ್ಮಿಸಲು ಟಿಟಿಡಿ ನಿರ್ಧರಿಸಿದೆ.

ಸಂಜೆ 6 ಗಂಟೆಯ ನಂತರ ಘಾಟ್ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರ ಸುರಕ್ಷತೆಗೆ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಘಟನೆ ಹಿನ್ನೆಲೆ:ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಕರ್ನೂಲ್ ಜಿಲ್ಲೆಯ ಆದೋನಿ ನಿವಾಸಿ ದಂಪತಿ ತಮ್ಮ ನಾಲ್ಕು ವರ್ಷದ ಮಗ ಕೌಶಿಕ್ ಜೊತೆಗೆ ಅಲಿಪಿರಿಯಿಂದ ತಿರುಮಲಕ್ಕೆ ಕಾಲ್ನಡಿಗೆ ಮಾರ್ಗವಾಗಿ ತೆರಳುತ್ತಿದ್ದರು. ನಂತರ ಒಂದನೇ ಘಾಟ್ ರಸ್ತೆಯ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಕುಳಿತು ಊಟ ಮಾಡುತ್ತಿದ್ದರು. ಅವರ ಪಕ್ಕದಲ್ಲಿ ಮಗ ಕೌಶಿಕ್​ ಆಟವಾಡುತ್ತಿದ್ದ.

ಈ ವೇಳೆ, ಏಕಾಏಕಿ ಮಗುವಿನ ಮೇಲೆ ಚಿರತೆಯೊಂದು ದಾಳಿ ನಡೆಸಿತ್ತು. ಮಗುವಿನ ಕತ್ತಿನ ಭಾಗಕ್ಕೆ ಬಾಯಿ ಹಾಕಿ ಅರಣ್ಯದೊಳಗೆ ನುಗ್ಗಿತ್ತು. ಈ ವೇಳೆ, ಪೋಷಕರು ರಕ್ಷಣೆಗಾಗಿ ಕೂಗಾಡಿ ಚಿರತೆ ಹಿಂದೆ ಓಡಿದ್ದರು. ಇವರೊಂದಿಗೆ ಸಹಾಯಕ್ಕೆ ಸ್ಥಳೀಯ ಅಂಗಡಿಯಾತ ಹಾಗೂ ಅಲ್ಲಿದ್ದ ಭದ್ರತಾ ಸಿಬ್ಬಂದಿ ಓಡಿದ್ದರು. ಈ ವೇಳೆ ಚಿರತೆ ಅಲ್ಲೆ ಮಗುವನ್ನು ಹಿಡಿದು ನಿಂತಿದ್ದು ಕಂಡು ಅದರ ಕಣ್ಣಿಗೆ ಟಾರ್ಚ್​ ಲೈಟ್​ ಹಾಕಿ,ಕಲ್ಲಿಂದ ಹೊಡೆದಿದ್ದರು. ಬಳಿಕ ಮಗುವನ್ನು ಅಲ್ಲೇ ಬಿಟ್ಟು ಚಿರತೆ ಓಡಿ ಹೋಗಿತ್ತು.

ಚಿರತೆ ದಾಳಿಯಿಂದ ಗಾಯಗೊಂಡಿದ್ದ ಬಾಲಕನಿಗೆ ಆಂಬ್ಯುಲೆನ್ಸ್​ ಮೂಲಕ ತಿರುಪತಿಯ ಶ್ರೀ ಪದ್ಮಾವತಿ ಮಕ್ಕಳ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು.

ಇದನ್ನು ಓದಿ:ತಿರುಪತಿಯಲ್ಲಿ ಭಯಾನಕ ಘಟನೆ.. ಪೋಷಕರ ಎದುರೇ ಆಟವಾಡುತ್ತಿದ್ದ ಮಗುವನ್ನು ಎತ್ತೊಯ್ದ ಚಿರತೆ!!

ABOUT THE AUTHOR

...view details