ಕರ್ನಾಟಕ

karnataka

ETV Bharat / bharat

#JeeneDo: ಮಹಿಳೆಯರ ವಿರುದ್ಧ ಅಸಂಬದ್ಧ ಹೇಳಿಕೆ ಕೊಟ್ಟಿರುವ ನಾಯಕರು ಇವರೇ...

ಮಹಿಳೆಯರ ಮೇಲೆ ನಡೆಯುವ ಹಿಂಸಾಚಾರಗಳಿಗೆ ಅವರವರೇ ಹೊಣೆ ಅನ್ನುವ ದೃಷ್ಟಿಕೋನದಿಂದ ದೇಶದ ಕೆಲವು ರಾಜಕೀಯ ನಾಯಕರು ಕೊಟ್ಟಿರುವ ಹೇಳಿಕೆಗಳು ಇಲ್ಲಿವೆ. ಗೋವಾ ಸಿಎಂ ಪ್ರಮೋದ್​ ಸಾವಂತ್​ ನೀಡಿರುವ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ದೇಶಾದ್ಯಂತ #JeeneDo ಅಭಿಯಾನ ಸಹ ಶುರುವಾಗಿದೆ.

By

Published : Aug 3, 2021, 1:19 PM IST

#JeeneDo
#JeeneDo

ಗೋವಾದಲ್ಲಿ ಇಬ್ಬರು ಅಪ್ರಾಪ್ತೆಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಇತ್ತೀಚೆಗೆ ನೀಡಿದ್ದ ಆ ಒಂದು ಹೇಳಿಕೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ತಡರಾತ್ರಿಯಾದರೂ ಹುಡುಗಿಯರು ಮನೆಯಿಂದ ಬೀಚ್‌ನಲ್ಲಿರುತ್ತಾರೆ. ಮಕ್ಕಳನ್ನು ರಕ್ಷಿಸುವುದು ಪೋಷಕರ ಜವಾಬ್ದಾರಿ ಎಂದು ಹೇಳಿದ್ದರು.

ಅಂದಹಾಗೆ ಮಹಿಳೆಯರ ಬಗ್ಗೆ ಇಂಥ ಹೇಳಿಕೆ ನೀಡುವ ನಾಯಕ ಇವರೇ ಮೊದಲಿಗರಲ್ಲ. ಇಂತಹ ಹಲವಾರು ನಾಯಕರು ಹೆಣ್ಣು ಮಕ್ಕಳ ಬಗ್ಗೆ, ಅವರ ಮೇಲಾಗುವ ಅತ್ಯಾಚಾರಗಳ ಬಗ್ಗೆ ಅಸಂಬದ್ಧ ಮಾತುಗಳನ್ನಾಡಿದ್ದಾರೆ. ಆ ಕುರಿತ ಒಂದು ವರದಿ ಇಲ್ಲಿದೆ.

1. ತೀರಥ್ ಸಿಂಗ್ ರಾವತ್

ಉತ್ತರಾಖಂಡದ ತೀರಥ್ ಸಿಂಗ್ ರಾವತ್​​ ಸಿಎಂ ಆಗಿ ಜವಾಬ್ದಾರಿ ವಹಿಸಿಕೊಂಡ ಕೂಡಲೇ ಮಹಿಳೆಯರು ಧರಿಸುವ ಬಟ್ಟೆಗಳ ಬಗ್ಗೆ ಮಾತನಾಡಿದ್ದರು. ಹೆಣ್ಣುಮಕ್ಕಳು ರಿಪ್ಪಡ್​ ಜೀನ್ಸ್ (ಹರಿದ ಪ್ಯಾಂಟ್) ಬಗ್ಗೆ ಮಾತನಾಡಿ, ಮುಜುಗರಕ್ಕೀಡಾಗಿದ್ದರು. ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗೊಳಗಾದರು.

2. ಮೀನಾ ಕುಮಾರಿ

ಉತ್ತರಪ್ರದೇಶ ಮಹಿಳಾ ಆಯೋಗದ ಸದಸ್ಯೆ ಮೀನಾ ಕುಮಾರಿ, ಸಮಾಜದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅಪರಾಧಗಳ ಬಗ್ಗೆ ಸಮಾಜವೇ ಗಂಭೀರವಾಗಿರಬೇಕು. ಇಂತಹ ಸಂದರ್ಭಗಳಲ್ಲಿ ಮೊಬೈಲ್ ದೊಡ್ಡ ಸಮಸ್ಯೆಯಾಗಿದೆ. ಹುಡುಗಿಯರು ಮೊಬೈಲ್‌ನಲ್ಲಿ ಹುಡುಗರೊಂದಿಗೆ ಗಂಟೆಗಟ್ಟಲೆ ಮಾತನಾಡುತ್ತಾರೆ. ಕುಟುಂಬಸ್ಥರು ಅವರ ಮೊಬೈಲ್​ಗಳನ್ನು ಪರಿಶೀಲಿಸಲ್ಲ. ಮೊಬೈಲ್​ನಲ್ಲಿ ಮಾತನಾಡುತ್ತಾ ಅವರೊಂದಿಗೆ ಸಂಬಂಧ ಬೆಳೆಸಿ, ಅವರ ಜತೆ ಓಡಿ ಹೋಗುತ್ತಾರೆ ಎಂದಿದ್ದರು.

