ಕರ್ನಾಟಕ

karnataka

ETV Bharat / bharat

‘‘ನಾಯಕತ್ವ ಭೂತಕಾಲ ವಿಮರ್ಶಿಸಬೇಕು, ವರ್ತಮಾನದಲ್ಲಿ ಬದುಕಬೇಕು.. ಭವಿಷ್ಯದ ತಿಳಿವಳಿಕೆ ಇರಬೇಕು’’.. ಬಾಬೂಜಿ ನೆನೆದ ಪವಾರ್​! - ಶರದ್ ಪವಾರ್ ನುಡಿ ನಮನ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಲೋಕಮತ್ ಗ್ರೂಪ್ ಸಂಸ್ಥಾಪಕ ಸಂಪಾದಕ, ಮಹಾರಾಷ್ಟ್ರ ಸರ್ಕಾರದಲ್ಲಿ ವಿವಿಧ ಸಚಿವ ಸ್ಥಾನಗಳನ್ನು ಅಲಂಕರಿಸಿದ್ದ ಮಾಜಿ ಸಚಿವ ಜವಾಹರಲಾಲ್ ದರ್ದಾ ಬಾಬೂಜಿ ಅವರ ಜನ್ಮ ಶತಮಾನೋತ್ಸವ ಕಳೆದ ವಾರ ಮುಕ್ತಾಯವಾಯಿತು. ದರ್ದಾ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎನ್​ಸಿಪಿ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಶರದ್ ಪವಾರ್, ಜವಾಹರಲಾಲ್ ದರ್ದಾ ಬಾಬೂಜಿ ಅವರ ಬಗ್ಗೆ ತಮ್ಮ ಒಡನಾಟದ ಬಗ್ಗೆ ವಿವರವಾಗಿ ಬರೆದಿದ್ದಾರೆ. ಶರದ್ ಪವಾರ್ ಅವರ ಮಾತಿನಲ್ಲಿಯೇ ಬಾಬೂಜಿ ಅವರ ಬಗೆಗಿನ ಯಥಾವತ್ ಬರಹ ಇಲ್ಲಿದೆ

Jawaharlal Darda: Kind-hearted and farsighted Babuji
Jawaharlal Darda: Kind-hearted and farsighted Babuji

By

Published : Jul 12, 2023, 7:17 PM IST

ಮಹಾರಾಷ್ಟ್ರದಲ್ಲಿ ಪ್ರಸ್ತುತ ಹಲವಾರು ಪ್ರಮುಖ ನಗರಗಳಿವೆ. ಕೆಲ ಜನರ ದೂರದೃಷ್ಟಿ ಮತ್ತು ಅವರ ಶ್ರಮದಿಂದಾಗಿ ನಗರಗಳು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾ ಸಾಗಿವೆ. ಮತ್ತು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿವೆ. ಮೂಲಭೂತವಾಗಿ ಪ್ರತಿ ನಗರವು ತನ್ನದೇ ಆದ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಈ ವಿಷಯದಲ್ಲಿ ನೋಡಿದರೆ ಜವಾಹರಲಾಲ್ ದರ್ದಾ ಅಲಿಯಾಸ್ ಬಾಬೂಜಿ ಯಾವುದೇ ನಗರದ ಅಭಿವೃದ್ಧಿಯನ್ನು ಯೋಜಿಸುವ ಮೊದಲು ಆ ನಗರದ ಹವಾಮಾನ, ನೀರು ಮತ್ತು ಸಂಪನ್ಮೂಲಗಳನ್ನು ಪರಿಗಣಿಸಬೇಕು ಎಂಬುದನ್ನು ಚೆನ್ನಾಗಿ ತಿಳಿದಿದ್ದರು. ಅವರ ತಿಳಿವಳಿಕೆ ನಗರಕ್ಕೆ ಸೀಮಿತವಾಗದೇ ಇಡೀ ರಾಜ್ಯಕ್ಕೆ ವಿಸ್ತರಿಸಿತು. ವಾಸ್ತವವಾಗಿ ಅವರ ದೃಷ್ಟಿಕೋನ ತುಂಬಾ ವಿಶಾಲವಾಗಿತ್ತು.

