ತಿರುವನಂತಪುರಂ (ಕೇರಳ):ಅದೃಷ್ಟ ಯಾವಾಗ ಒಲಿಯುತ್ತೋ ಯಾರಿಗೆ ಗೊತ್ತು. ಕಷ್ಟದ ಸಮಯಕ್ಕೆ ಹಣ ಸಿಕ್ಕರೆ ಅದಕ್ಕಿರುವ ಕಿಮ್ಮತ್ತೇ ಬೇರೆ. ಕೇರಳದ ವ್ಯಕ್ತಿ ಸಾಲ ಪಡೆದಿದ್ದ ಹಣಕ್ಕೆ ಮನೆ ಜಪ್ತಿ ಮಾಡಲು ಬ್ಯಾಂಕ್ ನೋಟಿಸ್ ನೀಡಿತ್ತು. ನೋಟಿಸ್ ಕೈ ಸೇರಿದ ಕೆಲ ಗಂಟೆಗಳಲ್ಲೇ ಅದೃಷ್ಟ ಎಂಬಂತೆ ಆತನಿಗೆ ಲಾಟರಿಯಲ್ಲಿ 70 ಲಕ್ಷ ರೂಪಾಯಿ ಹಣ ಬಂದಿದೆ.
ಈ ಕುತೂಹಲಕಾರಿ, ವಿಚಿತ್ರ ಘಟನೆ ನಡೆದಿದ್ದು, ಕೇರಳದ ಕೊಲ್ಲಂ ಜಿಲ್ಲೆಯಲ್ಲಿ. ಮೀನುಗಾರಿಕೆ ಕಸುಬು ನಡೆಸುತ್ತಿದ್ದ ವ್ಯಕ್ತಿಗೆ ಅಕ್ಟೋಬರ್ 12 ರಂದು ತಾನು ಸಾಲ ಪಡೆದ ಬ್ಯಾಂಕ್ ಹಣ ಪಾವತಿಗೆ ನೋಟಿಸ್ ನೀಡಿತ್ತು. ನಿಗದಿತ ವೇಳೆಗೆ ಸಾಲ ಮರುಪಾವತಿ ಮಾಡದಿದ್ದರೆ ಮನೆಯನ್ನು ಜಪ್ತಿ ಮಾಡುವ ಎಚ್ಚರಿಕೆ ನೀಡಿತ್ತು.
ಸಾಲದ ಸುಳಿಗೆ ಸಿಲುಕಿದ್ದ ಕುಟುಂಬ ಈಗ ಮನೆಯನ್ನು ಕಳೆದುಕೊಳ್ಳುವ ಭೀತಿಯಲ್ಲಿತ್ತು. ಮೀನುಗಾರ ವ್ಯಕ್ತಿ ಬ್ಯಾಂಕಿಂದ ನೋಟಿಸ್ ಬರುವುದಕ್ಕೂ ಮೊದಲು ರಾಜ್ಯ ಸರ್ಕಾರ ನಡೆಸುವ ಅಕ್ಷಯ ಲಾಟರಿಯಲ್ಲಿ ಟಿಕೆಟ್ ಖರೀದಿಸಿದ್ದ. ಮಧ್ಯಾಹ್ನದ ವೇಳೆಗೆ ನೋಟಿಸ್ ಮನೆಗೆ ಬಂದಿತ್ತು.