ರಾಜಗಢ (ಮಧ್ಯಪ್ರದೇಶ):ಎರಡು ಕುಟುಂಬಗಳ ಮಧ್ಯೆ ಇದ್ದ ಜಮೀನು ವಿವಾದದ ಗಲಾಟೆಯಲ್ಲಿ ತಹಸೀಲ್ದಾರ್ ಕಚೇರಿ, ಎಸ್ಡಿಎಂ, ಪೊಲೀಸ್ ಠಾಣೆಗೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ, ಮನೆಯೊಂದಕ್ಕೆ ಬೆಂಕಿ ಹಚ್ಚಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವುಂಟು ಮಾಡಿದ ಘಟನೆ ಮಧ್ಯಪ್ರದೇಶದ ರಾಜಗಢದಲ್ಲಿ ನಡೆದಿದೆ.
ನಿನ್ನೆ ರಾತ್ರಿ ನಡೆದ ಕಲ್ಲು ತೂರಾಟದಲ್ಲಿ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೇ ಉದ್ರಿಕ್ತ ಗುಂಪೊಂದು ಮನೆಯೊಂದಕ್ಕೂ ಬೆಂಕಿ ಹಚ್ಚಿ, ಇಡೀ ಮನೆಯನ್ನು ಧ್ವಂಸ ಮಾಡಿದೆ. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಆ ಪ್ರದೇಶದಲ್ಲಿ ನಿಷೇಧ ಹೇರಿದ್ದಾರೆ.
ಜಮೀನಿಗಾಗಿ ನಡೀತು ಮಾರಾಮಾರಿ:ರಾಜಗಢದ ಎರಡು ಕುಟುಂಬಗಳ ಮಧ್ಯೆ ಬಹಳ ದಿನಗಳಿಂದ ಜಮೀನು ವಿವಾದವಿದೆ. ಈ ಬಗ್ಗೆ ಹಲವು ಬಾರಿ ತಹಸೀಲ್ದಾರ್, ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೂ ಯಾವುದೇ ಪರಿಹಾರ ಕಂಡಿರಲಿಲ್ಲ. ಕುಟುಂಬಸ್ಥರ ಕೋಪಾಗ್ನಿ ನಿನ್ನೆ ರಾತ್ರಿ ಸ್ಫೋಟಗೊಂಡಿದೆ. ಎರಡು ಕುಟುಂಬಗಳ ಮಧ್ಯೆ ಮಾರಾಮಾರಿಯೇ ನಡೆದಿದೆ.
ಈ ವೇಳೆ ಬಿಜೆಪಿ ಮುಖಂಡ ಮೋಹನ್ ವರ್ಮಾ ಹಾಗೂ ಅವರ ಸಹೋದರ ಹುಕುಂ ವರ್ಮಾ ಕಲ್ಲು ತೂರಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಇವರನ್ನು ಜನರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಅವರನ್ನು ವೈದ್ಯರು ಭೋಪಾಲ್ಗೆ ರವಾನಿಸಿದ್ದಾರೆ.