ನಾಗ್ಪುರದ ಬಳಿಯ ಬುಟಿಬೋರಿ ಕೈಗಾರಿಕಾ ವಸಾಹತು ಬಾಬೂಜಿ ಅವರು ಕೈಗಾರಿಕಾ ಸಚಿವರಾಗಿದ್ದ ಅವಧಿಯಲ್ಲಿ ಸ್ಥಾಪಿಸಲಾಗಿತ್ತು ಎಂಬುದನ್ನು ನಾನು ಆಗಾಗ ಹೇಳುತ್ತಿರುತ್ತೇನೆ. ಅವರ ಅಧಿಕಾರಾವಧಿಯಲ್ಲಿಯೇ ನಾಸಿಕ್ ಮತ್ತು ಸಂಭಾಜಿನಗರ ಪಟ್ಟಣಗಳು ಕೈಗಾರಿಕೀಕರಣಗೊಳ್ಳಲು ಪ್ರಾರಂಭಿಸಿದವು. ಇಂದು ಸಂಭಾಜಿನಗರದ ಕೈಗಾರಿಕಾ ವಸಾಹತುಗಳಿಗೆ ಬರುತ್ತಿರುವ ನೂರಾರು ಕೈಗಾರಿಕೆಗಳಿಗೆ ತಳಪಾಯ ಹಾಕಿದವರು ಬಾಬೂಜಿ ಎಂಬುದನ್ನು ಇಂದಿನ ಪೀಳಿಗೆಗೆ ತಿಳಿಸುವುದು ಅಗತ್ಯವಾಗಿದೆ. ನಾಯಕತ್ವವು ಭೂತಕಾಲವನ್ನು ವಿಮರ್ಶಿಸಬೇಕು, ವರ್ತಮಾನದಲ್ಲಿ ಬದುಕಬೇಕು ಮತ್ತು ಭವಿಷ್ಯದ ಬಗ್ಗೆ ತಿಳಿವಳಿಕೆಯನ್ನು ಹೊಂದಿರಬೇಕು. ಬಾಬೂಜಿಗೆ ಈ ಸಾಮರ್ಥ್ಯವಿತ್ತು. ಅದಕ್ಕಾಗಿಯೇ ಅವರು ಕೆಲವು ನಗರಗಳ ಭವಿಷ್ಯವನ್ನು ಬದಲಾಯಿಸುವಂಥ ನಿರ್ಧಾರಗಳನ್ನು ತೆಗೆದುಕೊಂಡರು. ಆಗಿನ ಕಾಲವು ತುಂಬಾ ವಿಭಿನ್ನವಾಗಿತ್ತು.

ಬಾಬೂಜಿ ಅವರು ರಾಜ್ಯ ರಾಜಕಾರಣದಲ್ಲಿದ್ದಾಗ ಮಹಾರಾಷ್ಟ್ರ ಕಾಂಗ್ರೆಸ್‌ನಲ್ಲಿ ಹಲವಾರು ನಾಯಕರಿದ್ದರು. ವಸಂತರಾವ್ ನಾಯಕ್, ಸುಧಾಕರರಾವ್ ನಾಯಕ್, ಬ್ಯಾರಿಸ್ಟರ್ ಎ ಆರ್ ಅಂತುಲೆ, ವಿಲಾಸರಾವ್ ದೇಶಮುಖ್, ಮತ್ತು ಸುಶೀಲ್ ಕುಮಾರ್ ಶಿಂಧೆ ಸೇರಿದಂತೆ ಹಲವು ಹೆಸರುಗಳನ್ನು ಪಟ್ಟಿ ಮಾಡಬಹುದು. ಆದಾಗ್ಯೂ, ಜವಾಹರಲಾಲ್ ಜಿ ಅವರೆಲ್ಲರೊಂದಿಗೆ ಚೆನ್ನಾಗಿ ಬೆರೆಯುತ್ತಿದ್ದರು ಮತ್ತು ಯಾವುದೇ ಭಿನ್ನಾಭಿಪ್ರಾಯಗಳಿದ್ದರೆ ಪರಿಹರಿಸಲು ಪ್ರಯತ್ನಿಸುತ್ತಿದ್ದರು.

