ಪಾಲಕ್ಕಾಡ್ (ಕೇರಳ):ವ್ಯಕ್ತಿಯೊಬ್ಬರ ಕೊಲೆ ಪ್ರಕರಣದಲ್ಲಿ ಯೆಮೆನ್ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳದ ನರ್ಸ್ಗೆ ವಿನಾಯಿತಿ ನೀಡಲು ಅಲ್ಲಿನ ಸುಪ್ರೀಂಕೋರ್ಟ್ ನಿರಾಕರಿಸಿದೆ. ಇದಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ. ಆಕೆಯ ಕುಟುಂಬಸ್ಥರು ಮುಂದಿನ ಕ್ರಮಕ್ಕೆ ಕೇಂದ್ರ ಸರ್ಕಾರದ ನೆರವು ಕೋರಿದ್ದಾರೆ. ಅಲ್ಲದೇ ಕೊನೆಯಲ್ಲಿ ಆಕೆಯನ್ನು ಕಾಣಲು ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರವನ್ನು ಕೋರಲಾಗಿದೆ. ಯೆಮೆನ್ ಸರ್ಕಾರದ ಈ ಬಗ್ಗೆ ಚರ್ಚಿಸಲು ಮನವಿ ಮಾಡಿದೆ.
ಪ್ರಕರಣದ ಹಿನ್ನೆಲೆ:ಕೇರಳನರ್ಸ್ ನಿಮಿಷಾ ಪ್ರಿಯಾ ಮತ್ತು ಅವರ ಕುಟುಂಬ ಹಲವು ವರ್ಷಗಳಿಂದ ಯೆಮೆನ್ನಲ್ಲಿದ್ದರು. ಬಳಿಕ ಕೆಲ ವರ್ಷಗಳ ಹಿಂದೆ ಪತಿ ಮತ್ತು ಮಗಳು ಭಾರತಕ್ಕೆ ಮರಳಿದ್ದರು. ಕೆಲವು ಕೆಲಸ ಕಾರಣ ನಿಮಿಷಾ ಅವರು ಅಲ್ಲಿಯೇ ಉಳಿದುಕೊಂಡಿದ್ದರು. 2015 ರಲ್ಲಿ ಯೆಮನ್ ಪ್ರಜೆ ತಲಾಲ್ ಮೆಹಾದಿ ಅವರೊಂದಿಗೆ ಕ್ಲಿನಿಕ್ ಅನ್ನು ಪ್ರಾರಂಭಿಸಿದ್ದರು. ಬಳಿಕ ಕೆಲ ವ್ಯತ್ಯಾಸದಿಂದಾಗಿ ಪಾಲುದಾರಿಕೆ ತೊರೆದಿದ್ದರು.
ಇದಾದ ಬಳಿಕ ಭಾರತಕ್ಕೆ ಹಿಂದಿರುಗಲು ಪ್ರಿಯಾ ಅವರಿಗೆ ಬೇಕಾಗಿದ್ದ ಪಾಸ್ಪೋರ್ಟ್ ಮತ್ತು ವೀಸಾವನ್ನು ಮೆಹಾದಿ ಅವರು ತಮ್ಮಲ್ಲಿ ಒತ್ತೆಯಿಟ್ಟುಕೊಂಡಿದ್ದರು. ಹೀಗಾಗಿ ಅವರು ದೇಶಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. ತಲಾಲ್ ಮೆಹಾದಿಯಿಂದ ದಾಖಲೆಗಳನ್ನು ಹಿಂಪಡೆಯುವ ಪ್ರಯತ್ನದಲ್ಲಿ ನರ್ಸ್, 2017 ರಲ್ಲಿ ನಿದ್ರಾ ಚುಚ್ಚುಮದ್ದನ್ನು ಆತನಿಗೆ ಚುಚ್ಚಿದ್ದಳು. ದುರಾದೃಷ್ಟವಶಾತ್ ಆತ ಸಾವನ್ನಪ್ಪಿದ್ದ. ಬಳಿಕ ಯಾರಿಗೂ ಗೊತ್ತಾಗದಂತೆ ಮೃತ ದೇಹವನ್ನು ವಿಲೇವಾರಿ ಮಾಡಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಳು.