ಕರ್ನಾಟಕ

karnataka

ETV Bharat / bharat

ಚೆನ್ನೈ: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ; ಕಲಾಕ್ಷೇತ್ರ ಪ್ರಾಧ್ಯಾಪಕನ ಬಂಧನ - chennai crime news

ಕಲಾಕ್ಷೇತ್ರ ಫೌಂಡೇಶನ್​ ಪ್ರಾಧ್ಯಾಪಕನ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಾದ ಹಿನ್ನೆಲೆಯಲ್ಲಿ ಇಂದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕಲಾಕ್ಷೇತ್ರ ಪ್ರಾಧ್ಯಾಪಕನ ಬಂಧನ
ಕಲಾಕ್ಷೇತ್ರ ಪ್ರಾಧ್ಯಾಪಕನ ಬಂಧನ

By

Published : Apr 3, 2023, 11:10 AM IST

ಚೆನ್ನೈ (ತಮಿಳುನಾಡು):ಚೆನ್ನೈನ ಕಲಾಕ್ಷೇತ್ರದ ರುಕ್ಮಿಣಿ ದೇವಿ ಕಾಲೇಜ್ ಆಫ್ ಫೈನ್ ಆರ್ಟ್ಸ್‌ನ ಸಹಾಯಕ ಪ್ರಾಧ್ಯಾಪಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಪ್ರಾಧ್ಯಾಪಕನನ್ನು ಚೆನ್ನೈ ಪೊಲೀಸರು ಇಂದು ಬಂಧಿಸಿದ್ದಾರೆ. ಡ್ಯಾನ್ಸ್ ಪ್ರೊಫೆಸರ್ ಹರಿ ಪದ್ಮನ್ ವಿರುದ್ಧ ಮಾಜಿ ವಿದ್ಯಾರ್ಥಿನಿಯೊಬ್ಬರು ನೀಡಿದ ದೂರಿನ ಮೇರೆಗೆ ಅಡ್ಯಾರ್ ಪೊಲೀಸರು ಮಾರ್ಚ್ 31 ರಂದು ಪ್ರಕರಣ ದಾಖಲಿಸಿಕೊಂಡಿದ್ದರು.

ಪೊಲೀಸ್​ ಅಧಿಕಾರಿಗಳ ಪ್ರಕಾರ, ಹಳೆ ವಿದ್ಯಾರ್ಥಿನಿಯೊಬ್ಬರು ಶುಕ್ರವಾರ ಹರಿ ಪದ್ಮನ್​ ಅವರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದರು. ಆರೋಪಿ​ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಲೈಂಗಿಕ ಕಿರುಕುಳ ಮತ್ತು ಮಹಿಳಾ ಕಿರುಕುಳ ಕಾಯ್ದೆಯ ಸೆಕ್ಷನ್ 354 (ಎ), 509, 4 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಲಾಕ್ಷೇತ್ರ ಫೌಂಡೇಶನ್‌ನ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳು ಲೈಂಗಿಕ ಕಿರುಕುಳ ಆರೋಪ ಮಾಡಿದ ಕೆಲವು ದಿನಗಳ ನಂತರ ಈ ವಿಷಯ ಬಯಲಾಗಿದೆ ಎಂದು ತಿಳಿಸಿದ್ದಾರೆ.

ಕೂಡಲೇ ಪ್ರಾಧ್ಯಾಪಕರ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಕಲಾಕ್ಷೇತ್ರದ ವಿದ್ಯಾರ್ಥಿಗಳ ಸಂಘ ಪ್ರತಿಭಟನೆ ನಡೆಸಿತ್ತು. ಪ್ರಾಧ್ಯಾಪಕನ ಬಂಧನದಿಂದ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆ ಹಿಂಪಡೆದಿರುವುದಾಗಿ ಹೇಳುವ ವಿಡಿಯೋ ಬಿಡುಗಡೆ ಮಾಡಿದ್ದಾರೆ. ವಿಡಿಯೋದಲ್ಲಿ, ತಮಿಳುನಾಡು ಮಹಿಳಾ ಆಯೋಗದ ಅಧ್ಯಕ್ಷರು, ಮಾಧ್ಯಮ, ಕಾನೂನು ಮತ್ತು ಸುವ್ಯವಸ್ಥೆ ಮತ್ತು ಇತರ ಅಧಿಕೃತ ಸಂಸ್ಥೆಗಳಿಗೆ ವಿದ್ಯಾರ್ಥಿಗಳು ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೇ ಸಂಸ್ಥೆಯ ವಿದ್ಯಾರ್ಥಿ ಸಂಘವು ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ ಪತ್ರ ಬರೆದು ಸಂಸ್ಥೆಯ ನಿರ್ದೇಶಕರು ಮತ್ತು ನೃತ್ಯ ವಿಭಾಗದ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ಇದಕ್ಕೂ ಮುನ್ನ ಮಾರ್ಚ್ 31 ರಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ರಾಜ್ಯ ವಿಧಾನಸಭೆಯಲ್ಲಿ ಆರೋಪಗಳನ್ನು ದೃಢಪಡಿಸಿದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಕಲಾಕ್ಷೇತ್ರ ಪ್ರತಿಷ್ಠಾನದ ಮೇಲಿನ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ವಿಶೇಷ ಗಮನ ಸೆಳೆಯುವ ನಿರ್ಣಯಕ್ಕೆ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿದ್ದರು. ವಿರೋಧ ಪಕ್ಷದ ಶಾಸಕರಾದ ವಿಸಿಕೆಯ ಬಾಲಾಜಿ, ವಿಯುಕೆಯ ವೇಲ್ಮುರುಗನ್, ಕಾಂಗ್ರೆಸ್‌ನ ಸೆಲ್ವ ಪೆರುಂಡಗೈ ಮತ್ತು ಇತರರು ನಿರ್ಣಯ ಮಂಡಿಸಿದ್ದರು.

ಸರ್ಕಾರವು ಈ ವಿಷಯದ ಬಗ್ಗೆ ಸೂಕ್ತ ತನಿಖೆ ನಡೆಸುತ್ತಿದೆ ಮತ್ತು ಆರೋಪಗಳು ದೃಢಪಟ್ಟರೆ, ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಟಾಲಿನ್ ವಿಧಾನಸಭೆಗೆ ತಿಳಿಸಿದ್ದರು. ಈ ಹಿಂದೆ, ಮಾರ್ಚ್ 30 ರಂದು, ಪ್ರಾಧ್ಯಾಪಕರ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ನಂತರ ಕಲಾಕ್ಷೇತ್ರ ಶಿಕ್ಷಣ ಸಂಸ್ಥೆಯನ್ನು ಮುಚ್ಚಲಾಗಿತ್ತು.

ಇದನ್ನೂ ಓದಿ:ಕಲಾಕ್ಷೇತ್ರ ಶಿಕ್ಷಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ತಡರಾತ್ರಿವರೆಗೂ ವಿದ್ಯಾರ್ಥಿಗಳ ಪ್ರತಿಭಟನೆ

ABOUT THE AUTHOR

...view details