ಅವರ ಮನೋಧರ್ಮ, ಕಾರ್ಯಶೈಲಿ ಮತ್ತು ಸಂಪೂರ್ಣ ವ್ಯಕ್ತಿತ್ವಗಳ ಕಾರಣದಿಂದ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಅವರ ಮಾತುಗಳಿಗೆ ಹೆಚ್ಚಿನ ಮೌಲ್ಯವಿತ್ತು. ಹೀಗಾಗಿ ಯಾರೂ ಅವರ ಮಾತನ್ನು ಕಡೆಗಣಿಸುತ್ತಿರಲಿಲ್ಲ. ರಾಜಕೀಯದಲ್ಲಿ ಇಂಥವರು ಇರುವುದು ಬಹಳ ಅಪರೂಪ. ಎದುರಾಳಿಗಳೊಂದಿಗೂ ಸಂವಹನ ನಡೆಸುವ ಅವರ ಶೈಲಿ ತುಂಬಾ ಭಿನ್ನವಾಗಿತ್ತು. ವ್ಯಕ್ತಿಗಳಿಗಿಂತ ಹೆಚ್ಚಾಗಿ, ಆಲೋಚನೆಗಳು ಕೇಂದ್ರಸ್ಥಾನದಲ್ಲಿದ್ದರೆ, ರಾಜಕೀಯದ ದೃಷ್ಟಿಕೋನಗಳು ವಿಶಾಲವಾಗುತ್ತವೆ. ಬಾಬೂಜಿಯ ಬಗ್ಗೆ ಮಾತನಾಡುವಾಗ, ನಾನು ಇದನ್ನು ವಿಶೇಷವಾಗಿ ಹೇಳಲು ಬಯಸುತ್ತೇನೆ.

ಜವಾಹರಲಾಲ್ ಜೀ ಅವರು ನನಗಿಂತ ಹಿರಿಯರಾಗಿದ್ದರು. ಆದರೆ ತಾವು ಎಲ್ಲರಿಗಿಂತ ಹಿರಿಯರೆಂಬ ಭಾವನೆ ಅವರಿಗೆ ಇರಲಿಲ್ಲ. ನಮ್ಮ ನಡುವಿನ ಸಂಬಂಧ ತುಂಬಾ ನಿಕಟ ಮತ್ತು ಸೌಹಾರ್ದಯುತವಾಗಿತ್ತು. ಯುವ ಪೀಳಿಗೆಯೊಂದಿಗೆ ಅವರದೇ ಧಾಟಿಯಲ್ಲಿ ಸಂವಾದ ನಡೆಸುವ ನಾಯಕರು ಬಹಳ ಕಡಿಮೆ. ಆದರೆ, ಬಾಬೂಜಿ ನಮ್ಮೊಂದಿಗೆ ಸಂವಹನ ನಡೆಸುತ್ತಿದ್ದರು ಮತ್ತು ಹೊಸ ಪೀಳಿಗೆಗೆ ಅವಕಾಶ ಕಲ್ಪಿಸುತ್ತಿದ್ದರು. ಹಾಗಾಗಿ ಅವರು ಎರಡು ತಲೆಮಾರುಗಳ ನಡುವಿನ ಸೇತುವೆಯಂತೆ ಎಂಬುದು ನನ್ನ ಭಾವನೆ.