3. ಮುಲಾಯಂ ಸಿಂಗ್ ಯಾದವ್

ಅತ್ಯಾಚಾರ ಪ್ರಕರಣಗಳಲ್ಲಿ ಕಾನೂನು ಬದಲಾವಣೆಗಳನ್ನು ಬೆಂಬಲಿಸಿ ಮುಲಾಯಂ ಸಿಂಗ್ ಯಾದವ್ ರ್ಯಾಲಿ ನಡೆಸಿದ್ದರು. ಈ ವೇಳೆ ಮಾತನಾಡುತ್ತಾ,​ ಹುಡುಗರು-ಹುಡುಗಿಯರ ನಡುವೆ ಭಿನ್ನಾಭಿಪ್ರಾಯವಿದ್ದಾಗ ಹುಡುಗಿ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳುತ್ತಾಳೆ. ನಂತರ ಆ ಹುಡುಗನಿಗೆ ಮರಣದಂಡನೆ ವಿಧಿಸಲಾಗುತ್ತದೆ. ಅತ್ಯಾಚಾರ ಮಾಡಿದ್ದಕ್ಕಾಗಿ ಆತನನ್ನು ಗಲ್ಲಿಗೇರಿಸಲಾಗುತ್ತದೆಯೇ ಎಂದು ಕುಹಕವಾಡಿದ್ದರು.

4. ಶರದ್ ಯಾದವ್

1997 ರಲ್ಲಿ ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಚರ್ಚಿಸಬೇಕಾದರೆ ಶರದ್ ಯಾದವ್​, ಮಹಿಳಾ ಮೀಸಲಾತಿ ಅಂಗೀಕರಿಸುವ ಮೂಲಕ ಮಹಿಳೆಯರ ಸದನವನ್ನು ಮಾಡಲು ಹೊರಟಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಶರದ್ ಯಾದವ್​ ಅವರ ಈ ಹೇಳಿಕೆಗೆ ಅನೇಕ ಪ್ರತಿಭಟನೆಗಳೇ ನಡೆದವು. ಬಳಿಕ ಅವರು ಮಹಿಳೆಯರ ಕ್ಷಮೆಯಾಚಿಸಿದರು. ಅದೇ ಯಾದವ್​, 2017 ರಲ್ಲಿ ಹೆಣ್ಣಮಕ್ಕಳಿಗಿಂತ ಮತಗಳಿಗೆ ಗೌರವ ಜಾಸ್ತಿ. ಮಗಳ ಮಾನ ಹೋದರೆ, ಹೆತ್ತವರು ಹಾಗೂ ಊರಿನ ಮಾನ ಮಾತ್ರ ಹೋಗುತ್ತದೆ. ಒಮ್ಮೆ ಮತದಾನ ಮಾರಾಟವಾದ್ರೆ, ದೇಶದ ಗೌರವವೇ ಕಳೆದು ಹೋಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

5. ಕೈಲಾಶ್ ವಿಜಯವರ್ಗಿಯಾ

ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯಾ, ಮಹಿಳೆಯರು ಮಿತವಾಗಿ ಮೇಕಪ್ ಮಾಡಬೇಕು. ಕೆಲವೊಮ್ಮೆ ನೀವು ಧರಿಸುವ ಬಟ್ಟೆ, ಮಾಡುವ ಮೇಕಪ್​ ಎದುರಿಗಿರುವ ವ್ಯಕ್ತಿಯನ್ನು ಉದ್ರೇಕಗೊಳಿಸುತ್ತದೆ. ಮಹಿಳೆಯರು ಲಕ್ಷ್ಮಣ ರೇಖೆ ಹಾಕಿಕೊಳ್ಳುವುದು ಉತ್ತಮ. ಅವರು ತಮ್ಮ ವ್ಯಾಪ್ತಿ ಮೀರಿದರೆ, ರಾವಣನಂಥವರು ಸೀತೆಯಂತವರನ್ನು ಅಪಹರಿಸುತ್ತಾರೆ ಎಂದಿದ್ದರು.

6. ದಿಗ್ವಿಜಯ್ ಸಿಂಗ್

2013 ರಲ್ಲಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್​ ತಮ್ಮದೇ ಪಕ್ಷದ ಮಹಿಳಾ ಸಂಸದೆ ಮೀನಾಕ್ಷಿ ನಟರಾಜನ್ ವಿರುದ್ಧ ಅಸಂವಿಧಾನಿಕ ಪದ ಬಳಸಿದ್ದರು.

