ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ನ್ಯಾಯಾಧೀಶರೊಬ್ಬರ ಹತ್ಯೆ ನಡೆದು 34 ವರ್ಷಗಳ ಬಳಿಕ ಜಮ್ಮುಕಾಶ್ಮೀರ ತನಿಖಾ ಸಂಸ್ಥೆ ಎಸ್ಐಎ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ. ಜಮ್ಮು- ಕಾಶ್ಮೀರದ ಲಿಬರೇಶನ್ ಫ್ರಂಟ್ ಸಂಸ್ಥಾಪಕ ಮಕ್ಬೂಲ್ ಭಟ್ ಅವರಿಗೆ ಮರಣದಂಡನೆ ವಿಧಿಸಿದ ನ್ಯಾಯಾಧೀಶರ ಹತ್ಯೆ ಪ್ರಕರಣದ ತನಿಖೆಯನ್ನು ಪುನಾರಂಭಿಸಿದೆ.
ಮೂರು ದಶಕಗಳ ಹಿಂದೆ ನಿವೃತ್ತ ನ್ಯಾಯಮೂರ್ತಿ ನೀಲಕಂಠ ಗಂಜೂ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಹತ್ಯೆಯ ಕ್ರಿಮಿನಲ್ ಪಿತೂರಿಯನ್ನು ಬಯಲಿಗೆಳೆಯಲು ಹಾಗೂ ಈ ಕೊಲೆ ಪ್ರಕರಣದ ಸಂಗತಿಗಳನ್ನು ಹೊರ ತರಲು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ರಾಜ್ಯ ತನಿಖಾ ಸಂಸ್ಥೆ (SIA) ಇಂದು ತನಿಖೆ ಆರಂಭಿಸಿದ್ದು, ಈ ಬಗ್ಗೆ ಗೊತ್ತಿರುವ ಸಾಕ್ಷ್ಯಗಳಿಗೆ ತಡಕಾಡುತ್ತಿದೆ. ಈ ಘಟನೆ ಬಗ್ಗೆ ಗೊತ್ತಿರುವವರು ಮಾಹಿತಿ ನೀಡಿವಂತೆ ತನಿಖಾ ಸಂಸ್ಥೆ ಮನವಿ ಮಾಡಿದೆ.
ಶ್ರೀನಗರದ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಹಾಗೂ ಕಾಶ್ಮೀರಿ ಪಂಡಿತರಾದ ನೀಲಕಾಂತ್ ಗಂಜೂ ಅವರು, 1968 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಇನ್ಸ್ಪೆಕ್ಟರ್ ಅಮರ್ ಚಂದ್ ಕೊಲೆ ಸಂಬಂಧದ ಪ್ರಕರಣದಲ್ಲಿ, JKLF ಸಂಸ್ಥಾಪಕ ಮಕ್ಬೂಲ್ ಭಟ್ ಅವರಿಗೆ ಮರಣದಂಡನೆ ವಿಧಿಸಿದ್ದರು. ಈ ಮರಣದಂಡನೆಯನ್ನು 1982 ರಲ್ಲಿ ಸುಪ್ರೀಂ ಕೋರ್ಟ್ ಸಹ ಎತ್ತಿಹಿಡಿದಿತ್ತು. ಸುಪ್ರೀಂಕೋರ್ಟ್ನ ತೀರ್ಪಿನ ಬಳಿಕ ಭಟ್ ಅವರನ್ನು ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. 9 ಫೆಬ್ರವರಿ 1984 ರಂದು ಅದೇ ಜೈಲಿನಲ್ಲಿ ಸಮಾಧಿ ಕೂಡಾ ಮಾಡಲಾಗಿತ್ತು.