ದಿವಂಗತ ಯಶವಂತರಾವ್ ಚವ್ಹಾಣ್ ನನ್ನ ರಾಜಕೀಯ ಮಾರ್ಗದರ್ಶಕರಾಗಿದ್ದರೂ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದ ಅನೇಕ ಜನರಿಂದ ನಾನು ಕೆಲ ಹೊಸ ವಿಷಯಗಳನ್ನು ಕಲಿತಿದ್ದೇನೆ. ಅವರಲ್ಲಿ ಜವಾಹರಲಾಲ್ ಅವರ ಹೆಸರು ಅಗ್ರಗಣ್ಯವಾಗಿದೆ. ಅವರು ನಿರಂತರವಾಗಿ ನನಗೆ ಸರಿಯಾದ ಮಾರ್ಗ ತೋರಿಸಿದರು. ಕೆಲವೊಮ್ಮೆ ಮಾರ್ಗದರ್ಶಿಯಾಗಿ, ಕೆಲವೊಮ್ಮೆ ಸ್ನೇಹಿತನಂತೆ. ರಾಜಕೀಯದಲ್ಲಿ ಸಕಾರಾತ್ಮಕತೆ ಬಹಳ ಮುಖ್ಯ. ಇದಕ್ಕಾಗಿ, ನೀವು ಮನುಷ್ಯರಾಗಿ ಉದಾತ್ತವಾಗಿರಬೇಕು. ಬಾಬೂಜಿ ಈ ಗುಣಗಳನ್ನು ಹೊಂದಿದ್ದರು. ಮಾನವೀಯ ಸಂಬಂಧಗಳು ಭಿನ್ನಾಭಿಪ್ರಾಯಗಳನ್ನು ಮೀರಿದವು ಎಂದು ಅವರು ನಂಬಿದ್ದರು.

ಅವರ ಇನ್ನೊಂದು ವೈಶಿಷ್ಟ್ಯವನ್ನು ಉಲ್ಲೇಖಿಸುವುದು ಯೋಗ್ಯವಾಗಿದೆ. ಅವರು ವಯಸ್ಸಿನಲ್ಲಿ, ಸಾಧನೆಯಲ್ಲಿ ಹಿರಿಯರು; ಆದರೆ ಅವರು ಯಾವತ್ತೂ ತಾವು ದೊಡ್ಡವರೆಂದು ಬೀಗಲಿಲ್ಲ. ನನ್ನ ಕ್ಯಾಬಿನೆಟ್‌ನಲ್ಲಿ ಕೆಲಸ ಮಾಡುವಾಗ, ಸಭೆಗಳ ಸಮಯದಲ್ಲಿ ತಮ್ಮ ಮನಸ್ಸಿನಲ್ಲಿರುವ ವಿಚಾರಗಳ ಬಗ್ಗೆ ನನ್ನನ್ನು ಮತ್ತು ಇತರ ಸಹೋದ್ಯೋಗಿಗಳನ್ನು ಆಗಾಗ್ಗೆ ಕೇಳುತ್ತಿದ್ದರು. ಆಲೋಚನೆಗಳು ಹೆಚ್ಚು ಪರಿಪೂರ್ಣ ರೂಪದಲ್ಲಿ ಜನರನ್ನು ತಲುಪಬೇಕು ಎಂಬುದು ಇದರ ಹಿಂದಿನ ಉದ್ದೇಶವಾಗಿತ್ತು.

ಅವರು ನನ್ನ ಸಂಪುಟದಲ್ಲಿ ಸಚಿವರಾಗಿದ್ದಾಗ ನಾವು ನಿಕಟ ಸಂಬಂಧ ಹೊಂದಿದ್ದೆವು. ಅಲ್ಲದೇ ಅವರು ಹಿಂದಿನ ಮುಖ್ಯಮಂತ್ರಿಗಳು ಮತ್ತು ಹಲವು ಪ್ರಮುಖ ಇಲಾಖೆಗಳ ಸಚಿವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಜವಾಹರಲಾಲ್ ದರ್ದಾ ಅವರ ಹೆಸರು ಸಮಾಜ ಸೇವಕ, ರಾಜಕಾರಣಿ, ಪತ್ರಿಕೆ ಸಂಸ್ಥಾಪಕ, ದಾರ್ಶನಿಕ ನಾಯಕ ಮತ್ತು ಸಹೃದಯ ವ್ಯಕ್ತಿಯಾಗಿ ಇತಿಹಾಸದಲ್ಲಿ ಖಂಡಿತವಾಗಿಯೂ ದಾಖಲಾಗುತ್ತದೆ.

-ಶರದ್ ಪವಾರ್

(ಲೇಖಕರು ರಾಜ್ಯಸಭಾ ಸದಸ್ಯರು ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು)

ABOUT THE AUTHOR

...view details