ಕರ್ನಾಟಕ

karnataka

By

Published : Jan 6, 2023, 4:19 PM IST

ETV Bharat / bharat

ಸಂಬಳ ಕೊಟ್ಟಿಲ್ಲವೆಂದು ಮೇಸ್ತ್ರಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಅಂದರ್​​

ಸಂಬಳದ ಬಾಕಿ ಹಣ ತಕ್ಷಣ ಕೊಡಲಿಲ್ಲ ಎಂಬ ಕಾರಣಕ್ಕೆ ಗಾರೆ ಮೇಸ್ತ್ರಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಯಲಹಂಕ ಉಪನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆ ಆರೋಪಿಯನ್ನು ಡಾರ್ಜಿಲಿಂಗ್​ನಲ್ಲಿ ಬಂಧಿಸಲಾಗಿದೆ.

ಸಂಬಳ ಕೊಟ್ಟಿಲ್ಲವೆಂದು ಮೇಸ್ತ್ರಿ ಕೊಲೆಗೈದು ಡಾರ್ಜಿಲಿಂಗ್​​ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
killed mason and hiding in Darjeeling for not paying salary was arrested

ಬೆಂಗಳೂರು: ಸಂಬಳ‌ ಕೊಟ್ಟಿಲ್ಲ‌ವೆಂದು ಅಸಮಾಧಾ‌ನಗೊಂಡು ಕುಡಿದ ನಶೆಯಲ್ಲಿ ಗಾರೆ‌ ಮೇಸ್ತ್ರಿಯನ್ನು ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೇಸ್ತ್ರಿಯನ್ನು ಕಬ್ಬಿಣದ ರಾಡ್​ನಿಂದ ಹೊಡೆದು ಹತ್ಯೆ ಮಾಡಿ ನೇಪಾಳದ ಗಡಿಪ್ರದೇಶ ಡಾರ್ಜಿಲಿಂಗ್​ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಯಲಹಂಕ ಉಪ‌ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಟ್ಟಡ ಕಾಂಟ್ರಾಕ್ಟರ್ ಆಗಿದ್ದ ಐನಲ್ ಹಕ್‌ ಎಂಬುವರೇ ಹತ್ಯೆಗೀಡಾದ ದುರ್ದೈವಿ. ಹತ್ಯೆ ಆರೋಪಿ ಪಶ್ಚಿಮ ಬಂಗಾಳ ಮೂಲದ ಪ್ರಿಯೋನಾಥ್ ಎಂಬಾತನನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

ಕಳೆದ ಐದಾರು ವರ್ಷಗಳಿಂದ ಐನಲ್ ಹಕ್ ನಗರದ ಮಹದೇವಪುರದಲ್ಲಿ ವಾಸವಾಗಿದ್ದ. ವಿದ್ಯಾವಂತನಾಗಿದ್ದ ಈತ ಗಾರೆ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ. ಯಲಹಂಕ ನ್ಯೂ ಟೌನ್ ಠಾಣಾ ವ್ಯಾಪ್ತಿಯ ಪ್ರಕೃತಿ ಲೇಔಟ್​​ನಲ್ಲಿ ಭೂಮಿ ವೆಂಚರ್ಸ್ ಡೆವಲಪರ್ಸ್ ವತಿಯಿಂದ ಕಟ್ಟಿಸಲಾಗುತ್ತಿದ್ದ ಅಪಾರ್ಟಮೆಂಟ್​​ಗೆ ಪ್ಲಾಸ್ಟರಿಂಗ್ ಮಾಡುವ ಗುತ್ತಿಗೆ ಒಪ್ಪಿಕೊಂಡಿದ್ದ.‌ ಇದಕ್ಕಾಗಿ ಹುಡುಗರನ್ನು ಕರೆಯಿಸಿ ಕೆಲಸ ಮಾಡಿಸುತ್ತಿದ್ದ.

ಕುಡಿದ ಮತ್ತಿನಲ್ಲಿ ಗಲಾಟೆ, ಥಳಿತ:ಇದೇ ಗುಂಪಿನಲ್ಲಿ ಆರೋಪಿ ಪ್ರಿಯೋನಾಥ್ ಓರ್ವನಾಗಿದ್ದ. ವಾರಕ್ಕೊಮ್ಮೆ ಐನಲ್ ಕಾರ್ಮಿಕರ ವೇತನ ನೀಡುತ್ತಿದ್ದ. ಎಂದಿನಂತೆ ಕಳೆದ‌ ಡಿಸೆಂಬರ್ 18ರಂದು ಕಾರ್ಮಿಕರಿರುವ ಶೆಡ್​ಗೆ ಐನಲ್ ಹಕ್ ಬಂದಿದ್ದ. ಪ್ರಿಯೋನಾಥ್​​ಗೆ ಸುಮಾರು 32 ಸಾವಿರ ರೂಪಾಯಿ ಕೊಡಬೇಕಾಗಿದ್ದು, ಈ ಹಣವನ್ನು ನಾಳೆ ಕೊಡುವುದಾಗಿ ಹೇಳಿದ್ದ. ಈ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿದ್ದ ಆರೋಪಿ ಮೇಸ್ತ್ರಿಯೊಂದಿಗೆ ಮಾತಿನ ಚಕಮಕಿ ನಡೆಸಿದ್ದಾನೆ. ನೋಡು ನೋಡುತ್ತಿದ್ದಂತೆ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ, ಕಬ್ಬಿಣದ ರಾಡ್​​ನಿಂದ ಪ್ರಿಯೋನಾಥ್ ಐನಲ್​ಗೆ ಬಲವಾಗಿ ಹೊಡೆದಿದ್ದು, ಐನಲ್ ಹಕ್ ಸ್ಥಳದಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ.