7. ಅಭಿಜಿತ್ ಮುಖರ್ಜಿ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರ ಹಾಗೂ ಕಾಂಗ್ರೆಸ್‌ನ ಮಾಜಿ ಸಂಸದ ಅಭಿಜಿತ್ ಮುಖರ್ಜಿ, ನಿರ್ಭಯಾ ಸಾಮೂಹಿಕ ಅತ್ಯಾಚಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ್ದರು. ಕೈಯಲ್ಲಿ ಮೇಣದ ಬತ್ತಿ ಹಿಡಿದು ಬೀದಿಗೆ ಬರುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ. ಪ್ರತಿಭಟನೆಯಲ್ಲಿ ಭಾಗಿಯಾಗುವ ಈ ಡೆಂಟೆಡ್-ಪೇಂಟೆಡ್ ಮಹಿಳೆಯರು ಮೊದಲು ಡಿಸ್ಕೋಗೆ ಹೋಗುತ್ತಾರೆ. ಬಳಿಕ ಇಂಡಿಯಾ ಗೇಟ್‌ಗೆ ಬಂದು ಪ್ರತಿಭಟನೆ ಮಾಡುತ್ತಾರೆ ಎಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.

8. ನರೇಶ್ ಅಗರ್ವಾಲ್

ಉತ್ತರಪ್ರದೇಶದ ಬುಡೌನ್‌ನಲ್ಲಿ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದ ನಂತರ ನರೇಶ್ ಅಗರ್ವಾಲ್ ಅಸಂಬದ್ಧ ಹೇಳಿಕೆ ನೀಡುವ ಮೂಲಕ ಸಂತ್ರಸ್ತೆಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದರು. ಅಲ್ಲದೆ, ಒಬ್ಬರ ಮನೆಯ ಪ್ರಾಣಿಯನ್ನು ಕೂಡ ಬಲವಂತವಾಗಿ ಪಡೆಯಲು ಸಾಧ್ಯವಿಲ್ಲ ಎಂದಿದ್ದರು.

9. ಅನಿಸೂರ್ ರೆಹಮಾನ್

2012 ರಲ್ಲಿ ಚುನಾವಣಾ ರ್ಯಾಲಿಯೊಂದರಲ್ಲಿ, ಸಿಪಿಐಎಂ ನಾಯಕ ಅನಿಸೂರ್ ರೆಹಮಾನ್, ಮಮತಾ ದೀದಿಗೆ ಎಷ್ಟು ಪರಿಹಾರ ಬೇಕು. ಅತ್ಯಾಚಾರಕ್ಕೆ ಅವರು ಎಷ್ಟು ಹಣ ತೆಗೆದುಕೊಳ್ಳುತ್ತಾರೆ ಎಂದು ಕೇಳಿದ್ದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅತ್ಯಾಚಾರ ಸಂತ್ರಸ್ತರಿಗೆ ಪರಿಹಾರ ಘೋಷಿಸಿದ ನಂತರ ಅವರು ಈ ಪ್ರಶ್ನೆ ಕೇಳಿ, ಬಳಿಕ ಕ್ಷಮೆಯಾಚಿಸಿದ್ದರು.

10. ಶೀಲಾ ದೀಕ್ಷಿತ್

2008 ರಲ್ಲಿ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆಯ ಕುರಿತು, ದೆಹಲಿ ಸಿಎಂ ಶೀಲಾ ದೀಕ್ಷಿತ್, ಮಹಿಳೆಯರು ಹೆಚ್ಚು ಸಾಹಸ ಮಾಡಬಾರದು. ರಾತ್ರಿ ವೇಳೆ ಹೊರಗೆ ಹೋಗುವುದು ಸುರಕ್ಷಿತವಲ್ಲ. ನಾವು ಕೆಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದಿದ್ರು. ಅಂದ ಹಾಗೆ ಸೌಮ್ಯ ವಿಶ್ವನಾಥನ್ ಅವರನ್ನು ದೆಹಲಿಯಲ್ಲಿ ಶೀಲಾ ದೀಕ್ಷಿತ್ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಹತ್ಯೆಗೈಯ್ಯಲಾಗಿತ್ತು.

11. ಮಮತಾ ಬ್ಯಾನರ್ಜಿ

ತಂದೆ-ತಾಯಿ ಮಕ್ಕಳಿಗೆ ಕೊಡುವ ಸ್ವಾತಂತ್ರ್ಯದಿಂದಾಗಿ ಅತ್ಯಾಚಾರಗಳು ನಡೆಯುತ್ತವೆ ಎಂದು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದರು.

12. ಚಿರಂಜೀತ್ ಚಕ್ರವರ್ತಿ

ಹುಡುಗಿಯರು ಚಿಕ್ಕ ಚಿಕ್ಕ ಸ್ಕರ್ಟ್​ಗಳನ್ನು ಧರಿಸುವುದರಿಂದ ಅತ್ಯಾಚಾರದಂಥ ಘಟನೆಗಳು ನಡೆಯುತ್ತವೆ ಎಂದು ಟಿಎಂಸಿ ನಾಯಕ ಚಿರಂಜೀತ್ ಚಕ್ರವರ್ತಿ ಅಭಿಪ್ರಾಯ ಪಟ್ಟಿದ್ದರು.

ಸದ್ಯ ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ನೀಡಿರುವ ಹೇಳಿಕೆ ಖಂಡಿಸಿ, ದೇಶಾದ್ಯಂತ #JeeneDo ಅಭಿಯಾನ ಶುರುವಾಗಿದೆ.

ABOUT THE AUTHOR

...view details