ಘಟನೆಯಿಂದ ಆತಂಕಕ್ಕೊಳಗಾದ ಆರೋಪಿ ಮೊಬೈಲ್ ಸ್ವಿಚ್ಡ್​ ಆಫ್ ಮಾಡಿ ಸಿಮ್ ಬಿಸಾಕಿ ಅದೇ ದಿನ ರಾತ್ರಿ ರೈಲಿನ ಮುಖಾಂತರ ಪಶ್ಚಿಮ ಬಂಗಾಳದ ತನ್ನೂರಿಗೆ ಎಸ್ಕೇಪ್ ಆಗಿದ್ದ. ಇತ್ತ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಇನ್ ಸ್ಪೆಕ್ಟರ್ ಗೋವಿಂದರಾಜು ನೇತೃತ್ವದ ತಂಡ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿತ್ತು. ಕೆಲ ದಿನಗಳ ಕಾಲ ಪಶ್ಚಿಮ ಬಂಗಾಳದಲ್ಲಿರುವ ಮನೆಯಲ್ಲಿ ಅವಿತುಕೊಂಡಿದ್ದ ಪ್ರಿಯೋನಾಥ್, ಪೊಲೀಸರು ಇಲ್ಲಿಗೂ ಬರಬಹುದು ಎಂದು ಭಾವಿಸಿ ಡಾರ್ಜಿಲಿಂಗ್​ಗೆ ಹೋಗಿ ತಲೆಮರೆಸಿಕೊಂಡಿದ್ದ. ಮತ್ತೊಂದೆಡೆ ಆರೋಪಿಗಾಗಿ ಶೋಧ ನಡೆಸುತ್ತಿದ್ದ ಪೊಲೀಸರಿಗೆ ಆರೋಪಿಯು ಎಟಿಎಂನಲ್ಲಿ ಹಣ ಬಿಡಿಸಿಕೊಂಡಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಇದನ್ನಾಧರಿಸಿ ಡಾರ್ಜಿಲಿಂಗ್​​ನಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಾಡಿಗೆದಾರನಿಂದಲೇ ಮನೆ ಮಾಲೀಕಳ ಕೊಲೆ: ಮನೆ ಖಾಲಿ ಮಾಡುವ ವಿಚಾರದಲ್ಲಿ ಕಲಹ ಉಂಟಾಗಿ ಬಾಡಿಗೆದಾರನೊಬ್ಬ ಮನೆ ಮಾಲೀಕಳನ್ನೇ ಕೊಲೆ ಮಾಡಿದ ಘಟನೆ ಮುಂಬೈನ ಉರಾನ್​ನಲ್ಲಿ ನಡೆದಿದೆ. ಮನೆಯೊಡತಿ ವೃದ್ಧೆಯ ಶವ ಪತ್ತೆಯಾದ ಎರಡು ದಿನಗಳ ನಂತರ, ಪೊಲೀಸರು ಗುರುವಾರ 30 ವರ್ಷದ ಆರೋಪಿ ಬಾಡಿಗೆದಾರನನ್ನು ಅಹ್ಮದ್‌ ನಗರದಲ್ಲಿ ಬಂಧಿಸಿದ್ದಾರೆ. ಅಮೋಲ್ ಸರ್ಜೆರಾವ್ ಶೆಲಾರ್ ಈತನೇ ಕೊಲೆ ಆರೋಪಿಯಾಗಿದ್ದಾನೆ. ಮನೆ ಖಾಲಿ ಮಾಡುವ ಬಗ್ಗೆ ಜಗಳವಾದ ನಂತರ ಮನೆ ಮಾಲೀಕ ಲೀಲಾಬಾಯಿ ಕ್ರಿಶಕಾಂತ್ ಠಾಕೂರ್ ಇವರನ್ನು ಕೊಂದು ಮನೆಯಲ್ಲಿನ ಆಭರಣಗಳನ್ನು ದೋಚಿ ಪರಾರಿಯಾಗಿದ್ದ.

ಇದನ್ನೂ ಓದಿ: ತಲೆಗೆ ರಾಡ್​​ನಿಂದ ಹೊಡೆದು ಫೈನಾನ್ಶಿಯರ್ ಕೊಲೆ: ಪತ್ನಿಯ ಬಂಧನ

ABOUT THE AUTHOR

...view details